ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನ ಜಾಗೃತಿ ಅಗತ್ಯ: ಸಿಇಒ
ಶಿರ್ವ, ಆ.28: ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿಗೆ ಬಂದರೂ ಸಹ ಅದರ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್ ಹಾಗೂ ಅದರ ಉತ್ಪನ್ನಗಳು ಪರಿಸರದ ಮೇಲೆ ಮಾರಕ ಪರಿಣಾಮಗಳನ್ನು ಬೀರಿದ್ದು, ಪ್ಲಾಸ್ಟಿಕ್ಚೀಲ ಹಾಗೂ ಲೋಟ ಪ್ಲೇಟ್ ಮತ್ತಿತರ ಪರಿಕರಗಳ ಬಳಕೆಯ ನಿಷೇಧದ ಬಗ್ಗೆ ಜನ ಜಾಗೃತಿ ಅಗತ್ಯವಿದೆ. ಜಿಲ್ಲಾಡಳಿತಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಬಹುದೊಡ್ಡ ಸವಾಲಾಗಿದೆ ಎಂದು ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ. ಶಿರ್ವ ರೋಟರಿ ಕ್ಲಬ್ ಹಾಗೂ ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಹಭಾಗಿತ್ವದಲ್ಲಿ ಬಂಟಕಲ್ಲು ರೋಟರಿ ಸಭಾಭವನದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ಆರು ದಿನಗಳ ಕಾಲ ಹಮ್ಮಿಕೊಳ್ಳಲಾದ ಪ್ಲಾಸ್ಟಿಕ್ ಮುಕ್ತ ಗೃಹಉತ್ಪನ್ನಗಳ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಯಾರಿಸಿದ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲಾಡಳಿತದ ವತಿಯಿಂದ 60 ಗ್ರಾಪಂಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಆಸಕ್ತ 209 ನಿರುದ್ಯೋಗಿಗಳಿಗೆ ಪೇಪರ್ ಮತ್ತು ಬಟ್ಟೆಚೀಲ ತಯಾರಿಕಾ ತರಬೇತಿ ನೀಡಲಾಗಿದೆ. ಗ್ರಾಪಂ ಮೂಲಕ ಆ ವ್ಯಾಪ್ತಿಯ ದೇವಾಲಯ, ಚರ್ಚ್, ಇನ್ನಿತರ ಧಾರ್ಮಿಕ ಕೇಂದ್ರಗಳು, ಅಂಗಡಿ ಮಾಲಕರನ್ನು ಭೆೇಟಿ ಮಾಡಿ ಪ್ಲಾಸ್ಟಿಕ್ ಚೀಲಗಳ ಬದಲು ಬಟ್ಟೆಚೀಲ, ಪೇಪರ್ ಚೀಲಗಳ ಬಳಕೆಗೆ ಮನವಿ ಮಾಡಲಾಗಿದ್ದು, ಸ್ತ್ರೀಶಕ್ತಿ, ಸ್ವಯಂಸೇವಾ ಸಂಘಟನೆಗಳು, ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಪ್ಲಾಸ್ಟಿಕ್ ನಿಷೇಧ ಸಾಧ್ಯ ಎಂದರು. ಶಿರ್ವ ರೋಟರಿ ಅಧ್ಯಕ್ಷ ಡಾ.ಅರುಣ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು., ಮುಖ್ಯ ಅತಿಥಿಗಳಾಗಿ ಉಡುಪಿ ಲೀಡ್ ಬ್ಯಾಂಕ್ ಪ್ರಬಂಧಕ ಫ್ರಾನ್ಸಿಸ್ ಬೋರ್ಗಿಯಾ, ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಸಂತೋಷ್, ರೋಟರಿ ವಲಯ ಸಹಾಯಕ ಗವರ್ನರ್ ಡಾ.ಗುರುರಾಜ್, ಶಿರ್ವ ಗ್ರಾಪಂ ಪಿಡಿಒ ಮಮತಾ ವೈ. ಶೆಟ್ಟಿ ಉಪಸ್ಥಿತರಿದ್ದರು. ಶಿರ್ವ ಗ್ರಾಪಂ ಅಧ್ಯಕ್ಷೆ ಹಾಗೂ ಶಿಬಿರಾರ್ಥಿ ವಾರಿಜಾ ಪೂಜಾರಿ, ಡೀನಾ ಕುಟಿನ್ಹೊ, ಪಾರ್ವತಿ, ಅಮಿತಾ, ವಿಮಲಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನೀನಾ ಶೆಟ್ಟಿ, ಶ್ರೇಯಾ, ನವ್ಯಾ ಭಾಗವಹಿಸಿದ್ದರು. ಶಿಕ್ಷಕಿ ಶ್ರೇಯಾ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಕೆ.ಆರ್. ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.