ದೇಶದ ಹಿಂದೂ ಮುಸ್ಲಿಂ ಸೌಹಾರ್ದತೆಯನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ-ಪುತ್ತೂರು ತಂಙಳ್
23ನೇ ವರ್ಷದ ಮಿಲಾದ್ ಸಮಾವೇಶ ಹಾಗೂ ಕಾಲ್ನಡಿಗೆ ಜಾಥಾ
ಪುತ್ತೂರು , ಡಿ.12 : ದೇಶದ ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕಷ್ಟು ಪರಂಪರೆಯಿದೆ. ಅದನ್ನು ತಡೆದು ಇಲ್ಲಿನ ಹಿಂದೂಗಳು ಮತ್ತು ಮುಸ್ಲಿಮರನ್ನು ಬೇರ್ಪಡಿಸಲು ಯಾವುದೇ ಕೆಟ್ಟ ಶಕ್ತಿಗಳಿಗೆ ಸಾಧ್ಯವಿಲ್ಲ. ಅಂತಹ ಪ್ರಯತ್ನ ನಡೆಸುವವರು ಸ್ವನಾಶವಾಗುತ್ತಾರೆ ಎಂದು ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು.
ಅವರು ಸೋಮವಾರ ರಾತ್ರಿ ಪುತ್ತೂರು ಕಿಲ್ಲೆ ಮೈದಾನದಲ್ಲಿ ಈದ್ ಮಿಲಾದ್ ಸಮಿತಿ ಪುತ್ತೂರು ಮತ್ತು ದ.ಕ.ಜಿಲ್ಲಾ ಯುವಜನ ಪರಿಷತ್ ವತಿಯಿಂದ ನಡೆದ 13ನೇ ವರ್ಷದ ಮಿಲಾದ್ ಸಮಾವೇಶದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ವರ್ಣಬೇಧ, ಮೌಢ್ಯತೆ, ಅನಕ್ಷರತೆ ಹೆಚ್ಚಾದಾಗ ಇಸ್ಲಾಂ ಧರ್ಮ ಇವೆಲ್ಲವನ್ನು ತಡೆಯುವ ಕೆಲಸ ಮಾಡಿ ಸಮಾನತೆ ಮತ್ತು ಭಾತೃತ್ವವನ್ನು ಬೆಳೆಸಿದೆ. ಇಸ್ಲಾಂ ಎಂದೂ ಖಡ್ಗ, ಬಂದೂಕುಗಳಿಂದ ಬೆಳೆದ ಧರ್ಮವಲ್ಲ. ಪರಸ್ಪರ ನಂಬಿಕೆ ವಿಶ್ವಾಸದ ಮೂಲಕ ಬದುಕು ಶುದ್ದೀಕರಿಸುವ ಮೂಲಕ ಬೆಳೆದು ಬಂದಿದೆ ಎಂದರು.
ವಿದ್ಯಾಭ್ಯಾಸದಿಂದ ಸಂಸ್ಕಾರಯುಕ್ತ ಸಮಾಜವನ್ನು ಕಾಣಲು ಸಾಧ್ಯವೆಂದ ಅವರು ಶಿಕ್ಷಣವಿಲ್ಲದವರು ಸಂಸ್ಕಾರವಂಚಿತರಾಗುತ್ತಾರೆ. ಸಂಸ್ಕಾರವಿಲ್ಲದವರಿಂದ ಅಪರಾಧಗಳು ಘಟಿಸುತ್ತದೆ. ಅಕ್ರಮ ಮೋಸಗಳು ಹೆಚ್ಚವಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರವಾದಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಆ ಮೂಲಕ ಸಂಸ್ಕಾರಯುತರನ್ನಾಗಿಸಿದರು. ಜನರನ್ನು ಶುದ್ದೀಕರಸಲೆಂದು ಕುರ್ಆನ್ ಕಲಿಸಿದರು ಎಂದರು.
ತನ್ನ ಬದುಕಿನಲ್ಲಿ ಯಾವುದೇ ತಪ್ಪು, ಸುಳ್ಳು, ವಂಚನೆ, ದೋಷಗಳನ್ನು ಮಾಡದ ಪ್ರವಾದಿ ಬದುಕು ನಮಗೆ ಇಂದಿಗೂ ಆದರ್ಶಪ್ರಾಯವಾಗಿದೆ. ಅವರ ಬದುಕಿನ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದ ಅವರು, ಹಿಂಸಾಚಾರ ಎಂದಿಗೂ ಪ್ರವಾದಿಗಳ ಅದರ್ಶವಾಗಿರಲಿಲ್ಲ. ಎಲ್ಲರನ್ನೂ ಪ್ರೀತಿಸುವ, ಇನ್ನೊಬ್ಬರ ನೋವಿಗೆ ಸ್ಪಂಧಿಸುವ ಮನೋಭಾವ ಅವರದಾಗಿತ್ತು. ದೊಡ್ಡ ದೊಡ್ಡ ಭಾಷಣಗಾರರು ಬದುಕಿನಲ್ಲಿ ಅದನ್ನು ಅಳವಡಿಸಿಕೊಳ್ಳುವುದಿಲ್ಲ. ಪ್ರವಾದಿ ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಆದರ್ಶವನ್ನು ಮಾತ್ರ ಮಾತನಾಡುತ್ತಿದ್ದರು. ಜೀವನ ಮಾರ್ಗವನ್ನು ಲೋಕಕ್ಕೆ ಕಲಿಸಿದರು ಎಂದರು.
ಯುವ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಪ್ರಾಂಶುಪಾಲ್ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ, ಮಲ್ಹರ್ ಇನ್ಸ್ಟಿಟ್ಯೂಟ್ ಇಸ್ಲಾಮಿಕ್ ದಹ್ವಾ ಪ್ರಾಂಶುಪಾಲ ಅನಸ್ ಸಿದ್ದಿಕಿ ಸಿರಿಯಾ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮುಖ್ಯ ಪ್ರಭಾಷಣ ಮಾಡಿದರು.
ವೇದಿಕೆಯಲ್ಲಿ ಸೈಯದ್ ಮಹಮ್ಮದ್ ತಂಙಳ್ ಸಾಲ್ಮರ, ಡೆಂಟಲ್ ಸ್ಪೆಷಲಿಸ್ಟ್ ಇಸ್ಮಾಯಿಲ್ ಶರಫ್ರಾರ್, ಕಾವು ಬುಶ್ರಾ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಅಝೀರ್ ಬುಶ್ರಾ, ಉಪ್ಪಿನಂಗಡಿ ಮಾಲಿಕ್ದಿನಾರ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮಾಜಿ ಅಧ್ಯಕ್ಷ ಖಾಸಿಂ ಹಾಜಿ ಮಿತ್ತೂರು,ಸವಣೂರಿನ ಸಿವಿಲ್ ಕಂಟ್ರಾಕ್ಟರ್ ಪುತ್ತುಬಾವ, ಸಾಲ್ಮರ ಖತೀಬ್ ಉಮ್ಮರ್ ದಾರಿಮಿ, ಬನ್ನೂರು ಮುದರ್ರಿಸ್ ಬಶೀರ್ ಅಹ್ಸನಿ, ಕೆಮ್ಮಾಯಿ ಮುದರ್ರಿಸ್ ಮಹಮ್ಮದ್ ಖಾಮಿಲ್ ಸಖಾಫಿ, ಅಬ್ದುಲ್ ಸತ್ತಾರ್ ಸಖಾಫಿ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ, ಕಾರ್ಜಾಲು ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಸೋಂಪಾಡಿ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ನೌಷದ್ ಬೊಳುವಾರು, ಉಮ್ಮರ್ ನೇರಳಕಟ್ಟೆ, ಬಿ.ಟೆಕ್ ಗ್ರೂಪ್ನ ಇಬ್ರಾಹಿಂ ಅಲೆಕ್ಕಾಡಿ, ಸುರಕ್ಷಾ ಡೆಕೋರ್ನ ಜನ್ರಲ್ ಮೆನೇಜರ್ ಹಸನುಲ್ ಬಶೀರ್, ಮಿಲಾದ್ ಸಮಿತಿ ಮಾಜಿ ಅಧ್ಯಕ್ಷ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ನಗರಸಭಾ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಯು.ಟಿ. ತೌಸೀಫ್, ಜೆಡಿಎಸ್ ಮುಖಂಡ ಇಬ್ರಾಹಿಂ ಗೋಳಿಕಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಅರ್ಶದ್ ದರ್ಬೆ, ದ.ಕ.ಜಿಲ್ಲಾ ಯುವಜನ ಪರಿಷತ್ ಅಧ್ಯಕ್ಷ ಸೂಫೀ ಬಪ್ಪಳಿಗೆ, ದರ್ಬೆ ಮದ್ರಸ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್, ಬಡೆಕ್ಕೋಡಿ ಜುಮ್ಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಮದದ್ ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷ ಫಾರೂಕ್ ಸಂಟ್ಯಾರ್ ಮತ್ತಿತತರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ದರ್ಬೆ ಬೈಪಾಸ್ನಿಂದ ಹೊರಟು ಮುಖ್ಯ ರಸ್ತೆಯಾಗಿ ಕಿಲ್ಲೆ ಮೈದಾನದ ತನಕ ಕಾಲ್ನಡಿಗೆ ಜಾಥಾ ನಡೆಯಿತು.
ಜಾಥಾವನ್ನು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಪಿ.ಬಿ. ಹಸನ್ ಹಾಜಿ ಉದ್ಘಾಟಿಸಿದರು.
ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ನ ಮಾಜಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಸ್ವಾಗತಿಸಿದರು.
ಖಾದರ್ ಕೂರ್ನಡ್ಕ ಮತ್ತು ಸಿದ್ದೀಕ್ ಬೀಟಿಗೆ ಕಾರ್ಯಕ್ರಮ ನಿರೂಪಿಸಿದರು.