ಪುತ್ತೂರು: ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಕ್ಸಮರ
ಪುತ್ತೂರು ನಗರಸಭೆಯಲ್ಲಿ ಮತ್ತೆ ‘ವಾರದ ಸಂತೆ’ ವಿವಾದ
ಪುತ್ತೂರು, ನ.23: ಸಂತೆ ಸ್ಥಳಾಂತರಕ್ಕೆ ಸಂಬಂಧಿಸಿ ನಗರಸಭೆಯ 10 ಮಂದಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರೂ, ವಿರೋಧಕ್ಕೆ ಬಹುಮತವಿದ್ದರೂ ನಿರ್ಣಯವನ್ನು ತಿರುಚಿ ಹೈಕೋರ್ಟ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ಸದಸ್ಯರು ಬುಧವಾರ ನಡೆದ ಪುತ್ತೂರು ನಗರಸಭೆಯ ಸಾಮಾನ್ಯ ಸಬೆಯಲ್ಲಿ ಆರೋಪಿಸಿ, ಸಂತೆ ಸ್ಥಳಾಂತರ ವಿಚಾರದಲ್ಲಿ ಆಡಳಿತ ಪಕ್ಷ ಕೈಗೊಂಡ ತೀರ್ಮಾನಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂತೆ ವಿಚಾರದಲ್ಲಿ ಬಿಜೆಪಿ ಮತ್ತು ಆಡಳಿತ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಸಮರ ನಡೆಯಿತು. ಸಂತೆ ಸ್ಥಳಾಂತರಕ್ಕೆ ನೀವೇ ಕಾರಣ ಎಂದು ಕಾಂಗ್ರೆಸ್ ಸದಸ್ಯರ ವಿರುದ್ಧ ಆರೋಪಿಸಿದ ಬಿಜೆಪಿ ಸದಸ್ಯರು ನಿಮಗೆ ಕಷ್ಟವಾಗುವುದಾದರೆ ರಾಜೀನಾಮೆ ನೀಡಿ ಆಡಳಿತವನ್ನು ವಿಸರ್ಜಿಸಿ. ನಾವೂ 10 ಮಂದಿ ಸದಸ್ಯರು ರಾಜೀನಾಮೆ ನೀಡುತ್ತೇವೆ ಎಂದರಲ್ಲದೆ ಮುಂದಿನ ಸೋಮವಾರದಿಂದ ಕಿಲ್ಲೆ ಮೈದಾನದಲ್ಲೇ ಸಂತೆ ಮಾಡಲು ಆಗುತ್ತದೋ ಇಲ್ಲವೋ ಎಂಬ ಕುರಿತು ಅಧ್ಯಕ್ಷರು ಸ್ಪಷ್ಟವಾಗಿ ತಿಳಿಸಬೇಕೆಂದು ಆಗ್ರಹಿಸಿದರು.
ಕೊನೆಗೆ ಅಧ್ಯಕ್ಷರು ಒಂದು ವಾರದೊಳಗೆ ವಿಶೇಷ ಸಭೆ ಕರೆದು ಸಂತೆ ವಿಚಾರಕ್ಕೆ ಸಂಬಂಧಿಸಿ ತೀರ್ಮಾನ ಕೈಗೊಳ್ಳುವುದಾಗಿ ರೂಲಿಂಗ್ ನೀಡಿದರು.
ವಿಷಯ ಪ್ರಸ್ತಾಪಿಸಿದ ಸದಸ್ಯ ರಾಜೇಶ್ ಬನ್ನೂರು, ಸಂತೆ ಸ್ಥಳಾಂತರಕ್ಕೆ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿ, ಆಕ್ಷೇಪ ಸಲ್ಲಿಸಲು ದಿನಾಂಕ ನಿಗದಿ ಪಡಿಸಿದ್ದ ಸಂದರ್ಭದಲ್ಲಿ 143 ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 5 ಮಂದಿ ರೈತರು ಆಕ್ಷೇಪ ಸಲ್ಲಿಸಿದ್ದಾರೆ. ಆದರೆ ನೀವು ನಿಗದಿಪಡಿಸಿದ್ದ ದಿನಾಂಕದೊಳಗೆ ಆಕ್ಷೇಪ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ನಗರಸಭೆಯ ಸಭೆಯಲ್ಲಿ ಸಂತೆ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಸದಸ್ಯರಾದ ನಾವು 10 ಮಂದಿ ಲಿಖಿತ ಆಕ್ಷೇಪ ಸಲ್ಲಿಸಿದ್ದೆವು. ಸಭೆಯಲ್ಲಿ ಅಂದು ಇದ್ದ 20 ಮಂದಿಯಲ್ಲಿ ಆಡಳಿತ ಪಕ್ಷದ 6 ಮಂದಿ, ನಾಮನಿರ್ದೇಶಿತ 3ಮಂದಿ ಹಾಗೂ ಮತದಾನದ ಹಕ್ಕಿನಿಂದ ಕೈಬಿಡಲಾದ ಒಬ್ಬರು ಸದಸ್ಯರು ಇದ್ದರು. ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲದಿರುವಾಗ ಸಂತೆ ಸ್ಥಳಾಂತರಕ್ಕೆ ವ್ಯಕ್ತವಾದ ನಮ್ಮ 10 ಮಂದಿಯ ವಿರೋಧಕ್ಕೆ ಬಹುಮತವಾಯಿತು. ಹೀಗಿದ್ದರೂ 10-10 ಎಂದು ನಿರ್ಣಯವನ್ನು ತಿರುಚಿದ್ದೀರಿ ಎಂದಾದರೆ ಇಲ್ಲಿ ಕೈಗೊಳ್ಳಲಾಗುವ ನಿರ್ಣಯಗಳಿಗೆ ಏನು ಬೆಲೆಯಿದೆ ಎಂದು ಪ್ರಶ್ನಿಸಿದರು.
ವಿರೋಧಕ್ಕೆ ಬಹುಮತವಿದ್ದರೂ ನಿರ್ಣಯವನ್ನು ತಿರುಚಿ ಹೈಕೋರ್ಟ್ಗೆ ಸುಳ್ಳು ಮಾಹಿತಿ ನೀಡಿದ್ದೀರಿ ಎಂದು ಪೌರಾಯುಕ್ತರ ವಿರುದ್ಧ ಆರೋಪಿಸಿದ ಅವರು ಆಗ ನೀವು ಇರಲಿಲ್ಲ ಎಂಬ ಒಂದೆ ಒಂದು ಕಾರಣಕ್ಕಾಗಿ ನಾವು ಕಾನೂನು ಹೋರಾಟಕ್ಕೆ ಹೋಗುವುದಿಲ್ಲ ಎಂದು ತಿಳಿಸಿದರು. ಉಪವಿಭಾಗಾಧಿಕಾರಿಗಳು ಸಂತೆ ವಿಚಾರಕ್ಕೆ ಸಂಬಂಧಿಸಿ ಕೈಗೊಂಡ ಆದೇಶ ಪೂರ್ಣ ಪ್ರಮಾಣದ ಆದೇಶವಲ್ಲ ಎಂದು ತಿಳಿಸಿದ್ದರೂ ನಿಮ್ಮ ಕಾನೂನು ಸಲಹೆಗಾರರು ಸರಿ ಎಂದು ಹೇಳಿದ್ದಾರೆ ಎಂದರೆ ನಿಮ್ಮ ಸಂತೆ ಸ್ಥಳಾಂತರದ ಒಟ್ಟು ಉದ್ದೇಶವಾದರೂ ಏನು ಎಂದು ಕೇಳಿದ ಅವರು ಉಪವಿಭಾಗಾಧಿಕಾರಿ ವಿಧಿಸಿರುವ ಶರತ್ತುಗಳಲ್ಲಿ ಸದ್ಯ ಯಾವುದನ್ನೂ ಈಡೇರಿಸುವ ಸಾಧ್ಯತೆ ಕಾಣುತ್ತಿಲ್ಲ. ಹೀಗಿರುವಾಗ ಸಂತೆಗೆ ಪರ್ಯಾಯ ವ್ಯವಸ್ಥೆ ಆಗುವ ತನಕ ಕಿಲ್ಲೆ ಮೈದಾನದಲ್ಲಿ ಸಂತೆ ಮಾಡಿ, ಇಲ್ಲದಿದ್ದರೆ ಕಿಲ್ಲೆ ಮೈದಾನದಲ್ಲಿ ಸಂತೆ ಮಾಡಬೇಕೇ ಬೇಡವೇ ಎಂಬುವುದನ್ನು ಸ್ಪಷ್ಟಪಡಿಸಿ ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷದ ಸದಸ್ಯ ಎಚ್.ಮುಹಮ್ಮದ್ ಅಲಿ, ಸಂತೆ ಸ್ಥಳಾಂತರದ ಬಳಿಕ ಸುಮಾರು 250 ಮಂದಿ ಸಂತೆ ವ್ಯಾಪಾರಿಗಳ ಪೈಕಿ 30 ಮಂದಿ ಮಾತ್ರ ಈಗ ವ್ಯಾಪಾರ ಮಾಡುತ್ತಿದ್ದು, ತುಂಬಾ ಜನರಿಗೆ ತೊಂದರೆ ಆಗಿದೆ ಎಂಬುವುದು ಸ್ಪಷ್ಟ. ಆದರೆ ಇದನ್ನು ನಗರಸಭೆಯ ಆಡಳಿತದ ತಲೆಗೆ ಕಟ್ಟುವ ಕುತಂತ್ರ ಕುತಂತ್ರ ನಡೆದಿದೆ. ಆದರೆ ನಾವು ನಗರದೊಳಗೆ ಸಂತೆಗೆ ಅನುಕೂಲವಾಗುವ ಎಲ್ಲಾ ಜಾಗವನ್ನು ನಿದ್ದೆ ಬಿಟ್ಟು ಹುಡುಕಿದ್ದೇವೆ. ಕಿಲ್ಲೆ ಮೈದಾನದಲ್ಲಿಯೇ ಮಾಡುವುದಿದ್ದರೆ ನಮ್ಮದೇನೂ ಅಡ್ಡಿಯಿಲ್ಲ. ಅಲ್ಲಿ 50 ಮಂದಿಗೆ ಮಾತ್ರ ಸಂತೆ ವ್ಯಾಪಾರ ಮಾಡಲು ಅವಕಾಶವಿರುವುದರಿಂದ ನಿಮ್ಮ ಅಭಿಪ್ರಾಯ ತಿಳಿಸಿ, ಶಾಸಕರ ಅಭಿಪ್ರಾಯ ಕೂಡ ಪಡೆದುಕೊಂಡು ಮಾಡಬೇಕಾಗುತ್ತದೆ ಎಂದರು. ಆದರೆ ಪೊಲೀಸ್ ಭದ್ರತೆಯಲ್ಲಿ ಸಂತೆ ನಡೆಸುವ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಂತೆಗೆ ಪರ್ಯಾಯ ಜಾಗ ಸಿಗುವ ತನಕ ಕಿಲ್ಲೆ ಮೈದಾನದಲ್ಲೇ ಮಾಡಿ. ಸಂತೆ ಟೆಂಡರ್ ವಹಿಸಿಕೊಂಡವರಿಗೆ ಜವಾಬ್ದಾರಿ ಕೊಟ್ಟು ಅವರನ್ನೇ ಸಂತೆ ನಿರ್ವಹಣೆಗೆ ಜವಾಬ್ದಾರರನ್ನಾಗಿ ಮಾಡಿ ಎಂದು ಸದಸ್ಯ ಜೀವಂಧರ್ ಜೈನ್ ತಿಳಿಸಿದರು. ಸದಸ್ಯ ರಾಮಣ್ಣ ಗೌಡ ಅಲಂಗ ಈ ಮಾತಿಗೆ ಧ್ವನಿಗೂಡಿಸಿದರು. ಕಷ್ಟವಾಗುವುದಾದರೆ ಆಡಳಿತ ವ್ಯವಸ್ಥೆಯನ್ನು ವಿಸರ್ಜನೆ ಮಾಡಿ, ನಾವು ಬೇಕಾದರೆ ರಾಜೀನಾಮೆ ನೀಡುತ್ತೇವೆ ಎಂದು ರಾಜೇಶ್ ಬನ್ನೂರು ಹೇಳಿದರು. ವಾರದೊಳಗೆ ವಿಶೇಷ ಸಭೆ ಕರೆದು ಮುಂದಿನ ಸೋಮವಾರದೊಳಗೆ ಕಿಲ್ಲೆ ಮೈದಾನದಲ್ಲಿಯೇ ಸಂತೆ ಮಾಡೋಣ ಎಂದು ಮುಹಮ್ಮದ್ ಅಲಿ ತಿಳಿಸಿದರು.