ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತ ನಿರ್ದೇಶಕನ ಕೊಲೆ ಪ್ರಕರಣ : ಎಲ್ಲಾ ಆರೋಪಿಗಳು ದೋಷಮುಕ್ತ
ಪುತ್ತೂರು,ಅ.21: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತ ನಿರ್ದೇಶಕ ರಾಮಕೃಷ್ಣ ಎ.ಎಸ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿ ಪುತ್ತೂರು 5 ನೇ ಹೆಚ್ಚುವರಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ಡಾ. ರೇಣುಕಾಪ್ರಸಾದ್, ನಾಗೇಶ್, ಮನೋಜ್ ರೈ, ಭವಾನಿಶಂಕರ, ಶರಣ್ ಮತ್ತು ವಾಮನ ಪೂಜಾರಿ ಅವರ ಮೇಲಿನ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿವರ
2011 ಎ.28 ರಂದು ಸಂಜೆ ಸುಳ್ಯ ನಗರದ ಅಂಬೆಟಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಮಕೃಷ್ಣ ಎ.ಎಸ್ ಅವರ ಮೇಲೆ ಅಪರಿಚಿತರು ತಲವಾರಿನಿಂದ ಕಡಿದು ಕೊಲೆಗೈದಿದ್ದರು. ಅನಂತರ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿತ್ತು. ಅನಂತರ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿತ್ತು.
ಆರೋಪಿಗಳ ಪರವಾಗಿ ನಾಗೇಶ್, ವೆಂಕಪ್ಪ ಗೌಡ ಸುಳ್ಯ, ಶಾಂತರಾವ್, ಶಿವಾನಂದ, ವಿಕ್ರಂ ಹೆಗ್ಡೆ, ಮೋನಪ್ಪ, ಕೆ.ರಾಧಾಕೃಷ್ಣ ರೈ, ಕೃಷ್ಣಪ್ರಸಾದ್ ರೈ, ಅರುಣ್ ಬಂಗೇರ, ಮಾಧವ ಪೂಜಾರಿ ವಾದಿಸಿದರು.