ಕಿನ್ನಿಗೋಳಿ ಮಹಿಳಾ ಮೀನುಗಾರರಿಂದ ಪ್ರತಿಭಟನೆ
ಪುರುಷ ಮೀನುಗಾರರ ತೆರವಿಗೆ ಆಗ್ರಹ
ಮುಲ್ಕಿ, ಡಿ.20: ಕಿನ್ನಿಗೋಳಿ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಸ್ಥಳೀಯ ಪುರುಷ ಮೀನುಗಾರರನ್ನು ಮಾರುಕಟ್ಟೆಯಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮೀನುಗಾರ ಮಹಿಳೆಯರು ಕಿನ್ನಿಗೋಳಿ ಗ್ರಾಪಂ ಮುಂಭಾಗ ಧರಣಿ ನಡೆಸಿ ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.
ಕಿನ್ನಿಗೋಳಿ, ಸುರತ್ಕಲ್, ಹಳೆಯಂಗಡಿ, ಮುಲ್ಕಿ ವ್ಯಾಪ್ತಿಯ ಮಹಿಳಾ ಹಸಿ ಮೀನು ಮಾರಾಟ ಮಾಡುವ ಸುಮಾರು 200 ಮಹಿಳೆಯರು ಧರಣಿಯಲ್ಲಿ ಭಾಗವಹಿಸಿ ಪುರುಷ ವ್ಯಾಪಾರಿಗಳನ್ನು ತೆರವುಗೊಳಿಸಬೇಕು. ಕಿನ್ನಿಗೋಳಿ ಪರಿಸರದಲ್ಲಿ ಅವರಿಗೆ ಮೀನು ವ್ಯಾಪಾರ ಮಾಡಲು ಪಂಚಾಯತ್ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಮಂಗಳೂರು ಹಸಿ ಮೀನುಗಾರರ ಸಂಘದ ಅಧ್ಯಕ್ಷೆ ಅಹಲ್ಯಾ ಮಾತನಾಡಿ, ಪುರುಷ ಮೀನುಗಾಗರಿಗೆ ಎರಡು ಬಾಕ್ಸ್ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಅವರು 10ರಿಂದ 20 ಬಾಕ್ಸ್ ಮೀನುಗಳನ್ನು ಮಾರಾಟ ಮಾಡುತ್ತಿದ್ದು ಇದರಿಂದ ಒಂದು ಬುಟ್ಟಿ ಮಾರಾಟ ಮಾಡುವ ಮಹಿಳಾ ಮೀನುಗಾರರು ತೊಂದರೆ ಅನುಭವಿಸುವಂತಾಗಿದೆ ಎಂದರು.ಮೀನು ಮಾರಾಟಗಾರರ ಮುಖಂಡ ಯಶ್ಪಾಲ್ ಸುವರ್ಣ ಮಾತನಾಡಿದರು.
ಧರಣಿನಿರತರ ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಕಿನ್ನಿಗೋಳಿ ಗ್ರಾಪಂ ಅಧ್ಯಕ್ಷೆ ಫಿಲೊಮಿನಾ ಸಿಕ್ವೇರ, ಪುರುಷ ಮೀನುಗಾರರು ಸುಮಾರು 40 ವರ್ಷಗಳಿಂದ ತಮ್ಮ ಹಿರಿಯರ ಕಾಲದಿಂದಲೂ ಇಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಮೀನು ನೀಡುತ್ತಿದ್ದಾರೆ. ಹೀಗಾಗಿ ಏಕಾಏಕಿ ಅವರನ್ನು ತೆರವುಗೊಳಿಸಬೇಕು ಮತ್ತು ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸುವುದು ಎಷ್ಟು ಸರಿ. ಈ ಬಗ್ಗೆ ನಾವು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡಲಿದ್ದೇವೆ ಎಂದರು.
ಧರಣಿಯಲ್ಲಿ ಬಿಜೆಪಿ ಮುಖಂಡರಾದ ಸತ್ಯಜಿತ್ ಸುರತ್ಕಲ್, ಈಶ್ವರ್ ಕಟೀಲು, ವಿನೋದ್ ಬೆಳ್ಳಾಯರು, ದೇವಪ್ರಸಾದ್ ಪುನರೂರು, ಭುವನಾಭಿರಾಮ ಉಡುಪ ಮೊದಲಾದವರಿದ್ದರು.
ರಾಜಕೀಯ ಪ್ರೇರಿತ ಧರಣಿ: ಧರಣಿಯಲ್ಲಿ ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ಬೆರಳೆಣಿಕೆಯ ಮಹಿಳೆಯರು ಬಿಟ್ಟರೆ ಉಳಿದಂತೆ ಬೇರೆ ಊರಿನ ಮಹಿಳೆಯರು ಮತ್ತು ಬಿಜೆಪಿ ನಾಯಕರೇ ಭಾಗವಹಿಸಿದ್ದರು. ಧರಣಿಯೂ ರಾಜಕೀಯ ಪ್ರೇರಿತ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪುರುಷ ವ್ಯಾಪರಸ್ಥರ ಆಗ್ರಹ: ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಕಿನ್ನಿಗೋಳಿ ಮಾರುಕಟ್ಟೆಯ ಪುರುಷ ಮೀನುಗಾರರು, ಈಗಿನ ಮಹಿಳೆಯರು ಕಿನ್ನಿಗೋಳಿ ಮಾರುಕಟ್ಟೆ ಕಾಣುವ ಮೊದಲೇ ನಮ್ಮ ಕುಟುಂಬ ಕಳೆದ 60 ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸುತ್ತಾ ಬಂದಿದೆ. ತೆರವಿನ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿಯೂ ಚಚೆರ್ಗಳು ನಡೆದಿದ್ದವು. ಆಗ ಮಾತನಾಡದವರು ಈಗ ಏಕಾಏಕಿ ತೆರವುಗೊಳಿಸಬೇಕೆನ್ನುವುದು ನ್ಯಾಯಯುತವಾದ ವಾದಲ್ಲ. ಸ್ಥಳೀಯರೂ ಮಹಿಳೆಯರ ಕ್ರಮದ ವಿರುದ್ಧವಾಗಿದ್ದಾರೆ. ಅಲ್ಲದೆ, ಮಾರುಕಟ್ಟೆಯ ಕೆಲ ಮಹಿಳೆಯರೂ ಈ ಕ್ರಮದ ವಿರುದ್ಧ ಇದ್ದಾರೆ. ಯಾವುದೇ ಕಾರಣಕ್ಕೂ ಈಗ ವ್ಯಾಪಾರ ನಡೆಸುತ್ತಿರುವ ಸ್ಥಳದಿಂದ ಸ್ಥಳಾಂತರ ಗೊಳ್ಳುವ ಪ್ರಶ್ನೇಯೇ ಇಲ್ಲ. ಪಂಚಾಯತ್ ಕಿನ್ನಿಗೋಳಿಯಲ್ಲೇ ಬೇರೆ ವ್ಯವಸ್ಥೆ ಮಾಡಿಕೊಟ್ಟರೆ ಸ್ಥಳಾಂತರಗೊಳ್ಳುತ್ತೇವೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.