ದಿನವಹಿ ಮಾರುಕಟ್ಟೆ ನಗರಸಭೆಯ ನೆಲ ಅಂತಸ್ತಿನಲ್ಲೇ ಆಗಬೇಕು: ಪುತ್ತೂರು ನಗರ ಕಾಂಗ್ರೆಸ್ ಒತ್ತಾಯ
ಪುತ್ತೂರು, ಆ.31: ದಿನವಹಿ ಮಾರುಕಟ್ಟೆಗಾಗಿಯೇ 2004ರಲ್ಲಿ ಎಡಿಬಿ ಯೋಜನೆಯಲ್ಲಿ ಟೆಂಡರ್ ಕರೆದು ಮಾರುಕಟ್ಟೆ-ಕಚೇರಿ ಸಂಕಿರ್ಣವನ್ನು ನಿರ್ಮಿಸಲಾಗಿರುಮದರಿಂದ ಈಗಿನ ನಗರಸಭಾ ಕಟ್ಟಡದ ನೆಲ ಅಂತಸ್ತಿನಲ್ಲಿಯೇ ದಿನವಹಿ ಮಾರುಕಟ್ಟೆ ಆಗಬೇಕು. ಸಂಬಂಧಪಟ್ಟವರು ಕೂಡಲೇ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಆಗ್ರಹಿಸಿದ್ದಾರೆ.
ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದ ಸಂತೆ ಸ್ಥಳಾಂತರಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಈಗಿನ ನಗರಸಭೆಯ ನೆಲ ಅಂತಸ್ತನ್ನು ದಿನವಹಿ ಮಾರುಕಟ್ಟೆಗಾಗಿಯೇ ನಿರ್ಮಿಸಲಾಗಿರುವುದರಿಂದ ಅಲ್ಲಿ ದಿನವಹಿ ಮಾರುಕಟ್ಟೆ ಆರಂಭಿಸುವ ಜವಾಬ್ದಾರಿ ನಗರಸಭೆಯದ್ದಾಗಿದೆ. ಆದರೆ ನಗರಸಭಾಡಳಿತ ಈ ವಿಚಾರದಲ್ಲಿ ನುಣುಚಿಕೊಳ್ಳುವಂತಿಲ್ಲ ಎಂದರು.
ಆಡಳಿತ ಕಾಂಗ್ರೆಸಿನದ್ದಾದರೂ ನಗರಸಭೆಯಲ್ಲಿ ಬಿಜೆಪಿಯವರು ಬಹುಮತ ಹೊಂದಿದ್ದಾರೆ. ಹೀಗಿರುವಾಗ ಸಂತೆ ಸ್ಥಳಾಂತರ ವಿಚಾರದಲ್ಲಿ ನಡೆದ ನಗರಸಭೆಯ ವಿಶೇಷ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ ಸುಮ್ಮನಿರುವ ಬದಲು ಮತಕ್ಕೆ ಹಾಕಿ ನಿರ್ಣಯ ಅಂಗೀಕರಿಸುವ ಅವಕಾಶ ಬಿಜೆಪಿ ಸದಸ್ಯರಿಗೆ ಇತ್ತಲ್ಲವೇ ಎಂದು ಪ್ರಶ್ನಿಸಿದ ಅವರು ದಿನವಹಿ ಮಾರುಕಟ್ಟೆ ವಿಚಾರದಲ್ಲಿ ಯಾರೂ ತಮ್ಮ ಜವಾಬ್ದಾರಿಯನ್ನು ತೋರಿಲ್ಲ ಎಂದು ಅವರು ಆರೋಪಿಸಿದರು.
ವಾರದ ಸಂತೆ ಸ್ಥಳಾಂತರ ಉಪವಿಭಾಗಾಧಿಕಾರಿಗಳ ಆದೇಶವಾಗಿದ್ದರೂ ದಿನವಹಿ ಸಂತೆ ವ್ಯಾಪಾರದ ವಿಚಾರದಲ್ಲಿ ನಿರ್ಣಯ ಕೈಗೊಂಡು ಉಪವಿಭಾಗಾಧಿಕಾರಿಗಳಿಗೆ ಮನವರಿಕೆ ಮಾಡುವುದರಲ್ಲಿ ಕಾನೂನು ಉಲ್ಲಂಘನೆ ಏನಿದೆ ಎಂದು ಪ್ರಶ್ನಿಸಿದ ಅವರು, ದಿನವಹಿ ಮಾರುಕಟ್ಟೆಯನ್ನು ಅದಕ್ಕೆಂದೇ ನಿರ್ಮಿಸಲಾಗಿದ್ದ ಈಗಿನ ನಗರಸಭೆಯ ಕೆಳ ಅಂತಸ್ತಿನಲ್ಲಿ ಮಾಡುವ ಜವಾಬ್ದಾರಿ ನಗರಸಭೆಗೆ ಇರುವುದರಿಂದ ಅದನ್ನು ಮಾಡಲೇಬೇಕು ಎಂದು ಆಗ್ರಹಿಸಿದರು.
ನಗರಸಭೆಯ ಕೆಳ ಅಂತಸ್ತಿನಲ್ಲಿ ದಿನವಹಿ ಮಾರುಕಟ್ಟೆಯನ್ನು ಕೂಡಲೇ ಆರಂಭಿಸಿ ಸಂತೆ ವಿಚಾರದಲ್ಲಿನ ಗೊಂದಲಕ್ಕೆ ತೆರೆ ಎಳೆಯುವಂತೆ ಪುತ್ತೂರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದರು. ತಾನು ಪುರಸಭಾ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಎಡಿಬಿ ಯೋಜನೆಯಡಿ ಟೆಂಡರ್ ಕರೆದು ನಿರ್ಮಿಸಲಾಗಿದ್ದ ಮಾರುಕಟ್ಟೆ ಸಂಕಿರ್ಣದಲ್ಲಿ (ಈಗಿನ ನಗರಸಭೆಯ ನೆಲ ಅಂತಸ್ತು) 24 ದಿನವಹಿ ಅಂಗಡಿಗಳಿಗೆ ಅವಕಾಶ ಇರುವಂತೆ ರಚಿಸಲಾಗಿತ್ತು. ಆದರೆ ಇದೀಗ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದ ಅವರು ನಗರಸಭೆಯ ನೆಲ ಅಂತಸ್ತನ್ನು ಪೂರ್ತಿಯಾಗಿ ದಿನವಹಿ ಮಾರುಕಟ್ಟೆಗೆ ಮೀಸಲಿಟ್ಟು, ಕೂಡಲೇ ಮಾರುಕಟ್ಟೆ ಆರಂಭಿಸಬೇಕು ಎಂದು ಆಗ್ರಹಿಸಿದರು. ಸಂಬಂಧಪಟ್ಟವರ ಸ್ಪಂದನೆ ಸಿಗದಿದ್ದಲ್ಲಿ ಕಾಂಗ್ರೆಸ್ ಪಕ್ಷದ ನೆಲೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪುತ್ತೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎ.ಅಬ್ದುರ್ರಹ್ಮಾನ್ ಬಪ್ಪಳಿಗೆ, ಪುರಸಭಾ ಮಾಜಿ ಸದಸ್ಯ ಇಸಾಕ್ ಸಾಲ್ಮರ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡೋಲ್ಪಿ ಎ. ರೇಗೋ, ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿಲ್ಮಾ ಗೋನ್ಸಾಲ್ವೀಸ್, ಪುರಸಭಾ ಮಾಜಿ ಅಧ್ಯಕ್ಷ ಗಣೇಶ್ ರಾವ್, ಕಾಂಗ್ರೆಸ್ ಸೇವಾದಳದ ತಾಲೂಕು ಸಂಚಾಲಕ ಜೋಕಿಂ ಡಿಸೋಜ ಚಂದ್ರಶೇಖರ್ ಪಡೀಲು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.