ನೂತನ ಪ್ರೌಢಶಾಲೆಗಳಿಗೆ ಸಂಪುಟ ಅನುಮೋದನೆ: ಸಚಿವ ರೈ
ನೂತನ ರಂಗಮಂದಿರ ಮತ್ತು ನೂತನ ಕ್ರೀಡಾಂಗಣ ಉದ್ಘಾಟನೆ
ಬಂಟ್ವಾಳ, ನ.26: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮದನ್ವಯ ನಿರ್ದಿಷ್ಟ ನೀತಿಗಳನ್ನು ಅಳವಡಿಸಿಕೊಂಡು ಆದ್ಯತೆಗನುಗುಣವಾಗಿ ನೂತನ ಸರಕಾರಿ ಪ್ರೌಢ ಶಾಲೆಗಳಿಗೆ ಅನುಮತಿ ನೀಡಲು ಸಂಪುಟದಿಂದ ಅನುಮೋದನೆ ದೊರಕಿದ್ದು, ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಸರಪಾಡಿ ಸರಕಾರಿ ಪ್ರೌಢಶಾಲೆಯ ನೂತನ ರಂಗಮಂದಿರವನ್ನು ಮತ್ತು ನೂತನ ಕ್ರೀಡಾಂಗಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕೊಳ್ನಾಡು ಸುರಿಬೈಲಿನಲ್ಲಿ ಪ್ರೌಢಶಾಲೆಗೆ ಈಗಾಗಲೇ ಅನುಮತಿ ದೊರೆತಿದ್ದು, ಪಾಂಡವರ ಕಲ್ಲುವಿನಲ್ಲಿ ಅವಕಾಶ ಕೋರಲಾಗಿದೆ ಎಂದು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಶಾಲಾ ಸ್ಥಾಪಕಾಧ್ಯಕ್ಷ ಸರಪಾಡಿ ಎನ್.ಸುಬ್ಬಣ್ಣ ಶೆಟ್ಟಿ, ತಾಪಂ ಸದಸ್ಯರಾದ ಸ್ವಪ್ನಾ ವಿಶ್ವನಾಥ ಪೂಜಾರಿ, ಬೇಬಿ ಕಷ್ಣಪ್ಪ, ವಿಜಯಾ ಬ್ಯಾಂಕ್ ಅಧಿಕಾರಿ ಬೇಬಿ ಕುಂದರ್, ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ತಾಪಂ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಸರಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ದಯಾನಂದ ಶೆಟ್ಟಿ, ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ಗೀತಾ ಶ್ರೀಧರ್ ಪೂಜಾರಿ, ಉಪಾಧ್ಯಕ್ಷ ದಿನೇಶ್ ಮಿಯಾರುಪಲ್ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ಗೋಪಾಲ ಅಂಚನ್ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ಎಸ್.ಪಿ.ಸರಪಾಡಿ ವಿರಚಿತ ‘ಆರೇ ಬರೆಯಿನಾ’ ತುಳು ನಾಟಕ ಕೃತಿಯನ್ನು ಸಂಸದರು ಬಿಡುಗಡೆಗೊಳಿಸಿದರು. ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ಶಿಕ್ಷಕರನ್ನು ಮತ್ತು ಕಳೆದ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಉದಯ ಕುಮಾರ್ ಬಿ. ಸ್ವಾಗತಿಸಿದರು. ಶಿಕ್ಷಕಿ ವನಿತಾ ವರದಿ ವಾಚಿಸಿದರು. ಶಾಲಾಭಿವೃದ್ಧಿ ಸಮಿತಿಯಕಾರ್ಯಾಧ್ಯಕ್ಷ ಪದ್ಮಪ್ಪಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಶಿಕ್ಷಕ ಶೇಖರಪ್ಪವಂದಿಸಿದರು. ಉಪನ್ಯಾಸಕ ಹರಿಪ್ರಸಾದ್ ಮತ್ತು ರಾಧಾಕೃಷ್ಣ ಕೊಟ್ಟುಂಜ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಪದ್ಮಪ್ಪ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ದಯಾನಂದ ಐತಾಳ್ ವಸ್ತು ಪ್ರದರ್ಶನ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.