ಖ್ಯಾತ ಸಾಹಿತಿ, ಚಿತ್ರಕಲಾವಿದ, ಚಿತ್ರ ನಿರ್ದೇಶಕ ಆರ್ಯ ನಿಧನ
ಉಡುಪಿ, ಸೆ.30: ಕನ್ನಡದ ಖ್ಯಾತ ಸಾಹಿತಿ, ಚಿತ್ರ ಕಲಾವಿದ ಹಾಗೂ ಚಿತ್ರ ನಿರ್ದೇಶಕರಾಗಿದ್ದ, ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಮಠಾಧೀಶರಾಗಿದ್ದು ಬಳಿಕ ಸನ್ಯಾಸತ್ವವನ್ನು ತೊರೆದು ಗೃಹಸ್ಥಾಶ್ರಮ ಸ್ವೀಕರಿಸಿದ್ದ ಆರ್ಯ ಆಚಾರ್ಯ ಪಿ.ಆರ್. ಅವರು ಇಂದು ಬೆಳಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 71 ವರ್ಷ ಪ್ರಾಯವಾಗಿತ್ತು. ಸನ್ಯಾಸತ್ವವನ್ನು ತ್ಯಜಿಸಿದ ಬಳಿಕ ಧಾರವಾಡದಲ್ಲಿ ನೆಲೆಸಿದ್ದ ಅವರು ಕಳೆದ ಆ.19ರಂದು ಧಾರವಾಡದಲ್ಲಿ ಅವರು ಚಲಾಯಿಸುತಿದ್ದ ಸ್ಕೂಟರ್ ಅಫಘಾತ ಕೊಳ್ಳಗಾಗಿ ಅವರು ಗಾಯಗೊಂಡಿದ್ದರು. ಆ.25ರಂದು ಅವರನ್ನು ಕರೆತಂದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ತೀರಿಕೊಂಡರು.
ಶೀರೂರು ಮಠದ ಈಗಿನ ಮಠಾಧೀಶರಾಗಿರುವ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರರಾಗಿರುವ ಆರ್ಯ ಆಚಾರ್ಯ ಅವರು 1945ರಲ್ಲಿ ಉಡುಪಿಯಲ್ಲಿ ಪಿ.ವಿಠಲಾಚಾರ್ಯ ಹಾಗೂ ರುಕ್ಮಿಣಿ ದಂಪತಿಗಳ ಪುತ್ರರಾಗಿ ಜನಿಸಿದ್ದರು. ಎಸ್ಸೆಸೆಲ್ಸಿಯವರೆಗಿನ ಶಿಕ್ಷಣವನ್ನು ಉಡುಪಿ ಬೋರ್ಡ್ ಹೈಸ್ಕೂಲ್ನಲ್ಲಿ ಮುಗಿಸಿದ ಅವರು ಧಾರವಾಡ ವಿವಿಯಿಂದ ಬಿ.ಎ. ಹಾಗೂ ಎಂ.ಎ.(ಸಂಸ್ಕೃತ) ಪದವಿ ಪಡೆದಿದ್ದರು. ಅಲ್ಲದೇ ಹಿಂದಿ ರತ್ನ ಪರೀಕ್ಷೆಯಲ್ಲೂ ತೇರ್ಗಡೆಗೊಂಡಿದ್ದರು.
1963ರಲ್ಲಿ ಶೀರೂರು ಮಠಾಧೀಶರಾಗಿ ಸನ್ಯಾಸತ್ವ ಸ್ವೀಕರಿಸಿದ್ದ ಅವರು 1973 ರಲ್ಲಿ ಅದನ್ನು ತೊರೆದು ಧಾರವಾಡದಲ್ಲಿ ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿ ಯಾಗಿ ಸೇರಿ 1976ರಲ್ಲಿ ಧಾರವಾಡದಲ್ಲೇ ಗೃಹಸ್ಥಾಶ್ರಮ ಪ್ರವೇಶಿಸಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಆದರೆ ಅವರ ಪತ್ನಿ ಮೂರು ವರ್ಷಗಳಲ್ಲೇ ತೀರಿಕೊಂಡಿದ್ದರು. ಆ ಬಳಿಕ ಆರ್ಯ, ಸಾಹಿತಿಯಾಗಿ, ನಾಟಕಕಾರರಾಗಿ, ಚಿತ್ರಕಲಾವಿದರಾಗಿ ಹಾಗೂ ಸಿನಿಮಾ ನಿರ್ದೇಶಕರಾಗಿ ನಾಡಿನ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಸಾಹಿತಿಯಾಗಿ ಅವರ ಕೃತಿಗಳನ್ನು ನಾಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಾದ ಧಾರವಾಡದ ಮನೋಹರ ಗ್ರಂಥ ಮಾಲಾ, ಜಡಭರತ ಪ್ರಕಾಶನ, ಸಾಗರದ ಅಕ್ಷರ ಪ್ರಕಾಶನ, ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಪ್ರಕಟಿಸಿವೆ.
‘ಗುರು’ ಅವರ ಕಾದಂಬರಿಯಾದರೆ, ‘ಮನುಷ್ಯ’ ಕವನ ಸಂಕಲನ, ಭ್ರೂಣ, ಪಾತಾಳಗರಡಿ, ಯಜ್ಞ, ಬಯಲು ಆಲಯದೊಳಗೆ, ಇಲ್ಲದಿದ್ದವರು ಅವರ ನಾಟಕಗಳು. ಕೊಕ್ಕರೆ ತಾತ, ಮೋಡರಾಜ, ಕುರಿಕೊಂದ ಕುಮಾರ ಮತ್ತು ಮಳೆಬಂತು ಅವರ ಮಕ್ಕಳ ನಾಟಕಗಳು. ಧ್ರಷ್ಟ, ದೇಶಿ ಪರದೇಶಿ ಕತೆಗಲು, ಕರುಣೆ ಅವರ ಕಥಾ ಸಂಕಲನಗಳು. ಇದಲ್ಲದೇ ಅವರು ಅನುವಾದ ಕೃತಿಳನ್ನು ಪ್ರಕಟಿಸಿದ್ದಾರೆ.
ನಾಡಿನ ಅಗ್ರಗಣ್ಯ ಚಿತ್ರಕಲಾವಿದರಾದ ಇವರ ಏಕವಯಕ್ತಿ ಚಿತ್ರ ಪ್ರದರ್ಶನಗಳು ಮಂಗಳೂರು, ಬೆಂಗಳೂರು, ಮುಂಬಯಿ, ಜರ್ಮನಿ, ಇಟಲಿ, ಪ್ಯಾರಿಸ್, ನೆದರ್ಲೆಂಡ್, ಇಂಗ್ಲೆಂಡ್ಗಳಲ್ಲಿ ಹಲವು ಬಾರಿ ನಡೆದಿವೆ. ಅಲ್ಲದೇ ಅವರು ಹಲವರೊಂದಿಗೆ ಸೇರಿ ದೇಶ-ವಿದೇಶಗಳಲ್ಲೂ ಹಲವು ಚಿತ್ರ ಪ್ರದರ್ಶನ ನಡೆಸಿದ್ದರು. ಪ್ರಗತಿಪರ ಕರಾವಳಿಯ ಚಿತ್ರಕಾರರು ವೇದಿಕೆಯ ಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರಾಗಿದ್ದರು.
ಆರ್ಯ ಆಚಾರ್ಯರು ಗಿರೀಶ್ ಕಾರ್ನಾಡ್, ಗೋವಿಂದ ಮಣ್ಣೂರ, ವೈಜಯಂತಿ, ಕಾಶಿ ಮುಖ್ಯಪಾತ್ರಗಳಲ್ಲಿದ್ದ ‘ಕಿತಾಪತಿ’ ಎಂಬ ಚಿತ್ರವನ್ನು ನಿದೇಶಿಸಿದ್ದರು. ಅಲ್ಲದೇ ಬಿ.ವಿ.ಕಾರಂತರಂಥವರೊಂದಿಗೆ ಸೇರಿ ಹಲವು ಡಾಕ್ಯುಮೆಂಟರ್ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಧಾರವಾಡದಲ್ಲಿ ಹಲವು ಸಂಘಸಂಸ್ಥೆಗಳ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತಿದ್ದ ಇವರಿಗೆ 1998ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಹಾಗೂ 2005ರಲ್ಲಿ ಜಿ.ಎಸ್.ಶೆಣೈ ಸ್ಮಾರಕ ಪ್ರಶಸ್ತಿಗಳು ದೊರಕಿವೆ.