ಅಳಿವೆಬಾಗಿಲಿನಲ್ಲಿ ಹೂಳೆತ್ತಲು ಮೀನುಗಾರರ ಸಮ್ಮತಿ
ಶಾಸಕ ಲೋಬೊ ನೇತೃತ್ವದಲ್ಲಿ ಸಭೆ
ಮಂಗಳೂರು, ಡಿ. 13: ಶಾಸಕ ಜೆ.ಆರ್.ಲೋಬೊ ಅವರು ಇಂದು ಮೀನುಗಾರ ಮುಖಂಡರೊಂದಿಗೆ ನಡೆಸಿದ ಮಾತುಕತೆಯಲ್ಲಿ ಮೀನುಗಾರ ಮುಖಂಡರು ಅಳಿವೆಬಾಗಿಲಿನಲ್ಲಿ ಹೂಳೆತ್ತಲು ಸಮ್ಮತಿ ನೀಡಿದರು.
ಮೀನುಗಾರರು ಮತ್ತು ಸೈಲರ್ಸ್ಗಳು ಅಳಿವೆಯಲ್ಲಿ ಹೂಳೆತ್ತದಂತೆ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಶಾಸಕರು ಇಂದು ಎಲ್ಲಾ ಮೀನುಗಾರ ನಾಯಕರ ಸಭೆ ಕರೆದು ಚರ್ಚಿಸಿದರು. ಅಳಿವೆಬಾಗಿಲಿನಲ್ಲಿ ಹೂಳು ತುಂಬಿ ದೋಣಿಗಳು ಅಪಘಾತಕ್ಕೀಡಾಗುತ್ತಿವೆ. ಒಂದು ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತು ಕೆಲಸ ನಡೆಯಲಿದೆ. ತಡೆಯೊಡ್ಡಿ ಬಂದಿರುವ ಯಂತ್ರವನ್ನು ಹಿಂದೆ ಕಳುಹಿಸಿದರೆ ಮತ್ತೆ ಬರುವುದು ಕಷ್ಟ ಸಾಧ್ಯ. ದೋಣಿಗಳು ಸರಾಗವಾಗಿ ಸಾಗಲು 4 ಮೀಟರ್ ನೀರು ಬೇಕು. ಈಗ ಬರೇ 2.5 ಮೀ. ಮಾತ್ರ ಇದೆ. ಇದರಿಂದಾಗಿ ದೋಣಿಗಳು ಅಪಘಾತಕ್ಕೀಡಾಗುವ ಸಂಭವ ಇರುತ್ತದೆ ಎಂದು ಶಾಸಕರು ಹೇಳಿದರು.
ಶಾಸಕರ ಮಾತನ್ನು ಆಲಿಸಿದ ಮುಖಂಡರು ಅಂತಿಮವಾಗಿ ಅಳಿವೆಬಾಗಿಲಿನಲ್ಲಿ ಹೂಳೆತ್ತಲು ಸಮ್ಮತಿಸಿದರು.
ಬಂದಿರುವ ಯಂತ್ರದಿಂದ ಹೂಳೆತ್ತಲು ಸಾಧ್ಯವಿಲ್ಲ. ಇದರಿಂದ ಸರಕಾರದ ಹಣ ಪೋಲಾಗಬಾರದು ಎಂಬುದೇ ನಮ್ಮ ಉದ್ದೇಶ ಎಂದು ಮೀನುಗಾರರ ಹೇಳಿದರು.
ಸಭೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಮೀನುಗಾರ ಮುಖಂಡರು, ಬಂದರು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.