ಡಿ.2-3ರಂದು ರಾಜ್ಯಮಟ್ಟದ ಹ್ಯಾಂಡ್ಬಾಲ್ ಟೂರ್ನಿ
ಹ್ಯಾಂಡ್ಬಾಲ್ ಟೂರ್ನಿ
ಉಡುಪಿ, ನ.28: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಹಗಲು ಮತ್ತು ಹೊನಲು ಬೆಳಕಿನ ಹ್ಯಾಂಡ್ಬಾಲ್ ಪಂದ್ಯ ಕೂಟವನ್ನು ಡಿ.2 ಮತ್ತು 3ರಂದು ಉಡುಪಿ ಪೂರ್ಣಪ್ರಜ್ಞ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಪಂದ್ಯಕೂಟದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ಎರಡು ವಿಭಾಗಗಳಲ್ಲಿ 62 ತಂಡಗಳು ಹಾಗೂ 950 ಕ್ರೀಡಾಪಟುಗಳು ಭಾಗವಹಿಸಲಿರುವರು. ಈಗಾಗಲೇ ಪಂದ್ಯಾಟದ ಅಂಗಣವನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಕ್ರೀಡಾಪಟುಗಳಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಬಿ.ಜಗದೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಟೂರ್ನಿಯನ್ನು ಡಿ.2ರಂದು ಬೆಳಗ್ಗೆ 8:30ಕ್ಕೆ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಡಿ.3ರಂದು ಸಂಜೆ 4:45ಕ್ಕೆ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಹಿಸಲಿರುವರು. ಡಿ.1ರಂದು ಸಂಜೆ 6:30ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.
ಸುದ್ದಿಗೋಷ್ಠಿಯಲ್ಲಿ ಪಂದ್ಯಾಕೂಟ ಸಮಿತಿಯ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ.ನಾಯಕ್, ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್, ಮಂಜುನಾಥ ಜೋಗಿ, ಶ್ರೀಧರ್ ಶೆಟ್ಟಿ ಉಪಸ್ಥಿತರಿದ್ದರು.