‘ಭಾವೈಕ್ಯದ ದೀಪಾವಳಿ’ ವಿವಾದಕ್ಕೆ ತೆರೆ
ಮಂಗಳೂರು, ಅ. 27: ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಅ.29ರಂದು ಆಯೋಜಿಸಲಾಗಿದ್ದ ಸರ್ವ ಧರ್ಮ ಸಂಗಮದ ‘ಭಾವೈಕ್ಯದ ದೀಪಾವಳಿ’ ಹಬ್ಬ ಆಚರಣೆ ಕಾರ್ಯಕ್ರಮವನ್ನು ಕದ್ರಿಯ ಗೋರಕ್ಷನಾಥ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಅವರು ಕದ್ರಿ ದೇವಾಲಯದಲ್ಲಿ ಹಬ್ಬ ಆಚರಣೆಗೆ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ.
ದೇವಾಲಯದಲ್ಲಿ ದೀಪಾವಳಿ ಆಚರಣೆ ನಡೆಸುವ ಹಿಂದೆ ನನಗೆ ಯಾವುದೇ ದುರುದ್ದೇಶ ಇಲ್ಲ. ಆದರೆ ‘‘ದೇವಾಲಯದಲ್ಲಿ ಅನ್ಯಮತೀಯರು ದೀಪಾವಳಿ ಆಚರಣೆ ನಡೆಸುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ’’ ಎಂದು ಸಂಘ ಪರಿವಾರದವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಮತ್ತು ಸಮಾಜದ ಭಾವೈಕ್ಯತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಗೋರಕ್ಷನಾಥ ಸಭಾಂಗಣಕ್ಕೆ ಸ್ಥಳಾಂತರಿಸಿರುವುದಾಗಿ ಅವರು ಹೇಳಿದರು.
ಕದ್ರಿ ಕ್ಷೇತ್ರದ ಬಗ್ಗೆ ನನಗೆ ಗೌರವವಿದೆ. ವಿಧಾನ ಪರಿಷತ್ ಮುಖ್ಯ ಸಚೇತಕನಾಗಿ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ನಾನು ಮೊದಲು ಭೇಟಿ ನೀಡಿದ್ದೇ ಕದ್ರಿ ಕ್ಷೇತ್ರಕ್ಕೆ. ಆದರೆ ಅನ್ಯ ಧರ್ಮೀಯ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎನ್ನುತ್ತಿದ್ದಾರೆ. ದೀಪಾವಳಿ ಆಚರಣಾ ಕಮಿಟಿಯಲ್ಲಿ ಶೇ.80ರಷ್ಟು ಮಂದಿ ಹಿಂದೂಗಳೇ ಇದ್ದಾರೆ. ಹೀಗಿರುವಾಗ ಹಿಂದುಗಳ ಭಾವನೆಗಳಿಗೆ ಹೇಗೆ ಧಕ್ಕೆಯಾಗುತ್ತದೆ ಎಂದು ಪ್ರಶ್ನಿಸಿರುವ ಐವನ್, ಅವರೇ ಹಿಂದುಗಳ ಭಾವನೆಗಳಿಗೆ ಧಕ್ಕೆ ಮಾಡಲು ಹೊರಟಿದ್ದಾರೆ ಎಂದರು.
ಕದ್ರಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಸಿದರೆ, ಗಲಾಟೆಯಾಗಬಹುದು ಎಂದು ಕಾರ್ಯಕ್ರಮವನ್ನೇ ರದ್ದು ಮಾಡುವ ತೀರ್ಮಾನಕ್ಕೆ ಬಂದಿದ್ದೆ. ಆದರೆ ಅಂದು ನೂರಾರು ಮಂದಿಗೆ ಆಮಂತ್ರಣ ನೀಡಿ ವಿವಿಧ ಸೌಲಭ್ಯ ವಿತರಿಸುವುದಾಗಿ ಭರವಸೆ ನೀಡಿದ್ದೆ. ಅಲ್ಲದೆ, ಗೂಡುದೀಪ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸಹಿತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವುದಾಗಿಯೂ ಹೇಳಿದ್ದೆ. ಇದಕ್ಕೆ ಮಕ್ಕಳು ಕೂಡ ಸಿದ್ಧರಾಗಿದ್ದಾರೆ. ಅವರಿಗೆಲ್ಲಾ ಅನ್ಯಾಯ ಆಗಬಾರದು ಎಂಬ ಸದುದ್ದೇಶದಿಂದ ಕಾರ್ಯಕ್ರಮವನ್ನು ರದ್ದುಗೊಳಿಸದೆ ಸ್ಥಳಾಂತರ ಮಾಡಿದ್ದೇನೆ ಎಂದು ಐವನ್ ಹೇಳಿದರು.
ಈ ಹಿಂದೆ ನಗರದಲ್ಲಿ ರಮಝಾನ್ ತಿಂಗಳಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದೆ. ಅದರಲ್ಲಿ ಹಿಂದೂ ನಾಯಕರೂ ಪಾಲ್ಗೊಂಡಿದ್ದರು. ಆಗ ಬಂದ ಸಲಹೆಗಳ ಮೇರೆಗೆ ಈಗ ದೀಪಾವಳಿ ಆಚರಣೆಗೆ ತೀರ್ಮಾನ ಮಾಡಿದ್ದೆ. ಹಬ್ಬದ ವಾತಾವರಣ ಸೃಷ್ಟಿಸಬೇಕೆಂಬ ಉದ್ದೇಶದಿಂದ ಕದ್ರಿ ದೇವಾಲಯವನ್ನು ಆಯ್ಕೆ ಮಾಡಿದ್ದೆ. ಇದಕ್ಕೆ ದೇವಾಲಯ ಆಡಳಿತದವರೂ ಒಪ್ಪಿಗೆ ನೀಡಿದ್ದರು ಎಂದು ಐವನ್ ಹೇಳಿದರು.