ಸ್ವಾತಂತ್ರ ಹೋರಾಟಗಾರ ಕರುಣಾಕರ ಉಚ್ಚಿಲ
ಮಂಗಳೂರು, ಅ.11: ಸ್ವಾತಂತ್ರ ಹೋರಾಟಗಾರ, ಮಂಗಳೂರಿನ ಗಾಂಧಿ ಶಾಂತಿ ಪ್ರತಿಷ್ಠಾನದ ದೀರ್ಘಕಾಲದ ಸಹಭಾಗಿ, ಸಮಾಜ ಸೇವಕ ಕರುಣಾಕರ ಉಚ್ಚಿಲ ರವಿವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಸರೋಜಾ ಟೀಚರ್, ಒಬ್ಬ ಪುತ್ರ, ಇಬ್ಬರು ಪತ್ರಿಯರು ಹಾಗೂ ಅಪಾರ ಬಂಧುಬಳಗ ಹಾಗೂ ಮಿತ್ರರನ್ನು ಅಗಲಿದ್ದಾರೆ.
ವಿದ್ಯಾರ್ಥಿ ದಿನಗಳಲ್ಲಿ ಕೋಟೆಕಾರಿನಲ್ಲಿ ಕಾಂಗ್ರೆಸ್ ಸೇವಾದಳ ಸೇರಿದ್ದ ಅವರು, ಮುಂಬೈಯಲ್ಲಿ ನೌಕರಿಯಲ್ಲಿದ್ದಾಗ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 1942ರ ಆ.9ರಂದು ಕ್ವಿಟ್ ಇಂಡಿಯಾ ಘೋಷಣೆ ಮುಂಬೈನಲ್ಲಿ ಮೊಳಗಿದಾಗ ಪೊಲೀಸರು, ಸ್ವಯಂ ಸೇವಕರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ನಡೆಸಿದಾಗ ಕರುಣಾಕರ ಉಚ್ಚಿಲರೂ ಆ ದಾಳಿಯಿಂದ ಗಾಯಕ್ಕೊಳಗಾಗಿದ್ದರು.
ಬಳಿಕ ಮುಖಂಡರನ್ನು ಬಂಧನಲ್ಲಿರಿಸಿದಾಗ ಕರುಣಾಕರ ಉಚ್ಚಿಲರು ಗುಪ್ತವಾಗಿ ಗಾಂಧೀಜಿಯವರ ಪತ್ರಿಕೆಗಳನ್ನು, ಹೋರಾಟದ ಬುಲೆಟಿನ್ ಮತ್ತು ಕರಪತ್ರಗಳನ್ನು ವಿತರಿಸುತ್ತಿದ್ದರು. 1943ರ ಫೆ.6ರಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಲಯ ಅವರಿಗೆ 14 ದಿನಗಳ ಶಿಕ್ಷೆಯನ್ನು ವಿಧಿಸಿತ್ತು. ಜೈಲು ವಾಸದ ಬಳಿಕವೂ ಸ್ವಾತಂತ್ರ ಹೋರಾಟದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. 1957ರಲ್ಲಿ ಮುಂಬೈನಿಂದ ಊರಿಗೆ ಹಿಂದಿರುಗಿದ ಅವರು, ಉದ್ದಿಮೆಯೊಂದರ ಮಾರಾಟ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಾ, ಕಾಂಗ್ರೆಸ್ ಪಕ್ಷದ ಉಳ್ಳಾಲ ವಲಯದ ಕಾರ್ಯಕರ್ತರಾಗಿ ಗುರುತಿಸಿಕೊಂಡರು. ತಮ್ಮ ಊರಾದ ಉಚ್ಚಿಲದ ಬೋವಿ ವಿದ್ಯಾಸಂಸ್ಥೆಯಲ್ಲಿ ದುಡಿದ ಅವರು ಊರಿಗೆ ಹೈಸ್ಕೂಲು ಮಂಜೂ ರಾಗಲು ಶ್ರಮಿಸಿದ್ದರು. ರೈಲ್ವೆ ಗೇಟ್, ಉಳ್ಳಾಲ-ಸೋಮೇಶ್ವರ ಮೀನುಗಾರಿಕಾ ರಸ್ತೆ, ಗ್ರಾಮದ ವಿದ್ಯುದೀಕರಣ, ಮೀನುಗಾರಿಕಾ ರಸ್ತೆಯ ಡಾಮರೀಕರಣ, ಕೊಳವೆ ಬಾವಿಗಳ ಸೌಕರ್ಯಕ್ಕಾಗಿ ಶ್ರಮಿಸಿದ್ದರು. ಕರುಣಾಕರ್ರ ಮೃತದೇಹವನ್ನು ಉಚ್ಚಿಲದ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಮೃತದೇಹಕ್ಕೆ ಚರಕದ ತ್ರಿವರ್ಣ ಧ್ವಜವನ್ನು ಹಾಕಿ ಗೌರವ ಸಲ್ಲಿಸಿದರು. ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಅಶ್ರಫ್, ಇನ್ಸ್ಪೆಕ್ಟರ್ ಶಿವಪ್ರಕಾಶ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಮುಖಂರಾದ ಸುರೇಶ್ ಭಟ್ನಗರ್ ಮತ್ತಿತರ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಗಣ್ಯರಿಂದ ಅಂತಿಮ ನಮನ
ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್. ಲೋಬೊ, ಜಿಲ್ಲಾಧಿಕಾರಿಗಳ ಪರವಾಗಿ ಸಹಾಯಕ ಆಯುಕ್ತ ಡಾ.ಅಶೋಕ್, ಕಾಂಗ್ರೆಸ್ನ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಭಾರತ ಸೇವಾದಳದ ಪದಾಧಿಕಾರಿಗಳು, ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಇಸ್ಮಾಯೀಲ್ ಮತ್ತು ಸದಸ್ಯರು, ಸ್ಥಳೀಯ ನಾಯಕರಾದ ಸದಾಶಿವ ಉಳ್ಳಾಲ್ ಮತ್ತಿತರರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.