ಎತ್ತಿನಹೊಳೆ ವಿಚಾರದಲ್ಲಿ ಬಿಜೆಪಿಗರು ಜನತೆಯ ಹಾದಿ ತಪ್ಪಿಸುತ್ತಿದ್ದಾರೆ: ಐವನ್ ಡಿಸೋಜಾ
ಕಡಬ, ಡಿ19: ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್ ಹಾಗೂ ಸೈಂಟ್ ಜೋಕಿಮ್ಸ್ ಸಮೂಹ ವಿದ್ಯಾಸಂಸ್ಥೆಯ ಕಡಬ ಮುಖ್ಯ ರಸ್ತೆಯಿಂದ ಸಂಪರ್ಕ ರಸ್ತೆಗೆ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಐವನ್ ಡಿಸೋಜಾರವರು ನೀಡಿದ್ದ 5 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಐವನ್ ಡಿಸೋಜಾ ಹಾಗೂ ಸೈಂಟ್ ಜೋಕಿಮ್ಸ್ ಚರ್ಚ್ ಧರ್ಮ ಗುರುಗಳೂ, ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ ಪಾಲ್ ಡಿ’ಕ್ರಾಸ್ತಾರವರು ಸೋಮವಾರದಂದು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಐವನ್ ರವರು, ಎತ್ತಿನಹೊಳೆ ವಿಚಾರದಲ್ಲಿ ಮುಂದಿನ ತಿಂಗಳು ಜನವರಿಯಲ್ಲಿ ಎತ್ತಿನಹೊಳೆಯ ತಾಂತ್ರಿಕತೆಯ ಬಗ್ಗೆ ವಿಶೇಷ ಸಭೆಯನ್ನು ಮಾನ್ಯ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಕರೆಯುವ ಬಗ್ಗೆ ಈಗಾಗಲೇ ನೀರಾವರಿ ಸಚಿವರಲ್ಲಿ ಮಾತುಕತೆ ನಡೆಸಲಾಗಿದೆ. ಯೋಜನೆಯ ಆಗುಹೋಗುಗಳ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದೆಡೆ ಬಿಜೆಪಿಯ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಎತ್ತಿನಹೊಳೆ ವಿರುದ್ಧ ರ್ಯಾಲಿ ನಡೆಸುತ್ತಿದ್ದರೆ, ಇನ್ನೊಂದೆಡೆ ಸದಾನಂದ ಗೌಡರಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಅವರು ಜಾಣ ಮೌನ ವಹಿಸುತ್ತಿದ್ದಾರೆ. ಬಿಜೆಪಿಯವರು ಇಂತಹ ದ್ವಂದ್ವ ನೀತಿಯನ್ನು ಅನುಸರಿಸುವ ಮೂಲಕ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ. ಅದರ ಬದಲು ರಾಷ್ಟ್ರದಲ್ಲಾಗಿರುವ ಹಣಕಾಸಿನ ಅಸ್ಥಿರತೆಯನ್ನು ಸರಿಪಡಿಸಲಿ ಎಂದರು.
ಈ ಸಂದರ್ಭದಲ್ಲಿ ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಕಡಬ ತಾ.ಪಂ ಸದಸ್ಯ ಫಝಲ್ ಕೋಡಿಂಬಾಳ, ನೆಲ್ಯಾಡಿ ತಾ.ಪಂ.ಸದಸ್ಯೆ ಕೆ.ಟಿ.ವಲ್ಸಮ್ಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ಕುಮಾರ್ ರೈ ಕೆರ್ಮಾಯಿ, ಎಪಿಎಂಸಿ ಸದಸ್ಯೆ ಶಾಲಿನಿ ಸತೀಶ್ ನಾಯ್ಕೆ, ಗ್ರಾ.ಪಂ. ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಹನೀಫ್ ಕೆ.ಎಂ, ಸೈಮನ್ ಸಿ.ಜೆ, ಶೆರೀಫ್ ಎ.ಎಸ್., ಐತ್ತೂರು ಗ್ರಾ.ಪಂ.ಸದಸ್ಯ ಎಂ.ಪಿ.ಯೂಸುಫ್, ಕಡಬ ರಹ್ಮಾನಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಎಸ್. ಅಬ್ದುಲ್ ಖಾದರ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಬೆಂಜಮಿನ್ ಡಿ’ಸೋಜಾ, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡೆನ್ನೀಸ್ ಫೆರ್ನಾಂಡಿಸ್, ಸತೀಶ್ ನಾಯ್ಕೆ ಮೇಲಿನಮನೆ, ಪುತ್ತುಮೋನು ಅನ್ನಡ್ಕ, ಗುತ್ತಿಗೆದಾರ ಉಸ್ಮಾನ್ ಕೊಲ್ಲೆಜಾಲು ಮೊದಲಾದವರು ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.