ಖ್ಯಾತ ಸಾಹಿತಿ ಆರ್ಯ
ಉಡುಪಿ, ಸೆ.30: ಕನ್ನಡದ ಖ್ಯಾತ ಸಾಹಿತಿ, ಚಿತ್ರ ಕಲಾವಿದ ಹಾಗೂ ಚಿತ್ರ ನಿರ್ದೇಶಕರಾಗಿದ್ದ, ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಮಠಾಧೀಶರಾಗಿದ್ದು ಬಳಿಕ ಸನ್ಯಾಸತ್ವವನ್ನು ತೊರೆದು ಗೃಹಸ್ಥಾಶ್ರಮ ಸ್ವೀಕರಿಸಿದ್ದ ಆರ್ಯ ಆಚಾರ್ಯ ಪಿ.ಆರ್.(71) ಶುಕ್ರವಾರ ಬೆಳಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸನ್ಯಾಸತ್ವವನ್ನು ತ್ಯಜಿಸಿದ ಬಳಿಕ ಧಾರವಾಡದಲ್ಲಿ ನೆಲೆಸಿದ್ದ ಅವರು ಕಳೆದ ಆ.19ರಂದು ಧಾರವಾಡದಲ್ಲಿ ಅವರು ಚಲಾಯಿಸುತಿದ್ದ ಸ್ಕೂಟರ್ ಅಫಘಾತಕ್ಕೊಳಗಾಗಿ ಗಾಯಗೊಂಡಿದ್ದರು. ಆ.25ರಂದು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತರಾದರು.
1963ರಲ್ಲಿ ಶೀರೂರು ಮಠಾಧೀಶರಾಗಿ ಸನ್ಯಾಸತ್ವ ಸ್ವೀಕರಿಸಿದ್ದ ಅವರು 1973ರಲ್ಲಿ ಸನ್ಯಾಸತ್ವವನ್ನು ತೊರೆದು ಧಾರವಾಡದಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ 1976ರಲ್ಲಿ ಧಾರವಾಡದಲ್ಲೇ ಗೃಹಸ್ಥಾಶ್ರಮ ಪ್ರವೇಶಿಸಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಆದರೆ ಅವರ ಪತ್ನಿ ಮೂರು ವರ್ಷಗಳಲ್ಲೇ ತೀರಿಕೊಂಡಿದ್ದರು. ಆ ಬಳಿಕ ಆರ್ಯ, ಸಾಹಿತಿಯಾಗಿ, ನಾಟಕಕಾರರಾಗಿ, ಚಿತ್ರಕಲಾವಿದರಾಗಿ ಹಾಗೂ ಸಿನಿಮಾ ನಿರ್ದೇಶಕರಾಗಿ ನಾಡಿನ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಸಾಹಿತಿಯಾಗಿ ಅವರ ಕೃತಿಗಳನ್ನು ನಾಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಾದ ಧಾರವಾಡದ ಮನೋಹರ ಗ್ರಂಥ ಮಾಲಾ, ಜಡಭರತ ಪ್ರಕಾಶನ, ಸಾಗರದ ಅಕ್ಷರ ಪ್ರಕಾಶನ, ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಪ್ರಕಟಿಸಿವೆ.
‘ಗುರು’ ಕಾದಂಬರಿ, ‘ಮನುಷ್ಯ’ ಕವನ ಸಂಕಲನ, ಭ್ರೂಣ, ಪಾತಾಳಗರಡಿ, ಯಜ್ಞ, ಬಯಲು ಆಲಯದೊಳಗೆ, ಇಲ್ಲದಿದ್ದವರು ನಾಟಕಗಳು. ಕೊಕ್ಕರೆ ತಾತ, ಮೋಡರಾಜ, ಕುರಿಕೊಂದ ಕುಮಾರ ಮತ್ತು ಮಳೆಬಂತು ಮಕ್ಕಳ ನಾಟಕಗಳು. ಧ್ರಷ್ಟ, ದೇಶಿ ಪರದೇಶಿ ಕತೆಗಳು, ಕರುಣೆ ಅವರ ಕಥಾ ಸಂಕಲನಗಳು. ಇದಲ್ಲದೇ ಅವರು ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ.