ಹಲವು ವರ್ಷಗಳಿಂದ ಪಾವತಿಯಾಗಿಲ್ಲ ‘ಶವಸಂಸ್ಕಾರ’ದ ಸಹಾಯಧನ
ಕಂದಾಯ ಇಲಾಖೆಯ ವಿರುದ್ಧ ತಾ.ಪಂ ಸದಸ್ಯರ ಆಕ್ಷೇಪ
ಮಂಗಳೂರು, ನ.22:ಬಿಪಿಎಲ್ ಕುಟುಂಬದ ಸದಸ್ಯರು ಮರಣ ಹೊಂದಿದಾಗ ಶವ ಸಂಸ್ಕಾರಕ್ಕಾಗಿ ಸರಕಾರದಿಂದ ನೀಡಲಾಗುವ ಆರ್ಥಿಕ ಸಹಾಯಧನ ತಲಾ 5,000 ರೂ.ನ್ನು ಕಂದಾಯ ಇಲಾಖೆಯಿಂದ ಫಲಾನುಭವಿಗಳಿಗೆ ನೀಡದೆ ಹಲವು ವರ್ಷಗಳಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದಾರೆ.
ಬಡವರ ಕುಟುಂಬಗಳಿಗೆ ಮರಣದ ಸಂದರ್ಭದಲ್ಲಿ ನೀಡಲಾಗುವ 1,000 ರೂ.ಸಹಾಯಧನವನ್ನು ಈಗ 5,000ಕ್ಕೆ ಹೆಚ್ಚಿಸಲಾಗಿದೆ. ಅದನ್ನು ನೀಡದೆ ನಾಲ್ಕೈದು ವರ್ಷಗಳಾಗಿವೆ ಎಂದು ನೀರುಮಾರ್ಗದ ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಉತ್ತರ ನೀಡಿದ ಮಂಗಳೂರು ತಹಶೀಲ್ದಾರ್ ಮಹಾದೇವಯ್ಯ, ಮಂಗಳೂರು ತಾಲೂಕಿನಲ್ಲಿ ಒಟ್ಟು 1,003 ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಕಾರದಿಂದ 32,32,000 ರೂ. ಅನುದಾನ ಸರಕಾರದಿಂದ ಬರಬೇಕಾಗಿದೆ. ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾಗಿಲ್ಲ. ಬಂದಿರುವ ಅನುದಾನವನ್ನು ನೀಡಿರುವುದಾಗಿ ಸಭೆಗೆ ತಿಳಿಸಿದರು.
ಬಿಪಿಎಲ್ ಕುಟುಂಬದ ಸದಸ್ಯರು ಮರಣ ಹೊಂದಿದಾಗ ಅವರ ಕುಟುಂಬಕ್ಕೆ ಆರ್ಥಿಕ ಹೊರೆಯಾಗಬಾರದು ಎಂದು ತಲಾ 1,000 ರೂ. ಹಣವನ್ನು ಸರಕಾರದ ವತಿಯಿಂದ ನೀಡಲಾಗುತ್ತಿತ್ತು. ಎಪ್ರಿಲ್ 2015ರ ನಂತರ ಈ ಅನುದಾನವನ್ನು ತಲಾ 5,000 ರೂ.ಗಳಿಗೆ ಏರಿಸಲಾಗಿದೆ. ಕಳೆದ ಅ.3ರಂದು 1,10,000 ರೂ.ಗಳನ್ನು 22 ಫಲಾನುಭವಿಗಳಿಗೆ ವಿತರಿಸಲಾಗಿದೆ. ಉಳಿದಂತೆ ಮಂಗಳೂರು ತಾಲೂಕಿನಲ್ಲಿ ಒಟ್ಟು 340 ಫಲಾನುಭವಿ ಕುಟುಂಬಗಳಿಗೆ ತಲಾ 5,000ರೂ.ಗಳಂತೆ 17ಲಕ್ಷ ಅನುದಾನಕ್ಕೆ ಪ್ರಸ್ತಾವನೆಯನ್ನು ಈಗಾಗಲೆ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ತಿಳಿಸಿದ್ದಾರೆ.
ಕೆಆರ್ಐಡಿಎಲ್ ಇಂಜಿನಿಯರಿಂಗ್ ವಿಭಾಗದವರಿಗೆ ವಹಿಸಿರುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ನಿಗದಿತ ಅವಧಿಯೊಳಗೆ ಕಾರ್ಯ ನಿರ್ವಹಿಸುತ್ತಿಲ್ಲ. ಅವರ ಬಗ್ಗೆ ಭ್ರಷ್ಟಾಚಾರದ ಆರೋಪವೂ ಇದೆ ಎಂದು ತಾಲೂಕು ಪಂಚಾಯತ್ ಸದಸ್ಯರು ಆರೋಪಿಸಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಅಧ್ಯಕ್ಷರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿಗಳ ಬಗ್ಗೆ ತಕ್ಷಣ ವರದಿ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ಕುಟಿನ್ಹೋ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎಂ.ಜಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.