ವಿದ್ಯಾರ್ಥಿ ನಾಪತ್ತೆ: ಪೊಲೀಸರಿಗೆ ದೂರು
ಪುತ್ತೂರು, ನ.10: ಪಿಜಿಯಲ್ಲಿ ವಾಸ್ತವ್ಯವಿದ್ದ ಕಾಲೇಜು ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಕುರಿತು ಗುರುವಾರ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಕೇರಳದ ಮಂಜೇಶ್ವರ ತಾಲೂಕಿನ ಪಡ್ರೆ ಗ್ರಾಮದ ವಾಣಿನಗರ ಸಮೀಪದ ಬೈರಡ್ಕ ಎಂಬಲ್ಲಿನ ನಿವಾಸಿ ಗಿರಿಯಪ್ಪ ಪೂಜಾರಿ ಎಂಬವರ ಪುತ್ರ ಪ್ರಸನ್ನ ಕುಮಾರ್(17) ನಾಪತ್ತೆಯಾದ ವಿದ್ಯಾರ್ಥಿ.
ಪುತ್ತೂರು ತಾಲೂಕಿನ ನೆಹರೂನಗರ ಸಮೀಪದ ಪಿಜಿಯಲ್ಲಿದ್ದುಕೊಂಡು ಸ್ಥಳೀಯ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪ್ರಸನ್ನ ಕುಮಾರ್ ನ.6ರಂದು ಮನೆಗೆ ಹೋಗುವುದಾಗಿ ಹೇಳಿ ಪಿಜಿಯಿಂದ ತೆರಳಿದ್ದರು. ಆದರೆ ಅತ್ತ ಮನೆಗೆ ಹೋಗದೆ ಇತ್ತ ಪಿಜಿಗೂ ಮರಳಿ ಬಾರದೆ ನಾಪತ್ತೆಯಾಗಿದ್ದರು. ವಿವಿಧೆಡೆ ಆತನಿಗಾಗಿ ಹುಡುಕಾಟ ನಡೆಸಿದರೂ ಆತನ ಪತ್ತೆಯಾಗದ ಹಿನ್ನೆಲೆಯಲ್ಲಿ ಆತನ ತಂದೆ ನಗರ ಪೊಲೀಸರಿಗೆ ತನ್ನ ಮಗನನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದಾರೆ.
ಅಪಹರಣ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story