ಮಹಾರಾಷ್ಟ್ರದ ಕಾರ್ಮಿಕ ನೇತಾರ, ದ.ಕ.ಮೂಲದ ಶರದ್ ರಾವ್ ನಿಧನ
ಮುಂಬೈ, ಸೆ.1: ಮಹಾರಾಷ್ಟ್ರದ ಕಾರ್ಮಿಕ ನಾಯಕ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ-ಕಣ್ಣೂರು ಅಲ್ಲಿನ ಶರದ್ ರಾವ್ (76) ಇಂದಿಲ್ಲಿ ಅನಾರೋಗ್ಯದಿಂದ ನಿಧನರಾದರು.
ಮಹಾರಾಷ್ಟ್ರ ರಾಜ್ಯದ ಕಾರ್ಮಿಕ ನಾಯಕರಾಗಿದ್ದ ಶರದ್ ರಾವ್ ಮುಂಬೈನ ಬಿಇಎಸ್ಟಿ (ಬೃಹನ್ಮುಂಬಯಿ ಇಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್ಫೋರ್ಟ್) ಟ್ಯಾಕ್ಸಿ, ಆಟೊ ಹಾಗೂ ಅನೇಕ ಕಾರ್ಮಿಕ ಸಂಘಟನೆಗಳ ಯೂನಿಯನ್ಗಳ ಸಕ್ರಿಯ ನಾಯಕರಾಗಿದ್ದರು. 1957-1967ರ ತನಕ ಹಿಂದೂಸ್ಥಾನ್ ಲಿವರ್ ಲಿಮಿಟೆಡ್ನಲ್ಲಿ ಯೂನಿಯನ್, ನಂತರ ಟ್ರೇಡ್ ಯೂನಿಯನ್ ಮೂವ್ಮೆಂಟ್, 1970ರಲ್ಲಿ ಬಾಂಬೇ ಗುಮಾಸ್ತ ಯೂನಿಯನ್, ಸೇವ್ ಆಕ್ಟ್ರಾಯ್ ಚಳುವಳಿಯ ಮುಂಚೂಣಿ ವಹಿಸಿದ್ದರು.
1978ನಲ್ಲಿ ಬಿಎಂಸಿ (ಬೃಹನ್ಮುಂಬಯಿ ಮಹಾನಗರ ಪಾಲಿಕೆ) ಯಲ್ಲಿ ನಗರ ಸೇವಕರಾಗಿ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. ಬಾಂಬೆ ಪೋರ್ಟ್ ಟ್ರಸ್ಟ್ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಗೋರೆಗಾಂವ್ ಪಶ್ಚಿಮದ ಬಂಗೂರು ನಗರದಲ್ಲಿ ವಾಸವಾಗಿದ್ದ ರಾವ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ-ಎನ್ಸಿಪಿ)ಯಿಂದ ಮಹಾರಾಷ್ಟ್ರ ರಾಜ್ಯದ ವಿಧಾನ ಸಭಾ ಚುನಾವಣೆಗೆ 2005 ಮತ್ತು 2009ರಲ್ಲಿ ಗೋರೆಗಾಂವ್ ಪಶ್ಚಿಮದ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಶರದ್ ಅವರು ಪತ್ನಿ ಶಾಂತಾ ರಾವ್, ಪುತ್ರ ಶಶಾಂಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೆನಡಾದಲ್ಲಿರುವ ಪುತ್ರಿಯು ಆಗಮಿಸಿದ ಬಳಿಕ ಅಂತ್ಯಕ್ರಿಯೆಯು ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ವರದಿ : ರೋನ್ಸ್ ಬಂಟ್ವಾಳ್