ಮತ್ಸ ಸಂಪತ್ತಿನ ರಕ್ಷಣೆಗೆ ಗಂಭೀರ ಚಿಂತನೆ ಅಗತ್ಯ: ಡಾ.ಶಿವಪ್ರಕಾಶ್
‘ಜವಾಬ್ದಾರಿಯುತ ಮೀನುಗಾರಿಕೆ’ ಜಾಗೃತ ಕಾರ್ಯಾಗಾರ
ಮಂಗಳೂರು, ನ.25: ದೇಶದ ಸಂಪತ್ತಾಗಿರುವ ಮತ್ಸ್ಯ ಸಂಪತ್ತನ್ನು ಕಾಪಾಡುವ ಗಂಭೀರ ಚಿಂನೆ ನಡೆಸುವ ಅಗತ್ಯವಿದೆ ಎಂದು ಬೀದರ್ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಂ.ಶಿವಪ್ರಕಾಶ್ ಹೇಳಿದರು.
ಮಂಗಳೂರಿನ ಮೀನುಗಾರಿಕೆ ಮಹಾ ವಿದ್ಯಾಲಯದ ಪ್ರೊ.ಎಚ್.ಪಿ.ಸಿ. ಶೆಟ್ಟಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಜವಾಬ್ದಾರಿಯುತ ಮೀನುಗಾರಿಕೆ’ ಜಾಗೃತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾನೂನಿನ ಚೌಕಟ್ಟಿನಲ್ಲಿ, ಉತ್ತರ ದಾಯಿತ್ವವಾಗಿ, ನಂಬಿಕೆ, ಪಾರದರ್ಶಕ, ವೈಜ್ಞಾನಿಕ ತಳಹದಿಯ ಮೇಲೆ ನಡೆಯುವ ಮೀನುಗಾರಿಕೆಯನ್ನು ಜವಾಬ್ದಾರಿಯುತ ಮೀನುಗಾರಿಕೆ ಎಂದು ಪರಿಗಣಿಸಬಹುದು. ಆದರೆ ಪ್ರಸ್ತುತ ಹೆಚ್ಚಿನ ಮೀನುಗಾರರೆಲ್ಲ ಇದನ್ನು ಮರೆತು ಮೀನುಗಾರಿಕೆ ನಡೆಸುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಅಮೆರಿಕದ ಕ್ಯಾಲಿೆರ್ನಿಯಾದಲ್ಲಿ ಒಂದು ಕಾಲದಲ್ಲಿ ಅತ್ಯಂತ ಹೆಚ್ಚು ಮತ್ಸ್ಯ ಸಂಪತ್ತು ದೊರೆಯುತ್ತಿತ್ತು. ಆದರೆ ನಿಗದಿತ ಪ್ರಮಾಣಕ್ಕಿಂತ ಕಾನೂನು ಚೌಕಟ್ಟನ್ನು ಮೀರಿ ಮೀನುಗಾರಿಕೆ ನಡೆಸಿದ ಪರಿಣಾಮ ಆ ದೇಶದ ವ್ಯಾಪ್ತಿಯ ಸಮುದ್ರದಲ್ಲಿ ಮತ್ಸ್ಯ ಸಂಪತ್ತೇ ನಾಶವಾಯಿತು. ನಮ್ಮಲ್ಲೂ ಈ ರೀತಿಯಾಗದಂತೆ ಎಚ್ಚರ ವಹಿಸಬೇಕಿದೆ ಎಂದವರು ಹೇಳಿದರು.
ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಮನೋಹರ ಬೋಳೂರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮೀನಿನ ಸಂತತಿ ಉಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕದೆ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಂ.ಎನ್.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ರಿತೇಶ್ ಸಾಲಿಯಾನ್, ಕಾರ್ಯಕ್ರಮ ಸಂಯೋಜಕ ಡಾ.ಎಚ್.ಎನ್.ಆಂಜನೇಯಪ್ಪ ಉಪಸ್ಥಿತರಿದ್ದರು.