ದ.ಕ. ಜಿಲ್ಲೆಯ ಓರ್ವ ವಿದ್ಯಾರ್ಥಿನಿಗೆ ರಾಷ್ಟ್ರ, ಮೂವರಿಗೆ ರಾಜ್ಯ ಪ್ರಶಸ್ತಿ
ಮಂಗಳೂರು, ನ. 13: ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ದ.ಕ.ಜಿಲ್ಲೆಯ 4 ಮಂದಿ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿನಿಗೆ ರಾಷ್ಟ್ರ ಪ್ರಶಸ್ತಿ ಹಾಗೂ ಮೂವರು ವಿದ್ಯಾರ್ಥಿಗಳು ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೆಂಬರ್ 14ರಂದು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಜರಗುವ ಮಕ್ಕಳ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.
ಧೃತಿ ಮುಂಡೋಡಿ
ಈಕೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಎಸ್.ಮಣಿ ಎಂಬವರ ಪುತ್ರಿ. ವಿಜ್ಞಾನ ಕ್ಷೇತ್ರದಲ್ಲಿ (ವಿಜ್ಞಾನದ ಮಾದರಿ ಪ್ರದರ್ಶನ) ಮಾಡಿದ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ 2016ನೆ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ರಜತ ಪದಕ ಹಾಗೂ ರೂ.10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ನವಂಬರ್ 14ರಂದು ನಡೆಯುವ ಮಕ್ಕಳ ದಿನಾಚರಣೆಯಂದು ರಾಷ್ಟ್ರಪತಿಗಳಿಂದ ಸ್ವೀಕರಿಸಲಿದ್ದಾಳೆ. ಈಕೆ ಅನೇಕ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು, ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ.
ವಷಾ ವಿ.:
ಈಕೆ ಕಾವೂರು ಕೆಪಿಟಿಸಿಎಲ್ ಕಾಲನಿ ನಿವಾಸಿ ವಿಜಯ ಕುಮಾರ್ ಎಂಬವರ ಪುತ್ರಿ. ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯು ಓಟದ ಸ್ಪರ್ಧೆಯಲ್ಲಿ ಅನೇಕ ರಾಷ್ಟ್ರ, ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಭಾಗವಹಿಸಿ ಉತ್ತಮ ನಿರ್ವಹಣೆ ನೀಡಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾಳೆ. ವಿದ್ಯಾರ್ಥಿನಿಯ ಪ್ರತಿಭೆಯನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ನವೆಂಬರ್ 14ರಂದು ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರಿಸಿ ಸನ್ಮಾನಿಸಲಾಗುವುದು.
ಸುನಾದ ಕೃಷ್ಣ. ಎ.
ಈತ ಪಡೀಲ್ನ ಹೇಮಾವತಿನಗರದ ಡಾ.ಕುಮಾರ ಸುಬ್ರಮಣ್ಯ ಭಟ್.ಎ. ಎಂಬವರ ಪುತ್ರ. ಸಂಗೀತ ಕ್ಷೇತ್ರದಲ್ಲಿ ವಿದ್ಯಾರ್ಥಿಯು ಮೃದಂಗ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಉತ್ತಮ ನಿರ್ವಹಣೆ ನೀಡಿ ಅನೇಕ ಪ್ರಶಸ್ತಿಗಳಿಗೆ ಭಾಜನನಾಗಿದ್ದಾನೆ. ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ನ.14ರಂದು ಪುರಸ್ಕರಿಸಿ ಸನ್ಮಾನಿಸಲಾಗುವುದು.
ಶ್ರೀ ರಕ್ಷಾ
ಈಕೆ ಬಿಜೈ ಕೆಎಂಸಿ ಬಳಿಯ ನಿವಾಸಿ ರಾಜಾ ರಾವ್ ನಾಯಕ್ ಎಂಬವರ ಪುತ್ರಿ. ಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯು ಚಿತ್ರಕಲಾ ಸ್ಪರ್ಧೆಯಲ್ಲಿ ಅನೇಕ ರಾಷ್ಟ್ರ, ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾಳೆ. ವಿದ್ಯಾರ್ಥಿನಿಯ ಸಾಧನೆಗಾಗಿ ನ. 14ರಂದು ನಡೆಯುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ, ಪುರಸ್ಕಾರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.