ಉಡುಪಿ ಚಲೋ ಹೆಸರಿನಲ್ಲಿ ಕೆಲ ವಿಕೃತವಾದಿಗಳಿಂದ ಗೊಂದಲ: ಮುತಾಲಿಕ್
ಮಂಗಳೂರು, ಅ.19: ‘ಉಡುಪಿ ಚಲೋ’ ಹೆಸರಿನಲ್ಲಿ ಕೆಲ ವಿಕೃತವಾದಿಗಳು ಮತ್ತು ಬುದ್ಧಿಗೇಡಿಗಲು ಕರ್ನಾಟಕದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಪಬ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲು ಆಗಮಿಸಿದ ಸಂದರ್ಭ ಮಾತನಾಡಿದ ಮುತಾಲಿಕ್, ಸೆಕ್ಯುಲರ್ವಾದಿಗಳು ಮುಸ್ಲಿಮರು, ಕ್ರಿಶ್ಚಿಯನ್ನರ ಏಜೆಂಟ್ಗಳಾಗಿದ್ದಾರೆ. ಅವರಿಗೆ ತಾಕತ್ತಿದ್ದರೆ ಮಸೀದಿಯೊಳಗಿನ ಅಸ್ಪಶ್ಯತೆಯನ್ನು ನಿವಾರಿಸಲು ಮಸೀದಿಯೊಳಗಡೆ ಪ್ರವೇಶಿಸಲಿ. ಉಡುಪಿ ಕೃಷ್ಣಮಠವನ್ನು ಪ್ರವೇಶಿಸಿದರೆ ಅವರು ಜೈಲಿಗೆ ಹೋಗುತ್ತಾರೆ. ‘ಕನಕ ನಡೆ’ಗೆ ನಮ್ಮ ಬೆಂಬಲವಿದೆ ಎಂದರು.
ಕಳೆದ ವರ್ಷ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಿಂದ ರಾಜ್ಯದಲ್ಲಿ ಗದ್ದಲ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಬೇಕು ಎಂದಿದ್ದರೆ ಸರಕಾರ ಕೂಡಲೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಆದೇಶವನ್ನು ವಾಪಸ್ ಪಡೆಯಬೇಕು. ಜನರಲ್ಲಿ ಈ ಬಗ್ಗೆ ಆಕ್ರೋಶವಿದೆ. ಕಳೆದ ವರ್ಷ ಈ ವಿಚಾರದಲ್ಲಿ ಒಂದು ಪ್ರಾಣವೂ ಬಲಿಯಾಗಿದೆ. ಸರಕಾರ ಮುಸ್ಲಿಮರ ಓಲೈಕೆಗಾಗಿ ಈ ಆಚರಣೆಯನ್ನು ಜಾರಿಗೆ ತಂದಿದೆ. ಇದನ್ನು ಹೀಗೆಯೇ ಬಿಟ್ಟರೆ ಬಿನ್ ಲಾಡೆನ್ನ ಜಯಂತಿಯನ್ನೂ ಆಚರಿಸಬಹುದು. ಆದ್ದರಿಂದ ಸರಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ದೊಡ್ಡ ಪ್ರಮಾಣದಲ್ಲಿ ಹಿಂದುತ್ವದ ಆಧಾರದಲ್ಲಿ ಮತಗಳು ಲಭಿಸಿವೆ. ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಾರೆ, ಗೋಹತ್ಯೆಯನ್ನು ನಿಷೇಧಿಸುತ್ತಾರೆ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲೇಬೇಕು ಎಂದರು.
ಪಾಕಿಸ್ತಾನಿ ನಟರು, ಕ್ರಿಕೆಟ್ ಆಟಗಾರರಿಗೆ ಬಹಿಷ್ಕಾರ ಹಾಕಬೇಕು. ದೇಶದಲ್ಲಿ ಅವರ ಸಿನೆಮಾಗಳನ್ನು ಬಹಿಷ್ಕರಿಸಬೇಕು. ಕರ್ನಾಟಕದಲ್ಲಿ ಪಾಕಿಸ್ತಾನಿ ಕಲಾವಿದರ ಚಿತ್ರಪ್ರದರ್ಶನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮುತಾಲಿಕ್ ಹೇಳಿದರು.
ತ್ರಿವಳಿ ತಲಾಖ್ ಕುರಿತಂತೆ ಒಂದು ವಿಚಾರದಲ್ಲಿ ಎರಡು ಕಾನೂನು ಯಾವ ದೇಶದಲ್ಲೂ ಇಲ್ಲ. ಇಂತಹ ಕಾನೂನು ಇರುವ ಅವಶ್ಯಕತೆಯೂ ಇಲ್ಲ. ಈ ರೀತಿ ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ. ಈ ದೇಶದಲ್ಲೇ ಇರಬೇಕಾದರೆ ಒಂದೇ ಕಾನೂನಿನಡಿ ಇರಲಿ ಎಂದರು.