ಶಿರ್ವ ಚರ್ಚ್ ಮೂರ್ತಿ ಧ್ವಂಸ: ಆರೋಪಿಯ ಬಂಧನ
ನಿರುದ್ಯೋಗಿ ಕುಡುಕನ ಕೃತ್ಯ: ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ
ಉಡುಪಿ, ಡಿ.12: ಶಿರ್ವ ಆರೋಗ್ಯ ಮಾತೆ ಚರ್ಚ್ನ ಮುಂಭಾಗದಲ್ಲಿರುವ ಎರಡು ಅಡಿ ಎತ್ತರದ ಸಂತ ಅಂತೋನಿಯವರ ಮಣ್ಣಿನ ಮೂರ್ತಿಯನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಶಿರ್ವ ಚರ್ಚ್ ಸಮೀಪದ ನಿವಾಸಿ ಬೆನೆಡಿಕ್ಟ್ ಡಿಸೋಜ(56) ಎಂದು ಗುರುತಿಸಲಾಗಿದೆ. ನಾಲ್ಕೈದು ವರ್ಷಗಳ ಹಿಂದೆ ಮಣಿಪಾಲ ಹಾಗೂ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ ಬೆನೆಡಿಕ್ಟ್ ಡಿಸೋಜ ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದನು ಎನ್ನಲಾಗಿದೆ. ಕೆಲ ಸಮಯದಿಂದ ಶಿರ್ವದಲ್ಲೇ ಕೆಲಸ ಇಲ್ಲದ್ದೆ ಇದ್ದನು. ಈತನ ಪತ್ನಿ ವಿದೇಶದಲ್ಲಿದ್ದು, ಮಗಳು ತಂದೆಯ ಕುಡಿತದಿಂದ ಮನೆ ಬಿಟ್ಟು ಹೋಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆನ್ನಲಾಗಿದೆ.
ರವಿವಾರ ಕಂಠಪೂರ್ತಿ ಕುಡಿದ ಬೆನೆಡಿಕ್ಟ್ ಡಿಸೋಜ ತನ್ನ ಸಮಸ್ಯೆ ಪರಿಹರಿಸುವಂತೆ ದೇವರಲ್ಲಿ ಬೇಡಲು ಚರ್ಚ್ನ ಹಿಂದಿನ ಗೇಟಿನಿಂದ ಬಂದಿದ್ದನು ಎಂದು ತಿಳಿದು ಬಂದಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಕಾರ್ಮಿಕ ರನ್ನು ವಿಚಾರಿಸಿ, ನೀವು ಇಲ್ಲಿ ಬಂದಿದ್ದರಿಂದಲೇ ನಮಗೆ ಕೆಲಸ ಇಲ್ಲದಂತೆ ಆಗಿದೆ ಎಂದು ಹೇಳಿ ಕಬ್ಬಿಣದ ರಾಡಿನಿಂದ ಅವರಿಗೆ ಹೊಡೆಯಲು ಹೋಗಿದ್ದನು ಎನ್ನಲಾಗಿದೆ.
ನಂತರ ಚರ್ಚ್ಗೆ ಬಂದ ಆತ, ಬೀಗ ಹಾಕಿದ ಹಿನ್ನೆಲೆಯಲ್ಲಿ ಹೊರಗಡೆಯಿಂದಲೇ ಪ್ರಾರ್ಥನೆ ಮಾಡಿದನು. ನಂತರ ಬಲ ಮತ್ತು ಎಡಭಾಗದಲ್ಲಿದ್ದ ಸಂತ ಲಾರೆನ್ಸ್ ಮತ್ತು ಸಂತ ಅಂತೋನಿ ಮೂರ್ತಿಯನ್ನು ಅದಲು ಬದಲು ಮಾಡಿ ಇಟ್ಟರೆ ತನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದು ಭಾವಿಸಿ, ಮೊದಲು ಸಂತ ಲಾರೆನ್ಸ್ ಮೂರ್ತಿಯನ್ನು ಎತ್ತಿ ಕೆಳಗೆ ಇಟ್ಟನು ಎನ್ನಲಾಗಿದೆ. ನಂತರ ಸಂತ ಅಂತೋನಿ ಮೂರ್ತಿ ತೀರಾ ಭಾರವಿದ್ದ ಕಾರಣ ಎತ್ತುವಾಗ ಕೈಯಿಂದ ಜಾರಿ ಕೆಳಗೆ ಬಿದ್ದು ಪುಡಿಯಾಯಿತು ಎಂದು ತಿಳಿದು ಬಂದಿದೆ. ಇದರಿಂದ ಹೆದರಿದ ಆತ ಅದನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿ ಮನೆಯಲ್ಲಿ ಅವಿತು ಕುಳಿತಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು, ಕಾಪು ವೃತ್ತ ನಿರೀಕ್ಷಕ ಹಾಲುಮೂರ್ತಿ ರಾವ್ ನೇತೃತ್ವದಲ್ಲಿ ಆರೋಪಿಯನ್ನು ಸೋಮವಾರ ಸಂಜೆ ಬಂಧಿಸಿದ್ದಾರೆ. ಈ ಎಲ್ಲ ವಿಚಾರವನ್ನು ಬಂಧಿತ ಆರೋಪಿ ವಿಚಾರಣೆಯ ವೇಳೆ ಬಹಿರಂಗಪಡಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಮಂಗಳೂರು ಪಶ್ಚಿಮ ವಲಯ ಐಜಿಪಿ ಬಹುಮಾನವನ್ನು ಘೋಷಿಸಿದ್ದಾರೆ.
ಗಣ್ಯರ ಭೇಟಿ: ಚರ್ಚ್ನ ಮೂರ್ತಿಯನ್ನು ಧ್ವಂಸಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಉಡುಪಿ ಚಿಕ್ಕ ಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಅಪರ ಜಿಲ್ಲಾಧಿಕಾರಿ ಅನುರಾಧಾ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಮತ್ತಿತರರು ಸೋಮವಾರ ಚರ್ಚ್ಗೆ ಭೇಟಿ ನೀಡಿದರು.