ಉಡುಪಿ ಕೃಷ್ಣಮಠಕ್ಕೆ ಮುತ್ತಿಗೆ ಹಾಕಿದರೆ ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತ, ಸರ್ಕಾರವೇ ಹೊಣೆ
ಧರ್ಮ ಜಾಗೃತಿ ಸಮಿತಿ ಎಚ್ಚರಿಕೆ
ಪುತ್ತೂರು, ಅ.17: ಸರಕಾರದ ಕುಮ್ಮಕ್ಕಿನಿಂದ ಅ.23ರಂದು ಉಡುಪಿ ಮಠಕ್ಕೆ ಮುತ್ತಿಗೆ ಹಾಕಲು ಬುದ್ದಿಜೀವಿಗಳು ಮುಂದಾಗಿದ್ದು, ಇದನ್ನು ತಡೆಯಲು ನಾವು ಸಿದ್ಧರಿದ್ದೇವೆ. ಆದರೆ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಸರಕಾರವೇ ಹೊಣೆಯಾಗಲಿದೆ ಎಂದು ಧರ್ಮ ಜಾಗೃತಿ ಸಮಿತಿಯ ದ.ಕ. ಜಿಲ್ಲಾ ಅಧ್ಯಕ್ಷ ರಾಜಾರಾಂ ಶೆಟ್ಟಿ ಕೋಲ್ಪೆಗುತ್ತು ಎಚ್ಚರಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಹೊಸನಗರ, ಉಡುಪಿ ಸೇರಿದಂತೆ ಹಿಂದೂಗಳ ಧಾರ್ಮಿಕ ಕೇಂದ್ರಗಳ ವಿರುದ್ಧ ಧೋರಣೆ ತೆಳೆಯುತ್ತಿರುವುದು ಖಂಡನೀಯ. ಉಡುಪಿ ಮಠವನ್ನು ಉಳಿಸಿಕೊಳ್ಳಲು ಹಿಂದೂ ಸಮಾಜ ಹೋರಾಟ ನಡೆಸಲಿದೆ ಎಂದರು.
ಸಮಿತಿಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಬುದ್ಧಿಜೀವಿಗಳ ಮುತ್ತಿಗೆ ಬೆದರಿಕೆಯ ಹಿಂದೆ ಸರ್ಕಾರದ ಕುಮ್ಮಕ್ಕಿದೆ. ಕೃಷ್ಣ ಮಠ ಉಳಿಸುವ ನಿಟ್ಟಿನಲ್ಲಿ ಯಾವುದೇ ಸಂಘಟನೆಗಳು ಮಂದಾಗುವ ಎಲ್ಲ ಚಟುವಟಿಕೆಗಳಿಗೆ ನಾವು ಬೆಂಬಲ ನೀಡಲಿದ್ದೇವೆ ಎಂದರು.
ಸರ್ಕಾರದ ಪ್ರತಿನಿಧಿಯಾಗಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಶ್ರೀರಾಮ ಮತ್ತು ಶ್ರೀಕೃಷ್ಣ ಮಾಂಸಾಹಾರಿಗಳು ಎಂಬ ಹೇಳಿಕೆ ನೀಡುವ ಮೂಲಕ ಸಮಾಜದ ಶಾಂತಿಯನ್ನು ಕದಡಲು ಯತ್ನಿಸುತ್ತಿದ್ದಾರೆ ಎಂದು ಪುತ್ತಿಲ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮ ಜಾಗೃತಿ ಸಮಿತಿಯ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಮುಖಂಡರಾದ ರಾಜೇಶ್ ಬನ್ನೂರು ಮತ್ತು ಚಿನ್ಮಯ್ ಉಪಸ್ಥಿತರಿದ್ದರು.