ಬಂಟ್ವಾಳ : ಕಂದಾಯ ನಿರೀಕ್ಷಕರ ತಂಡದಿಂದ ದಾಳಿ
ಬಂಟ್ವಾಳ, ಡಿ. 16 : ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಪಡಿತರ ಸೊಸೈಟಿಯಲ್ಲಿ ಯಾವುದೇ ಪಡಿತರ ಸಾಮಾಗ್ರಿಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕರ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಸಂಗಬೆಟ್ಟು ಗ್ರಾಮದ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಈ ಪಡಿತರ ಸೊಸೈಟಿಯಲ್ಲಿ ಸಮಯಕ್ಕೆ ಸರಿಯಾಗಿ ಪಡಿತರ ಸಾಮಾಗ್ರಿ ಸಿಗುತ್ತಿಲ್ಲ ಹಾಗೂ ನಾಮ ಫಲಕವನ್ನು ಕೂಡಾ ಹಾಕಿರುವುದಿಲ್ಲ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ನವೀನ್ ಅವರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ, ಈ, ನ್ಯಾಯಬೆಲೆಯ ಅಂಗಡಿಯಲ್ಲಿ ದಾಸ್ತಾನಿಟ್ಟಿದ್ದ ಪಡಿತರ ಸಾಮಾಗ್ರಿಗಳನ್ನು ಪರಿಶೀಲಿಸಿತ್ತು. ಹಾಗೆಯೇ ಪಡಿತರದಾರರ ಹಿತಾಸಕ್ತಿಯಿಂದ ಅಗತ್ಯ ಪ್ರಕಟನೆಯನ್ನು ಸೂಚನಾಫಲಕದಲ್ಲಿ ಪ್ರಕಟಿಸುವಂತೆ ಮತ್ತು ಸೊಸೈಟಿಯ ಸುತ್ತಸ್ವಚ್ಛತೆಯನ್ನು ಕಾಪಾಡುವಂತೆ ಎಚ್ಚರಿಕೆ ನೀಡಿದೆ.
ಹಾಗೆಯೇ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ಇಂತಹ ದೂರುಗಳು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಯವರಿಗೆ ಶಿಫಾರಸು ಮಾಡಲಾಗುವುದು ಎಂದು ಕಂದಾಯ ನಿರೀಕ್ಷಕರ ತಂಡ ಎಚ್ಚರಿಕೆ ನೀಡಿದೆ.
ಈ ದಾಳಿಯಲ್ಲಿ ಗ್ರಾಮ ಕರಣಿಕರಾದ ಜನಾರ್ದನ್, ಪ್ರವೀನ್ ಕುಮಾರ್ ಸಿಬ್ಬಂದಿಗಳಾದ ವೆಂಕಟರಮನ, ಸತೀಶ್ ಸಹಕರಿಸಿದ್ದರು.