ಕರಾಯ ಮಸೀದಿಯ ಸೊತ್ತು ಧ್ವಂಸ ಪ್ರಕರಣ: ಆರೋಪಿಗಳಿಗೆ ಜಾಮೀನು
ಉಪ್ಪಿನಂಗಡಿ, ಸೆ.2: ಕರಾಯ ಬದ್ರಿಯಾ ಜುಮಾ ಮಸೀದಿಗೆ ಅಕ್ರಮ ಪ್ರವೇಶಗೈದು ಮಸೀದಿಯ ಸೊತ್ತುಗಳನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
2015ರ ಜ.16ರಂದು ಪುತ್ತೂರಿನಲ್ಲಿ ನಡೆದ ಹಿಂದೂ ಹೃದಯ ಸಂಗಮ ಕಾರ್ಯಕ್ರಮಕ್ಕೆ ಹೋಗಿ ಬಂದ ಸುಮಾರು 200 ಜನರಿದ್ದ ತಂಡವೊಂದು ಮಸೀದಿ ಯೊಳಗೆ ಅಕ್ರಮ ಪ್ರವೇಶ ಮಾಡಿ ಕಿಟಕಿ, ಬಾಗಿಲು ಹಾಗೂ ಪೀಠೋ ಪಕರಣಗಳನ್ನು ಧ್ವಂಸಗೈದಿದೆ ಎಂದು ಆರೋಪಿಸಿ ಮಸೀದಿಯ ಅಧ್ಯಕ್ಷ, ಪೆದಮಲೆಯ ಮುಹಮ್ಮದ್ ಅಶ್ರಫ್ ಕೆ.ಎ. ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳಾದ ಪಾಡೆಂಕಿಯ ಅಶೋಕ, ಕುಮೇರುಜಾಲುವಿನ ತಿಮ್ಮಪ್ಪಗೌಡ, ಎಂಜಿಲಪಲ್ಕೆಯ ಶ್ರೀಕಾಂತ, ಕಾಂಚನದ ಮಹೇಶ, ಉಮೇಶ, ಎಲ್ನಾಡಿಯ ರಾಜೇಶ, ಪಾಲೇರಿಯ ರಘುನಾಥ, ಅಂಬರ್ಜೆಯ ಉಮೇಶ, ಬಜತ್ತೂರು ನೆಕ್ಕರೆಯ ಕಿಶನ್, ವಳಾಲು ಎಂಜಿರಡ್ಕದ ಸುನೀಲ್ ಪೂಜಾರಿ, 34ನೆ ನೆಕ್ಕಿಲಾಡಿಯ ಸುಭಾಷ್ ನಗರದ ಲೋಹೀತ್ ಪೂಜಾರಿ, ಮಲೆತ್ತಾಯರೋಡಿಯ ಹರೀಶ್ ಪುಜಾರಿ, ಕಿಶೋರ್ ಕುಮಾರ್, ಹರೀಶ್ ಕುಲಾಲ್, ಹರೀಶ್ ನಾಯ್ಕ, ಬಜತ್ತೂರಿನ ಅಕ್ಷತ್ ಗೌಡ, ನಾಯಿಲದ ಗುರುರಾಜ ಪೂಜಾರಿ, ಸಣ್ಣಂಪಾಡಿಯ ಚೇತನ್ ನಾಯ್ಕ, ಆಲಂತಾಯದ ಸುಮಿತ್ ಪಿ.ಎಸ್. ಗೌಡ, ನುರಿಯೇಳುವಿನ ನಾಗಪ್ರಸಾದ್ ಎಂ., ಗೋಳಿತೊಟ್ಟು ಗ್ರಾಮದ ಶಾಂತಿನಗರದ ತಾರನಾಥ್ ಗೌಡ, ಕಾಂಚನದ ಜಗದೀಶ್ ಗೌಡ ಇವರುಗಳಿಗೆ ಜಾಮೀನು ಲಭಿಸಿದೆ.