ವಾಟ್ಸ್ಆ್ಯಪ್ ಬೀಫ್ ಚಿತ್ರದ ನೆಪ: ಪೊಲೀಸ್ ಚಿತ್ರಹಿಂಸೆಗೆ ಮತ್ತೊಂದು ಬಲಿ?
ಮೃತ ಮುಸ್ಲಿಂ ಯುವಕನ ಕುಟುಂಬದಿಂದ ನ್ಯಾಯಕ್ಕಾಗಿ ಹೋರಾಟ
ಅಕ್ಟೋಬರ್ 3ರಂದು ರಾತ್ರಿ ಜಾರ್ಖಂಡ್ ಪೊಲೀಸರು ಜಾಮತಾರ ಜಿಲ್ಲೆಯ ದಿಗ್ಹರಿ ಗ್ರಾಮವನ್ನು ಜಾಲಾಡಿ, ಮಿನಾಝ್ ಅನ್ಸಾರಿ ಹಾಗೂ ಇಬ್ಬರು ಸ್ನೇಹಿತರಾದ ಶಹಬಾನ್ ಮತ್ತು ಫಾಹಿಮ್ ಎಂಬವರನ್ನು ಬಂಧಿಸಿದರು.
ಪುಟ್ಟ ಜೆರಾಕ್ಸ್ ಅಂಗಡಿ ಹೊಂದಿದ್ದ ಅನ್ಸಾರಿ ತನ್ನ ಪೋಷಕರು, ಪತ್ನಿ ಹಾಗೂ ಎಂಟು ತಿಂಗಳ ಮಗಳೊಂದಿಗೆ ವಾಸವಿದ್ದ. ಶಹಬಾನ್, ಅನ್ಸಾರಿ ಅಂಗಡಿ ಪಕ್ಕದಲ್ಲೇ ವಾಹನ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ.
‘‘ರಾತ್ರಿ 9ರ ಸುಮಾರಿಗೆ ನಾನು ಮಿನಾಝ್ ಅಂಗಡಿ ಬಳಿ ನಿಂತಿದ್ದೆ. ಆಗ ಎರಡು ಬೈಕ್ ಹಾಗೂ ಎರಡು ಚತುಷ್ಚಕ್ರ ವಾಹನ ದಲ್ಲಿ ಸುಮಾರು 8ರಿಂದ 10 ಮಂದಿ ಅಲ್ಲಿಗೆ ಆಗಮಿಸಿದರು ಎಂದು ಅಕ್ಟೋಬರ್ 17ರಂದು ಗ್ರಾಮಕ್ಕೆ ಭೇಟಿ ನೀಡಿದ ಚಳವಳಿಗಾರರ ತಂಡಕ್ಕೆ ಶಹಬಾನ್ ಮಾಹಿತಿ ನೀಡಿದರು. ಅವರು ಮಿನಾಝ್ ಹಾಗೂ ನನ್ನನ್ನು ಅಟ್ಟಾಡಿಸಿದರು. ನಾವು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದೆವು. ಅವರು ಕ್ರಿಮಿನಲ್ಗಳು ಎಂದು ನಾವು ಭಾವಿಸಿದ್ದೆವು
ಅಕ್ಟ್ಟೋಬರ್ 2ರಂದು ವಾಟ್ಸ್ಆ್ಯಪ್ ಗ್ರೂಫ್ನಲ್ಲಿ ಅನ್ಸಾರಿ ಒಂದು ಕರುವಿನ ಜತೆಗೆ ಇರುವ ಫೋಟೊ ಹಾಕಿದ್ದ ಹಾಗೂ ಮತ್ತೊಬ್ಬ ವ್ಯಕ್ತಿ ಗೋಮಾಂಸದ ಜತೆಗೆ ಇರುವ ಫೋಟೊ ಹಾಕಿದ್ದ ಎಂಬುದಾಗಿ ವಿಶ್ವ ಹಿಂದೂ ಪರಿಷತ್ತಿನ ಜಾಮತಾರ ಜಿಲ್ಲಾ ಮುಖ್ಯಸ್ಥ ಸೋನು ಸಿಂಗ್, ಪೊಲೀಸರಿಗೆ ದೂರು ನೀಡಿದ ಬಗ್ಗೆ ಇವರಿಗೆ ತಿಳಿದಿರಲೇ ಇಲ್ಲ. ಜಾರ್ಖಂಡ್ನಲ್ಲಿ ಗೋಹತ್ಯೆ ನಿಷೇಧ.
‘‘ಈ ರಾತ್ರಿ ಸಬ್ಇನ್ಸ್ಪೆಕ್ಟರ್ ಹರೀಶ್ ಪಾಠಕ್ ಹಾಗೂ ಐದರಿಂದ ಆರು ಮಂದಿ ಪೊಲೀಸರು ನಮ್ಮನ್ನು ಮನಸೋ ಇಚ್ಛೆ ಥಳಿಸಿದರು. ನಂತರವೂ ಮಿನಾಝ್ನನ್ನು ಪ್ರತ್ಯೇಕವಾಗಿ ಹೊಡೆಯುತ್ತಿದ್ದರು ಎಂದು ಶಹಬಾನ್ ನೆನಪಿಸಿಕೊಳ್ಳುತ್ತಾರೆ. ಆತನ ಆರ್ತನಾದ ನಮಗೆ ಕೇಳಿಸುತ್ತಿತ್ತು. ಆತನನ್ನು ನಮ್ಮ ಕೊಠಡಿಗೆ ಮತ್ತೆ ಕರೆತಂದಾಗ, ಆತನ ಕಿವಿಯಲ್ಲಿ ರಕ್ತ ಸೋರುತ್ತಿತ್ತು. ಆತ ಮಾತ ನಾಡುವ ಸ್ಥಿತಿಯಲ್ಲೇ ಇರಲಿಲ್ಲ. ಆತನಿಗೆ ಊಟ ಮಾಡಿಸುವ ಪ್ರಯತ್ನ ಮಾಡಿದೆವು. ಆದರೆ ಆತ ತಿನ್ನುವ ಸ್ಥಿತಿಯಲ್ಲಿರಲಿಲ್ಲ. ನಾವು ಕೊಟ್ಟ ಆಹಾರ ಆತನ ಬಾಯಿಯಿಂದ ಹೊರಬರುತ್ತಿತ್ತು
ಮಾರಕ ಸಾಧನದಿಂದ ಹೊಡೆದ ಗಾಯದಿಂದ ಸಂಭವಿಸಿದ ರಕ್ತಸ್ರಾವ ಹಾಗೂ ಆಘಾತದಿಂದ ಮಿನಾಝ್ ಮೃತಪಟ್ಟಿದ್ದಾಗಿ ಸರಕಾರದ ಅಟಾಪ್ಸಿ ವರದಿ ಹೇಳುತ್ತದೆ. ಈ ವರದಿ ಬಂದು ಎರಡು ವಾರ ಕಳೆದರೂ, ಅನ್ಸಾರಿಯನ್ನು ಬಂಧನದಲ್ಲಿ ಇಟ್ಟು ಕೊಂಡಿದ್ದ ಜಾಮತಾರ ಜಿಲ್ಲೆಯ ನಾರಾಯಣಪುರ ಠಾಣೆಯ ಅಧಿಕಾರಿ ಹರೀಶ್ ಪಾಠಕ್ ಹಾಗೂ ವಿಶ್ವಹಿಂದೂ ಪರಿಷತ್ತಿನ ಮುಖಂಡ ಸೋನು ಸಿಂಗ್ ಅವರನ್ನು ಬಂಧಿಸಿಲ್ಲ. ಈ ಇಬ್ಬರು ಠಾಣೆಯಲ್ಲಿ ಅನ್ಸಾರಿಯವರನ್ನು ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
‘‘ಸರಕಾರದ ವೈದ್ಯಕೀಯ ದಾಖಲೆಗಳ ಪ್ರಕಾರ, ಪೊಲೀಸರು ಮಿನಾಝ್ಗೆ ಸಾಯುವಂತೆ ಚಿತ್ರಹಿಂಸೆ ನೀಡಿದ್ದಾರೆ. ಇಷ್ಟಾಗಿಯೂ ಠಾಣಾಧಿಕಾರಿಯನ್ನು ಏಕೆ ಬಂಧಿಸಿಲ್ಲ’’ ಎಂಬ ಪ್ರಶ್ನೆಯನ್ನು ಅನ್ಸಾರಿಯವರ ಮಾವ ಗುಲಾಮ್ ಮುಸ್ತಫ ಮುಂದಿಡುತ್ತಾರೆ. ರಕ್ತಸಿಕ್ತ ಕರುಳು
ಟೂಸರ್ಕಲ್ಸ್.ನೆಟ್ ಎಂಬ ಲಾಭರಹಿತ ಸುದ್ದಿಸಂಸ್ಥೆ ಅಕ್ಟೋಬರ್ 10ರಂದು ಮೊಟ್ಟಮೊದಲ ಬಾರಿಗೆ, ಅನ್ಸಾರಿ ಪೊಲೀಸ್ ಕಸ್ಟಡಿಯಲ್ಲಿ ಸತ್ತಿದ್ದಾನೆ ಎಂದು ಪ್ರಕಟಿಸಿತು. ಪೊಲೀಸರ ಪ್ರಕಾರ, ಅನ್ಸಾರಿ ಸಾವಿಗೆ ಮಿದುಳಿನ ಉರಿಯೂತ (ಎನ್ಸೆಪಾಲಿಟಿಸ್) ಅಥವಾ ವೈರಸ್ ಸೋಂಕು ಕಾರಣ. ಸರಕಾರಿ ಸ್ವಾಮ್ಯದ ರಾಂಚಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ನೀಡಿದ ಅಟಾಪ್ಸಿ ವರದಿಯ ಪ್ರಕಾರ, ಈ ಅಂಶದ ಕುರುಹೂ ಕಾಣುತ್ತಿಲ್ಲ.
ಟೂಸರ್ಕಲ್.ನೆಟ್ಗೆ ಅಟಾಪ್ಸಿ ವರದಿ ಲಭ್ಯವಾಗಿದ್ದು, ಇದರ ಪ್ರಕಾರ, ಹೊಟ್ಟೆಯ ಲೋಳೆ ತೀವ್ರವಾಗಿ ಸಂಕುಚಿತಗೊಂಡಿದ್ದು, ರಕ್ತದ ಪದರದಂತಾಗಿದ್ದು, ಕೆಂಪುಮಿಶ್ರಿತ ಕಂದುಬಣ್ಣಕ್ಕೆ ತಿರುಗಿದೆ. ಹೊಟ್ಟೆ ಸಂಪೂರ್ಣ ಖಾಲಿಯಾಗಿದೆ. ಸಣ್ಣ ಕರುಳಿನ ಮೂರನೆ ಎರಡು ಭಾಗದಲ್ಲಿ ರಕ್ತವಷ್ಟೇ ತುಂಬಿದೆ
ತೀರಾ ಗಡುಸಾದ ಸಾಧನದಿಂದ ಹೊಡೆದಿರುವುದು ಇದರಿಂದ ಖಚಿತವಾಗುತ್ತದೆ. ಸಾವಿಗೆ ರಕ್ತಸ್ರಾವ ಹಾಗೂ ಆಘಾತ ಕಾರಣ ಎಂದು ವರದಿ ಸ್ಪಷ್ಟಪಡಿಸಿದೆ.
ಪಾಠಕ್ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ನಿರೀಕ್ಷಿಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಮೃತವ್ಯಕ್ತಿಯ ಒಳಾಂಗಗಳನ್ನು ಸಂರಕ್ಷಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ಜಿಲ್ಲಾ ಎಸ್ಪಿ ಸ್ಪಷ್ಟಪಡಿಸಿದರು. ಕರ್ತವ್ಯಲೋಪದ ಆಧಾರದಲ್ಲಿ ಈಗಾಗಲೇ ಪಾಠಕ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಪೂರ್ವ ಜಾರ್ಖಂಡ್ನ ಜಾಮತಾರ ನಗರದಿಂದ 45 ಕಿಲೋಮೀಟರ್ ದೂರದ ದಿಗ್ಹರಿ ಗ್ರಾಮದಲ್ಲಿ ಹಿಂದೂ ಭಂಡಾರಿ ಹಾಗೂ ಮುಸ್ಲಿಂ ಅನ್ಸಾರಿ ಜನಾಂಗದವರು ಪ್ರಮುಖವಾಗಿ ವಾಸವಿದ್ದಾರೆ.
‘‘ಅನ್ಸಾರಿಯನ್ನು ಬಂಧಿಸುವ ಮುನ್ನ ಆತನ ಮಾವನನ್ನು ಠಾಣೆಗೆ ಕರೆಸಲಾಗಿದ್ದು. ಅಳಿಯ ವಾಟ್ಸ್ಆ್ಯಪ್ನಲ್ಲಿ ಹಂಚಿಕೊಂಡಿದ್ದು ಎನ್ನಲಾದ ಭಾವಚಿತ್ರವನ್ನು ಅವರಿಗೆ ತೋರಿಸಿ, ಆತನನ್ನು ಠಾಣೆಗೆ ಕರೆತರುವಂತೆ ಸೂಚಿಸಿದ್ದರು. ಆದರೆ ಸಂಜೆ ಮಾವ ಮನೆಗೆ ಬರುವ ಮುನ್ನವೇ ಅನ್ಸಾರಿಯನ್ನು ಬಂಧಿಸಲಾಗಿತ್ತು’’ ಎಂದು ಸಂಬಂಧಿ ಖಾದಿರ್ ಅನ್ಸಾರಿ ವಿವರಿಸಿದರು.ಅಕ್ಟೋಬರ್ 3ರಂದು ಈ ಯುವಕರನ್ನು ಬಂಧಿಸಿದ ತಕ್ಷಣ, ಪೊಲೀಸರು ಅವರ ಮನೆಗೆ ಬಂದಿದ್ದರು ಎಂದು ಸತ್ಯಶೋಧನಾ ತಂಡಕ್ಕೆ ಅನ್ಸಾರಿ ಕುಟುಂಬದವರು ಹೇಳಿದರು. ಆಲ್ಇಂಡಿಯಾ ಪೀಪಲ್ಸ್ ಫೋರಂನ ಅನಿಲ್ ಅಂಶುಮಾನ್, ಯುನೈಟೆಡ್ ಮಿಲ್ಲಿ ಫೋರಂನ ಅಫ್ಝಲ್ ಅನಿಸ್, ರೈಟ್ ಟೂ ಫುಡ್ ಕ್ಯಾಂಪೇನ್ನ ಧೀರಜ್ ಕುಮಾರ್, ಅಂಜುಮನ್ ಇಸ್ಲಾಮಿಯಾದ ತನ್ವೀರ್, ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ನ ಝಿಯಾವುಲ್ಲಾ, ಯುವ ಉಲ್ಗುಲನ್ ಸಂಘಟನೆಯ ಆಕಾಶ್ ಅವರನ್ನೊಳಗೊಂಡ ಸತ್ಯಶೋಧನಾ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು.
‘‘ಅದು ತಡರಾತ್ರಿ. ನಾವು ಭಯದಿಂದ ಬಾಗಿಲು ತೆಗೆಯಲಿಲ್ಲ. ಅವರು ಬಾಗಿಲು ಒಡೆಯುವ ಪ್ರಯತ್ನ ಮಾಡಿದರು’’ ಎಂದು ಮರದ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ಅನ್ಸಾರಿ ತಂದೆ ಉಮರ್ ಅನ್ಸಾರಿ ಹೇಳಿದರು. ‘‘ನಾವು ಬಾಗಿಲು ತೆರೆದಾಗ ಹರೀಶ್ ಪಾಠಕ್ ನಮ್ಮ ಕುಟುಂಬವನ್ನು ನಿಂದಿಸತೊಡಗಿದರು. ಮಿನಾಝ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು’’
‘‘ಪಾಠಕ್ ದೂರವಾಣಿ ಕರೆ ಮಾಡಿ, ಮಿನಾಝ್ಗೆ ಹೊಡೆಯುವಾಗ ಆತ ಚೀರುತ್ತಿದ್ದ ಆಕ್ರಂದನವನ್ನು ನಮಗೆ ಕೇಳಿಸಿದರು. ನಾನು ಮಿನಾಝ್ ಜತೆ ಮಾತನಾಡುವಂತೆ ಸೂಚಿಸಿದರು. ಆಗ ‘ನನ್ನ ಜೀವಕ್ಕೆ ಅಪಾಯವಿದೆ. ಅವರು ಏನು ಕೇಳುತ್ತಾರೋ ಅದನ್ನು ಕೊಡಿ’ ಎಂದು ಮಿನಾಝ್ ಹೇಳಿದ್ದ ಎಂದು ಆತನ ಸಹೋದರಿ ಗುಲ್ರೋಶನ್ ವಿವರಿಸಿದರು. ರಾತ್ರಿ ಪೊಲೀಸರು, ಮನೆಯಲ್ಲಿದ್ದ 3 ಸಾವಿರ ರೂಪಾಯಿಗಳನ್ನು ಹಾಗೂ ಮಿನಾಝ್ನ ಲ್ಯಾಪ್ಟಾಪ್, ಮೊಬೈಲ್ ಹಾಗೂ ಬೈಕ್ ಒಯ್ದಿದ್ದರು. ಬಳಿಕ ಎಲ್ಲವನ್ನೂ ಹಿಂದಿರುಗಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದರು.
ರಾತ್ರಿ ಮೂವರು ಯುವಕರನ್ನು ಬಂಧಿಸಿದ ಬಳಿಕ ಮರುದಿನ ಬೆಳಿಗ್ಗೆ ಅನ್ಸಾರಿಯವರ ಮಾವ ಗುಲಾಮ್ ಮುಸ್ತಫ, ಬಂಧಿತರ ಪೋಷಕರನ್ನು ಕರೆದುಕೊಂಡು ಠಾಣೆಗೆ ಹೋಗಿದ್ದರು. ಆಗ ಪಾಠಕ್, ಎಲ್ಲರನ್ನೂ ನಿಂದಿಸಿ, ಬೆದರಿಕೆ ಹಾಕಿ ಕಳುಹಿಸಿದ್ದರು’’ ಎಂದು ಮುಸ್ತಫ ಹೇಳಿದರು.
‘‘ಇಲ್ಲಿಂದ ಹೊರಟುಹೋಗಿ ಇಲ್ಲವೇ ಎಲ್ಲರನ್ನೂ ಜೈಲಿಗೆ ಅಟ್ಟುತ್ತೇನೆ. ಎಲ್ಲ ಮಿಯಾನ್ರನ್ನು ಹೊಸಕಿ ಹಾಕುತ್ತೇವೆ’’ ಎಂದು ಮುಸ್ಲಿಮರ ಬಗ್ಗೆ ತುಚ್ಛವಾಗಿ ಮಾತನಾಡಿದರು ಎನ್ನುವುದು ಮುಸ್ತಫ ಅವರ ವಿವರಣೆ.
‘‘ಈ ವೇಳೆಗೆ ವಿಶ್ವಹಿಂದೂ ಪರಿಷತ್ತಿನ ಸೋನು ಶರ್ಮಾ ಕೂಡಾ ಠಾಣೆಯಲ್ಲಿದ್ದರು. ಆತ ಕೂಡಾ ಮಿನಾಝ್ಗೆ ಹೊಡೆಯುತ್ತಿದ್ದ. ಮಿನಾಝ್ನನ್ನು ಹೊಡೆದು ಸಾಯಿಸುವಂತೆ ಪಾಠಕ್ಗೆ ಹೇಳುತ್ತಿದ್ದ.
ಜಾಮತಾರದ ಶಾಸಕ ಇರ್ಫಾನ್ ಅಲಿ ಠಾಣೆಗೆ ಭೇಟಿ ನೀಡಿದ ಬಳಿಕ, ಶಹಬಾನ್ ಹಾಗೂ ಫಹೀಮ್ ಅವರನ್ನು ಬಿಡುಗಡೆ ಮಾಡಲಾಯಿತು. ಅನ್ಸಾರಿಯನ್ನು ಠಾಣೆಯಲ್ಲೇ ಉಳಿಸಿಕೊಳ್ಳಲಾಗಿತ್ತು. ಅಕ್ಟೋಬರ್ 3ರ ರಾತ್ರಿ ಹಾಗೂ 4ರ ಬೆಳಗ್ಗೆ ಮಿನಾಝ್ನ ಕೊಠಡಿಯಲ್ಲೇ ನಮ್ಮನ್ನೂ ಕೂಡಿಹಾಕಲಾಗಿತ್ತು. ಆತನಿಗೆ ಮಾತನಾಡಲೂ ಆಗುತ್ತಿರಲಿಲ್ಲ. ತಾನು ಬದುಕಿ ಉಳಿಯುವ ಸಾಧ್ಯತೆ ಇಲ್ಲ ಎಂದು ಆತ ಸಂಕೇತದ ಮೂಲಕ ತೋರಿಸಿದ್ದ’’ ಎಂದು ಅವರು ಹೇಳುತ್ತಾರೆ.
ಹದಗೆಟ್ಟ ಪರಿಸ್ಥಿತಿ
‘‘ಅಕ್ಟೋಬರ್ 5ರಂದು ಪೊಲೀಸರು ಅನ್ಸಾರಿಯನ್ನು ಮೊದಲು ಜಾಮತಾರ ಸರ್ದಾರ್ ಆಸ್ಪತ್ರೆಗೆ ಒಯ್ದರು. ಆ ಬಳಿಕ ಧನಬಾದ್ನಲ್ಲಿರುವ ಪಾಟಲೀಪುತ್ರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು. ಆ ದಿನ ಶಾಸಕರು ಕರೆ ಮಾಡಿ, ಅನ್ಸಾರಿಯನ್ನು ಧನಬಾದ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು. ತಕ್ಷಣ ಕುಟುಂಬ ಸದಸ್ಯರು ಧನಬಾದ್ ಆಸ್ಪತ್ರೆಗೆ ತೆರಳಿದರು’’ ಎಂದು ಗುಲಾಮ್ ಮುಸ್ತಫ ತಿಳಿಸಿದರು.
‘‘ಅನ್ಸಾರಿಯನ್ನು ನೋಡಲು ಅವಕಾಶ ನೀಡುವಂತೆ ಪಾಠಕ್ಗೆ ಮನವಿ ಮಾಡಿದೆವು. ಆದರೆ ಅದಕ್ಕೆ ಅವರು ಅವಕಾಶ ನೀಡಲಿಲ್ಲ. ಆಸ್ಪತ್ರೆ ಆವರಣದಲ್ಲೇ ಮಿನಾಝ್ನ ತಾಯಿಯ ಎದೆ ಹಿಡಿದು ಪಾಠಕ್ ತಳ್ಳಿದರು. ಆಕೆ ತನ್ನನ್ನು ರಕ್ಷಿಸಿಕೊಳ್ಳಲು ಮುಂದಾದಾಗ, ಆಕೆಯ ಬಳೆ ತಾಗಿ ಪಾಠಕ್ಗೆ ಗಾಯವಾಗಿತ್ತು. ನಮ್ಮ ವಿರುದ್ಧ ಹತ್ಯೆ ಪ್ರಯತ್ನ ಪ್ರಕರಣ ದಾಖಲಿಸುವುದಾಗಿ ಪಾಠಕ್ ನಮ್ಮನ್ನು ಬೆದರಿಸಿದರು.’’
ಅನ್ಸಾರಿ ಕುಟುಂಬ ಪಾಠಕ್ ವಿರುದ್ಧ ಲಿಖಿತ ದೂರು ಸಲ್ಲಿಸಿದೆ. ಇದು ಬಳಿಕ ಕೊಲೆ ಯತ್ನದ ಎಫ್ಐಆರ್ ಆಗಿ ಪರಿವರ್ತನೆಯಾಗಿದೆ. ಅನ್ಸಾರಿ ಕುಟುಂಬ ಸದಸ್ಯರ ವಿರುದ್ಧ ಪಾಠಕ್ ಕೂಡಾ ಎಫ್ಐಆರ್ ದಾಖಲಿಸಿದ್ದಾರೆ.
‘‘ಅನ್ಸಾರಿ ಸಾಯುವುದು ಖಚಿತ ಎನ್ನುವುದು ಖಾತ್ರಿಯಾದ ಬಳಿಕ ಕುಟುಂಬ ಸದಸ್ಯರು ಆತನನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಆ ವೇಳೆಗೆ ಮಿನಾಝ್ ಪ್ರಜ್ಞೆ ಕಳೆದುಕೊಂಡಿದ್ದ. ಆಘಾತದಿಂದ ಆತನ ತಾಯಿ ಆತನನ್ನು ಮುದ್ದಾಡಿದರು. ಅದಕ್ಕೂ ಯಾವ ಸ್ಪಂದನೆಯೂ ಬರಲಿಲ್ಲ. ದೇಹ ನಿಶ್ಚಲವಾಗಿತ್ತು’’ ಎಂದು ಉಮರ್ ಅನ್ಸಾರಿ ತಂಡಕ್ಕೆ ಮಾಹಿತಿ ನೀಡಿದರು.
ಅಕ್ಟೋಬರ್ 9ರಂದು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಟಾಪ್ಸಿ ಮಾಡಲಾಗಿದೆ.
ಬಂಧನ ಇಲ್ಲ
‘‘ಅನ್ಸಾರಿ ಮೃತನಾಗಿ ಎರಡು ವಾರವಾದರೂ ಜಿಲ್ಲಾ ಅಧಿಕಾರಿಗಳು ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆಡಳಿತ ಯಂತ್ರಕ್ಕೆ ನಾವು ನೋಟಿಸ್ ನೀಡಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಂಜಾನೆಯಿಂದ ಧರಣಿ ನಡೆಸುತ್ತಿದ್ದೇವೆ. ಆದರೆ ಇದುವರೆಗೆ ಯಾವ ಅಧಿಕಾರಿಯೂ ಭೇಟಿ ನೀಡಿಲ್ಲ’’ ಎಂದು ಹೋರಾಟಗಾರ ಅಫ್ಝಲ್ ಅನಿಸ್ ವಿವರಿಸಿದ್ದಾರೆ.
‘‘ಅನ್ಸಾರಿ ಸಾವಿನ ಬಳಿಕ, ಪಾಠಕ್ ವಿರುದ್ಧ ಇದ್ದ ಕೊಲೆ ಯತ್ನ ಪ್ರಕರಣ, ಕೊಲೆ ಪ್ರಕರಣವಾಗಿ ಬದಲಾಗಿದೆ. ಪಾಠಕ್ ಅವರ ನಡತೆಯ ಬಗ್ಗೆ ಜಿಲ್ಲಾ ಎಸ್ಪಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದು ಪೂರ್ಣಗೊಂಡ ಬಳಿಕ ಆತನನ್ನು ಬಂಧಿಸುವ ಸಾಧ್ಯತೆ ಇದೆ’’ ಎಂದು ಜಿಲ್ಲಾಧಿಕಾರಿ ಆರ್.ಕೆ.ದುಭೆ ಹೇಳಿದರು.
ಕೃಪೆ: Scroll.in
ಮಾರಕ ಸಾಧನದಿಂದ ಹೊಡೆದ ಗಾಯದಿಂದ ಸಂಭವಿಸಿದ ರಕ್ತಸ್ರಾವ ಹಾಗೂ ಆಘಾತದಿಂದ ಮಿನಾಝ್ ಮೃತಪಟ್ಟಿದ್ದಾಗಿ ಸರಕಾರದ ಅಟಾಪ್ಸಿ ವರದಿ ಹೇಳುತ್ತದೆ. ಈ ವರದಿ ಬಂದು ಎರಡು ವಾರ ಕಳೆದರೂ, ಅನ್ಸಾರಿಯನ್ನು ಬಂಧನದಲ್ಲಿ ಇಟ್ಟು ಕೊಂಡಿದ್ದ ಜಾಮತಾರ ಜಿಲ್ಲೆಯ ನಾರಾಯಣಪುರ ಠಾಣೆಯ ಅಧಿಕಾರಿ ಹರೀಶ್ ಪಾಠಕ್ ಹಾಗೂ ವಿಶ್ವಹಿಂದೂ ಪರಿಷತ್ತಿನ ಮುಖಂಡ ಸೋನು ಸಿಂಗ್ ಅವರನ್ನು ಬಂಧಿಸಿಲ್ಲ. ಈ ಇಬ್ಬರು ಠಾಣೆಯಲ್ಲಿ ಅನ್ಸಾರಿಯವರನ್ನು ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.