ಸರಕಾರಿ ಶಾಲೆಗಳ ಕಾಯಕಲ್ಪ ತುರ್ತಾಗಿ ಆಗಬೇಕಿದೆ
ಯಾವುದೇ ಒಂದು ದೇಶದ ಪ್ರಗತಿಯಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರ ಮಹತ್ವದ್ದು. ಮಕ್ಕಳು ಉತ್ತಮ ಪ್ರಜೆಗಳಾಗುವುದರಲ್ಲಿ ಶಿಕ್ಷಣದ ಪಾಲು ಪ್ರಮುಖವಾದದ್ದು. ಮೊಳಕೆಯ ಸ್ಥಿತಿಯಲ್ಲೇ ಸೂಕ್ತ ಶಿಕ್ಷಣ ಲಭಿಸಿದರೆ, ಅವರು ಉತ್ತಮ ಪೈರುಗಳಾಗುತ್ತಾರೆ; ನಂತರ ಮರಗಳು, ಹೆಮ್ಮರಗಳಾಗುತ್ತಾರೆ ಕೂಡ. ಹೀಗಾಗುವುದಕ್ಕೆ ಪ್ರಾಥಮಿಕ ಶಿಕ್ಷಣದ ಭದ್ರ ಬುನಾದಿ ಆವಶ್ಯ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತೀರ ಹಿಂದುಳಿದ ಅನೇಕ ಬಡ ಕುಟುಂಬಗಳ ಮಕ್ಕಳಿಗೆ ಸರಕಾರಿ ಶಾಲೆಗಳೇ ಶಿಕ್ಷಣದ ದಾರಿದೀಪಗಳಾಗಿವೆ. ಕಳೆದ ಕೆಲವು ದಶಕಗಳಿಂದ ಪ್ರಾಥಮಿಕ ಶಿಕ್ಷಣವನ್ನು ಖಾಸಗೀಕರಿಸಬೇಕೆಂಬ ಕೂಗುಗಳು ಕೇಳಿ ಬರುತ್ತಿವೆ. ಹಲವು ಉದ್ಯಮಗಳ ದೊಡ್ಡ ಕುಳಗಳು ಇಂತಹ ದನಿಗಳಿಗೆ ಸಾಥ್ ನೀಡುತ್ತಿದ್ದಾರೆ. ಸರಕಾರಿ ಶಾಲೆಗಳ ನ್ಯೂನತೆಗಳತ್ತ ಕೈ ತೋರಿಸಿ, ಶೈಕ್ಷಣಿಕ ಅಭಿವೃದ್ಧಿಗೆ ಖಾಸಗೀಕರಣವೇ ಮದ್ದು ಎಂಬ ವಾದವನ್ನು ಮಂಡಿಸುತ್ತಾ ಬಂದಿದ್ದಾರೆ. ನಿಜ, ಸರಕಾರಿ ಶಾಲೆಗಳ ವ್ಯವಸ್ಥೆಯಲ್ಲಿ ಅನೇಕ ಕುಂದುಕೊರತೆಗಳಿವೆ. ಅವುಗಳ ನಿವಾರಣೆಗಾಗಿ ಸೂಕ್ತ ಸುಧಾರಣಾ ಕ್ರಮಗಳನ್ನು ಜಾರಿಮಾಡುವುದರತ್ತ ಸರಕಾರಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ, ಮುನ್ನಡೆಯಬೇಕು. ಪ್ರಾಥಮಿಕ ಶಿಕ್ಷಣದ ಖಾಸಗೀಕರಣದಿಂದ ಉಂಟಾಗುವ ಆರ್ಥಿಕ ಹೊರೆಯಿಂದ ಅಧಿಕ ಸಂಖ್ಯೆಯ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ.
ಕೆಳಕಂಡ ಅಂಶಗಳು ನಮ್ಮ ಶಿಕ್ಷಣ ಮತ್ತು ಸರಕಾರಿ ಶಾಲೆಗಳ ವಸ್ತು(ದು)ಸ್ಥಿತಿಯನ್ನು ಬಿಂಬಿಸುತ್ತವೆ: ಅ) ಕರ್ನಾಟಕದಲ್ಲಿ 2016ರ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ 791 ಸರಕಾರಿ ಶಾಲೆಗಳು ಪುನರಾರಂಭ ಗೊಳ್ಳಲಿಲ್ಲ. ಆ) ನಮ್ಮ ದೇಶಾದ್ಯಂತ ಸುಮಾರು 5 ಲಕ್ಷ ಮಂಜೂರಾದ ಶಿಕ್ಷಕ ಸ್ಥಾನಗಳು ಖಾಲಿಯಿವೆ. ಕರ್ನಾಟಕದಲ್ಲಿ ಇವುಗಳ ಸಂಖ್ಯೆ 37,000ರಷ್ಟಿವೆ. ಇ) ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ (ಆರ್ಟಿಇ-2009)ಯಡಿಯಲ್ಲಿ ಕರ್ನಾಟಕ ಸರಕಾರ ಪ್ರತಿಯೊಂದು ಮಗುವಿಗೆ ರೂ. 11800 ಖರ್ಚು ಮಾಡುತ್ತಿದೆ. ಈ ಕಾಯ್ದೆ ಜಾರಿಯಾದ ಸಮಯದಿಂದ ರಾಜ್ಯ ಸರಕಾರ ಖಾಸಗಿ ಶಾಲೆಗಳಿಗೆ ರೂ. 368 ಕೋಟಿ ತುಂಬಿಕೊಟ್ಟಿದೆ ಹಾಗೂ ಮುಂಬರುವ ವರ್ಷಗಳಲ್ಲಿ ಇದರ ಮೊತ್ತ ದುಪ್ಪಟ್ಟಾಗಬಹುದೆಂದು ಅಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಸಚಿವ ಕಿಮ್ಮನೆ ರತ್ನಾಕರ ನವೆಂಬರ್ 2015ರಲ್ಲಿ ತಿಳಿಸಿದ್ದರು. ಈ) ಸ್ವಾತಂತ್ರ್ಯ ಗಳಿಸಿದ 70 ವರ್ಷಗಳ ತರುವಾಯ ನಮ್ಮಲ್ಲಿ 28.26 ಕೋಟಿ ಮಂದಿ (ಏಳು ವರ್ಷ ಮೇಲ್ಪಟ್ಟು) ಅನಕ್ಷರಸ್ಥರಿದ್ದಾರೆ. ಉ) ಕರಡು ರಾಷ್ಟ್ರೀಯ ಶಿಕ್ಷಣ ನೀತಿ(2016)ಯ ಅನ್ವಯ ಪ್ರತಿ 10 ಮಕ್ಕಳ ಪೈಕಿ 4 ಮಕ್ಕಳು 8ನೆ ತರಗತಿ ಮುಗಿಸುವ ಮುನ್ನವೇ ಶಾಲೆಗಳಿಂದ ನಿರ್ಗಮಿಸುತ್ತಾರೆ. ಇಂತಹವರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು. ಊ) ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳ ಅನೇಕ ಸರಕಾರಿ ಶಾಲೆಗಳಲ್ಲಿ 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಋ) ಇತ್ತೀಚಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವರದಿ ಅನ್ವಯ ಯುವ ಸಾಕ್ಷರತಾ ವಿಷಯದಲ್ಲಿ ಲಿಂಗ ತಾರತಮ್ಯದ ಅಂತರ ಜಾಸ್ತಿಯಿದೆ ಮತ್ತು ಅಧಿಕ ಸಂಖ್ಯೆಯ ಮಕ್ಕಳು ಶಾಲೆಗಳಲ್ಲಿ ಉಳಿ ಯುತ್ತಿಲ್ಲ. ಋೂ) ವಿಕಲಾಂಗ ಚೇತನದ, ತೀರ ದೂರದ ಸ್ಥಳಗಳಲ್ಲಿರುವ, ವಲಸೆಗೊಂಡಿರುವ ಮತ್ತು ಬಡ ಮಕ್ಕಳಿಗೆ ಶಿಕ್ಷಣ ದೊರೆಯುವುದು ಕಷ್ಟವಾಗುತ್ತಿದೆ. ಎ) ಆರ್ಟಿಇ ಕಾಯ್ದೆಯ ಪ್ರಕಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ 30:1 ಇರಬೇಕು. ಆದರೆ ನಮ್ಮ ದೇಶದಲ್ಲಿ ಶೇ. 37ರಷ್ಟು ಸರಕಾರಿ ಶಾಲೆಗಳಲ್ಲಿ ಈ ಅನುಪಾತವಿಲ್ಲ.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಣದ ವಿತರಣೆಯ ನಿಟ್ಟಿನಲ್ಲಿ ಕೇಂದ್ರ ಸರಕಾರ (ಅದು ಯಾವುದೇ ಇರಲಿ) ್ಛಜಿಠ್ಚಚ್ಝ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ವರ್ಗಾಯಿಸುತ್ತಾ ಬಂದಿದೆ. ರಾಜ್ಯ ಸರಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಮಹತ್ವವನ್ನು ಮನಗಂಡು ಅವುಗಳನ್ನು ಉತ್ತಮಪಡಿಸುವುದರ ಬದಲು ಕಡಿಮೆ ಮಕ್ಕಳು ಸರಕಾರಿ ಶಾಲೆಗಳಿಗೆ ಸೇರುತ್ತಿರುವರೆಂಬ ನೆಪದಡಿ ಅವುಗಳನ್ನು ಮುಚ್ಚುತ್ತಿವೆ. ಈ ವಿಷಯದಲ್ಲಿ ರಾಜಸ್ಥಾನ, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರ ಮುಂಚೂಣಿಯಲ್ಲಿವೆ. 2016-2017ರ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಕರ್ನಾಟಕ ಸರಕಾರ 3000 ಸರಕಾರಿ ಶಾಲೆಗಳನ್ನು ಮುಚ್ಚಲಾಗುವುದೆಂದು ಘೋಷಿಸಿದಾಗ ವ್ಯಾಪಕ ಪ್ರತಿರೋಧ ವ್ಯಕ್ತವಾಗಿ ಈ ಕ್ರಮವನ್ನು ಜಾರಿಮಾಡಲಿಲ್ಲ. ಅಲ್ಲದೆ 1990ರ ಆದಿಯಂದ ಜಾರಿಯಾಗುತ್ತಿರುವ ನವಉದಾರ ನೀತಿಗಳ ಪರಿಣಾಮಗಳಿಂದ ಕೇಂದ್ರ ಸರಕಾರ ಕ್ರಮೇಣ ಸಾಮಾಜಿಕ ಕ್ಷೇತ್ರಗಳಾದ ಆರೋಗ್ಯ, ಶಿಕ್ಷಣ ಮುಂತಾದವುಗಳಿಂದ ಹಿಂದೆ ಸರಿಯುತ್ತಿದೆ. ಬಜೆಟ್ಗಳಲ್ಲಿ ಶಿಕ್ಷಣಕ್ಕಾಗಿ ಒದಗಿಸಲಾಗುತ್ತಿರುವ ಹಣ ರಕ್ಷಣಾ ಕ್ಷೇತ್ರಕ್ಕಿಂತ ತುಂಬ ಕಡಿಮೆ. ಆರ್ಟಿಇಯ ಅನುಷ್ಠಾನಕ್ಕಾಗಿ ಸರ್ವ ಶಿಕ್ಷಾ ಅಭಿಯಾನಕ್ಕೆ ಕೊಡ ಮಾಡಿರುವ ಪಾಲು ನಿರಾಶೆಯನ್ನು ಹುಟ್ಟಿಸುತ್ತದೆ. ಇದು ಜಿಡಿಪಿಯ ಶೇ. 3.5ಕ್ಕಿಂತಲೂ ಕಡಿಮೆಯಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಗಳ ಅನ್ವಯ ಇದು ಶೇ. 6ರಷ್ಟಿರಬೇಕು. 2014-15ರ ಸಾಲಿನಲ್ಲಿ ಸರ್ವ ಶಿಕ್ಷಾ ಅಭಿಯಾನದಡಿಯಲ್ಲಿ ಅನುಮೋದನೆ ಸಿಕ್ಕ ಹಣದ ಮೊತ್ತ ರೂ 54,925 ಕೋಟಿ. 2012-13ಕ್ಕೆ ಹೋಲಿಸಿಞದಾಗ ಇದು ಶೇ. 22ರಷ್ಟು ಕಡಿಮೆಯಾಗಿದ್ದು ಕಂಡುಬಂದಿತು.
ಸರಕಾರಿ ಶಾಲಾ ಸ್ಥಿತಿಗತಿಗಳ ಸುಧಾರಣೆಗೆ ಈ ಕೆಳಕಂಡ ಕೆಲವು ಪರಿಹಾರ ಮಾರ್ಗಗಳನ್ನು ಅನುಸರಿಸಬಹುದು. ಅ) ಸಾಮಾನ್ಯವಾಗಿ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಆದುದ ರಿಂದ ಅಂತಹ ಮಕ್ಕಳ ಮನ:ಸ್ಥಿತಿ, ಜೀವನಶೈಲಿ (ಕುಟುಂಬದ್ದು ಕೂಡ) ಪರಿಗಣನೆಗೆ ತೆಗೆದುಕೊಂಡು ಶಿಕ್ಷಕರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಆ) ಅಂತಹ ಮಕ್ಕಳಿಗೆ ಶಾಲೆಗಳು ಒಂದು ಸಂತಸ ನೀಡುವ ತಾಣಗಳಾಗಬೇಕು. ಏಕೆಂದರೆ ಅವರಿಗೆ ನಿಜವಾದ ಅರ್ಥದಲ್ಲಿ ಮನೋರಂಜನೆ ಸಿಗುವುದಿಲ್ಲ. ಇ) ಓದುವ ಪ್ರಕ್ರಿಯೆಗಳನ್ನು ಸಂತೋಷಕರ ಹಾಗೂ ಆಸಕ್ತಿದಾಯಕವನ್ನಾಗಿ ಮಾಡಲು ಸಮರ್ಪಕ ತಂತ್ರ ಜ್ಞಾನವನ್ನು ಬಳಸಿಕೊಳ್ಳಬೇಕು. ಕಡಿಮೆ ವೆಚ್ಚದ ಸಾಧನ-ಸಲಕರಣೆಗಳನ್ನು ಉಪಯೋಗಿಸಬೇಕು. ಒಟ್ಟಿನಲ್ಲಿ ಮಕ್ಕಳು ಪರಸ್ಪರ ಮತ್ತು ಶಿಕ್ಷಕರೊಡನೆ ಸಂವಾದಿಸಲು ಸರಿಯಾದ ಆಟಗಳನ್ನು ಒಳಗೊಂಡಂತೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಈ) ನಮ್ಮ ದೇಶದ 12ನೇ ಪಂಚ ವಾರ್ಷಿಕ ಯೋಜನೆ (2012-2017)ಯ ಅನ್ವಯ ಶಿಕ್ಷಣ ನೀತಿಗಳ ನಾಲ್ಕು ಪ್ರಮುಖ ಆದ್ಯತೆಗಳೆಂದರೇ- ಲಭ್ಯತೆ (ಅ್ಚ್ಚಛಿ) ಸಮಾನ ಅವಕಾಶಗಳು, ಗುಣಮಟ್ಟ ಮತ್ತು ಆಡಳಿತ. ಇವುಗಳತ್ತ ಗಮನವನ್ನು ಹರಿಸಿ ಸೂಕ್ತವಾದ ಕ್ರಮಗಳನ್ನು ಜರುಗಿಸಬೇಕು. ಉ) 2014ರ ಜಾಗತಿಕ ಮೇಲ್ವಿಚಾರಣಾ ವರದಿಯ ಪ್ರಕಾರ ತನ್ನ ಸ್ವಂತ ಸಂಪನ್ಮೂಲಗಳ ಕ್ರೋಡೀಕರಣದ ಮೂಲಕ ಶಿಕ್ಷಣಕ್ಕೆ ಸೂಕ್ತ ಆರ್ಥಿಕ ಹರಿವನ್ನು ಉಂಟುಮಾಡಬಹುದಾದ ಮಧ್ಯಮ ವರಮಾನದ ದೇಶಗಳ ಪೈಕಿ ಭಾರತ ಸಹ ಒಂದು. ಸಾಂಸ್ಥಿಕ ಕೊರತೆಗಳು ತೆರಿಗೆಗಳ ಪರಿಣಾಮಕಾರಿ ಕ್ರೋಡೀಕರಣಕ್ಕೆ ದೊಡ್ಡ ಕುತ್ತುಗಳು. ಇದಕ್ಕೆ ನಮ್ಮಲ್ಲಿನ ತೆರಿಗೆ ವ್ಯವಸ್ಥೆಯನ್ನು ಸುಧಾರಣೆಗೊಳಿಸಬೇಕು. ಉದಾಹರಣೆಗಾಗಿ, ಬಜೆಟ್ನಲ್ಲಿ ್ಕಛಿಛ್ಞ್ಠಿಛಿ ಊಟ್ಟಛಿಜಟ್ಞಛಿ ಎಂಬ ಅಂಶದತ್ತ ಗಮನವನ್ನು ಹರಿಸಬಹುದು. ಇದರಡಿ ಉತ್ಪಾದನಾ ಮತ್ತು ಸೀಮಾ ಸುಂಕಗಳಿಗೆ ವಿನಾಯಿತಿಗಳನ್ನು ನೀಡಲಾಗುತ್ತಿದೆ. ಇದು ಜಿಡಿಪಿಯ ಶೇ. 5.7ರಷ್ಟಿದೆ. ಒಂದು ಅಂದಾಜಿನಂತೆ ಕಳೆದ 13 ವರ್ಷಗಳಲ್ಲಿ ವಿನಾಯಿತಿಗಳ ಮೊತ್ತ ರೂ. 40 ಲಕ್ಷ ಕೋಟಿಗಿಂತಲೂ ಹೆಚ್ಚಿದೆ. ಇಂತಹ ಮೊತ್ತದಲ್ಲಿ ಶೇ. 20ರಷ್ಟು ಶಿಕ್ಷಣಕ್ಕಾಗಿ ಮೀಸಲಿಟ್ಟರೆ ಸರಕಾರಿ ಶಾಲೆಗಳ ಕಾರ್ಯನಿರ್ವಹಣೆಗೆ ಅನುಕೂಲವಾಗುತ್ತದೆ. ಊ) ಈಗಾಗಲೇ ತಿಳಿಸಿದಂತೆ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ 30:1 ಇರಬೇಕು. ಇದಕ್ಕಾಗಿ ಸುಮಾರು 10 ಲಕ್ಷ ಶಿಕ್ಷಕರನ್ನು ನೇಮಿಸಬೇಕು. ಋ)ಶಿಕ್ಷಕರ ತರಬೇತಿಗೆ ಸಂಬಂಧಿಸಿದಂತೆ ಸಮಗ್ರ ನೀತಿಯೊಂದನ್ನು ರೂಪಿಸಬೇಕಾದ ಆವಶ್ಯಕತೆಯಿದೆ.
ಆರ್ಟಿಇ ಕಾಯ್ದೆ ಸೂಕ್ತವಾಗಿ ಜಾರಿಯಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಧಿಕಾರರೂಢಸ್ತರು ದಿಟ್ಟ, ಸಮಂಜಸ ಕ್ರಮಗಳನ್ನು ಜರುಗಿಸುವಂತೆ ಸಂಸ್ಥೆಗಳು, ಜನಪರ ಸಂಘಟನೆಗಳು ಮತ್ತು ಜನತೆ ತಮ್ಮ ಪಾತ್ರ ವಹಿಸಬೇಕು.