ಎನ್ವೈಸಿ ಶಿಲುಬೆ ಮಂಗಳೂರಿಗೆ ಹಸ್ತಾಂತರ
ಕಲ್ಯಾಣಪುರ, ಡಿ.12: ಭಾರತೀಯ ಕೆಥೋಲಿಕ್ ಯುವ ಸಂಚಾಲನದ ವತಿಯಿಂದ ಮುಂದಿನ ಜ.18ರಿಂದ 22ರವರೆಗೆ ಮಂಗಳೂರು ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವಠಾರದಲ್ಲಿ ನಡೆಯಲಿರುವ 10ನೇ ರಾಷ್ಟ್ರೀಯ ಯುವ ಸಮ್ಮೇಳನದ ಪೂರ್ವಭಾವಿಯಾಗಿ ಉಡುಪಿ ಧರ್ಮಪ್ರಾಂತದಾದ್ಯಂತ ಹಮ್ಮಿಕೊಳ್ಳಲಾದ ಪವಿತ್ರ ಶಿಲುಬೆಯ ಪಯಣದ ಬಳಿಕ ಅದನ್ನು ಉಡುಪಿ ಧರ್ಮಪ್ರಾಂತದಿಂದ ಮಂಗಳೂರು ಧರ್ಮಪ್ರಾಂತಕ್ಕೆ ಹಸ್ತಾಂತರಿಸಲಾಯಿತು.
ಸಂತೆಕಟ್ಟೆಯ ವೌಂಟ್ ರೋಸರಿ ಚರ್ಚ್ನಿಂದ ಮೆರವಣಿಗೆಯಲ್ಲಿ ಎನ್ವೈಸಿ ಕ್ರಾಸ್ನ್ನು ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ಗೆ ತರಲಾಯಿತು.
ಕ್ಯಾಥೆಡ್ರಲ್ನ ರೆಕ್ಟರ್ ವಂ. ಸ್ಟಾನಿ ಬಿ. ಲೋಬೊ ಅದನ್ನು ಪ್ರವೇಶ ದ್ವಾರದ ಬಳಿ ಸ್ವಾಗತಿಸಿ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಚರ್ಚ್ ಒಳಗೆ ತಂದರು.
ಅಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಉಳಿದ ಧರ್ಮಗುರುಗಳೊಂದಿಗೆ ಬಲಿಪೂಜೆ ನೆರವೇರಿಸಿದರು.
ಐಸಿವೈಎಂ ಕುಂದಾಪುರದ ನಿರ್ದೇಶಕ ವಂ.ಆಲ್ಬರ್ಟ್ ಕ್ರಾಸ್ತಾ ಅವರು ಪವಿತ್ರ ಶಿಲುಬೆಯ ಮಹತ್ವವನ್ನು ವಿವರಿಸಿದರು. ಆ ಬಳಿಕ ವಿಶೇಷ ಪ್ರಾರ್ಥನೆ ಯನ್ನು ನೆರವೇರಿಸಲಾಯಿತು.
ಬಳಿಕ ಅತಿ ವಂ.ಡಾ.ಜೆರಾಲ್ಡ್ ಲೋಬೊ ಅವರು ಪವಿತ್ರ ಶಿಲುಬೆಯನ್ನು ಐಸಿವೈಎಂ ಮಂಗಳೂರು ಪ್ರಾಂತ್ಯದ ನಿರ್ದೇಶಕ ವಂ.ರೋನಾಲ್ಡ್ ಡಿಸೋಜ ಹಾಗೂ ಮಂಗಳೂರು ಧರ್ಮಪ್ರಾಂತದ ಅಧ್ಯಕ್ಷ ಜಾಕ್ಸನ್ ಎರಿಕ್ ಡಿಸೋ ಅವರಿಗೆ ಹಸ್ತಾಂತರಿಸಿ ಸಮ್ಮೇಳನಕ್ಕೆ ಯಶಸ್ಸನ್ನು ಹಾರೈಸಿದರು.
ಉಡುಪಿ ಧರ್ಮಪ್ರಾಂತದ ನಿರ್ದೇಶಕ ವಂ.ಎಡ್ವಿನ್ ಡಿಸೋಜ, ಅಧ್ಯಕ್ಷ ಲೋಯಲ್ ಡಿಸೋಜ, ಕಾರ್ಯದರ್ಶಿ ಫೆಲಿನಾ ಡಿಸೋಜ, ಕಲ್ಯಾಮಪುರದ ರಾಯ್ಟನ್ ಡಿಸೋಜ, ರೋಹನ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ಪವಿತ್ರ ಶಿಲುಬೆಯನ್ನು ಮಂಗಳೂರಿಗೆ ಕೊಂಡೊಯ್ಯಲಾಯಿತು.