ಮೂಡುಶೆಡ್ಡೆ ಮಹಿಳೆಯ ಕೊಲೆ: ಅಪರಾಧ ಸಾಬೀತು
ಮಂಗಳೂರು, ಡಿ. 21: ಮೂಡುಶೆಡ್ಡೆ ಕೆರಮಾ ರಸ್ತೆಯ ನಿಸರ್ಗಧಾಮ ಕ್ವಾಟರ್ಸ್ನಲ್ಲಿ 5 ವರ್ಷಗಳ ಹಿಂದೆ ಮಹಿಳೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆಗೈದ ಪ್ರಕರಣದ ಆರೋಪಿ ರಾಜ (44)ನ ಅಪರಾಧವು ಮಂಗಳೂರಿನ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ಶೀಘ್ರ ಪ್ರಕಟಗೊಳ್ಳಲಿದೆ.
ನಗರದಲ್ಲಿ ಚಪ್ಪಲಿ ರಿಪೇರಿ ಮತ್ತು ಮಾರಾಟ ಕೆಲಸ ಮಾಡುತ್ತಿದ್ದ ರಾಜನ ವಿವಾಹ 1994 ಫೆ.19ರಂದು ರಾಣಿ ಎಂಬಾಕೆಯ ಜತೆ ನಡೆದಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದರು. ಆ ಬಳಿಕ ರಾಜ ತನ್ನ ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. 2011ರ ಸೆ.1ರಂದು ಮನೆಯ ಒಳಗೆ ರಾಜ ತನ್ನ ಪತ್ನಿ ರಾಣಿಯ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಪ್ರಾಣಭಯದಿಂದ ಆಕೆ ಮನೆಯಿಂದ ಹೊರ ಬಂದಾಗ ರಾಜ ಪತ್ನಿಯ ಮೈಗೆ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದ. ಆವಾಗ ಆತನಿಗೂ ಕೆಲವು ಸುಟ್ಟ ಗಾಯಗಳಾಗಿದ್ದವು. ಬಳಿಕ ಸ್ಥಳೀಯರು ಆಕೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ರಾಜ ಕೂಡ ಚಿಕಿತ್ಸೆ ಪಡೆದಿದ್ದನು.
ಸೆ.4ರಂದು ಪ್ರಜ್ಞೆ ಬಂದ ಬಳಿಕ ಕಾವೂರು ಎಸ್ಸೈ ಕೆ. ಗೋಪಾಲ್ರ ಮುಂದೆ ರಾಣಿ ಹೇಳಿಕೆ ನೀಡಿದ್ದಳು. ಅದರಂತೆ ಪೊಲೀಸರು ಆರೋಪಿ ರಾಜನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದ್ದರು. ಸೆ.8ರಂದು ರಾಣಿ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಳು. ಪೊಲೀಸರು ರಾಜನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಹಾಗೇ ಆಸ್ಪತ್ರೆಯಿಂದ ತಲೆಮರೆಸಿದ್ದ ಆರೋಪಿಯನ್ನು ಸೆ.19ರಂದು ಬಂಧಿಸಲಾಗಿತ್ತು. ಅಂದಿನ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ರಾಜ ತನಗೆ ಶಿಕ್ಷೆಯಾಗುವುದು ಖಚಿತವಾಗುತ್ತಿದ್ದಂತೆ ಕಳೆದ 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಹಾಗಾಗಿ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. 2016ರ ಸೆ.30ರಂದು ರಾಜನನ್ನು ಕಾವೂರು ಪೊಲೀಸರು ಬಂಧಿಸಿದ್ದರು.
ಇದೀಗ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಐಪಿಸಿ ಸೆಕ್ಷನ್ 498 ಎ (ಪತ್ನಿಗೆ ಕಿರುಕುಳ) ಮತ್ತು 302 (ಕೊಲೆ ಆರೋಪ) ಅನ್ವಯ ಆರೋಪಿ ರಾಜನ ವಿರುದ್ಧದ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
*ಡೈಯಿಂಗ್ ಡಿಕ್ಲರೇಶನ್
ಮೃತ ರಾಣಿ ಆಸ್ಪತ್ರೆಯಲ್ಲಿದ್ದಾಗ ಪೊಲೀಸರಿಗೆ ನೀಡಿದ ಹೇಳಿಕೆಯನ್ನು ನ್ಯಾಯಾಲಯವು ಡೈಯಿಂಗ್ ಡಿಕ್ಲರೇಶನ್ (ಮರಣ ಪೂರ್ವ ಹೇಳಿಕೆ) ಆಗಿ ಪರಿಗಣಿಸಿದೆ. ಆಕೆಯ ಮನೆಯ ಆಕ್ಕ ಪಕ್ಕದ ಜನರು 2010ರಲ್ಲಿ ಕಾವೂರು ಪೊಲೀಸರಿಗೆ ಸಲ್ಲಿಸಿದ ದೂರು ಮತ್ತು 2011ರಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಸಂದರ್ಭ ಅದೇ ಜನರು ಮತ್ತೆ ಆಗಮಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿತ್ತು. ವಿಚಾರಣೆ ಸಂದರ್ಭ ಈ ಜನರು ಕೂಡ ಸಾಕ್ಷಿ ಹೇಳಿದ್ದರು.ಹಾಗೆ ರಾಣಿಯ ಡೈಯಿಂಗ್ ಡಿಕ್ಲರೇಶನ್, ಊರಿನ ಜನರ ಸಾಕ್ಷಿ ಮತ್ತು ವೆನ್ಲಾಕ್ ಆಸ್ಪತ್ರೆಯ ವೈದಾಧಿಕಾರಿ ಡಾ. ಜೂಲಿಯಾನಾ ಸಲ್ದಾನ್ಹಾ ವೈದ್ಯಕೀಯ ಪ್ರಮಾಣ ಪತ್ರವನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿ ರಾಜ ಅಪರಾಧಿ ಎಂಬ ತೀರ್ಮಾನಕ್ಕೆ ಬಂದಿದೆ.
*ಆರೋಪಿ ಹೇಳಿಕೆಗೆ ನಕಾರ
ಆರೋಪಿ ರಾಜ ಪ್ರಾರಂಭದಲ್ಲಿ ‘ಪತ್ನಿಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಳು’ ಎಂಬ ಹೇಳಿಕೆ ನೀಡಿದ್ದರೆ ಸಾಕ್ಷಿ ವಿಚಾರಣೆಯ ವೇಳೆ ‘ಅಡುಗೆ ಮಾಡುವಾಗ ಬೆಂಕಿ ತಗುಲಿತು’ ಎಂಬ ಹೇಳಿಕೆ ನೀಡಿದ್ದನು. ಹಾಗೆ ಆತ ಎರಡು ವ್ಯತ್ಯಸ್ತ ಹೇಳಿಕೆಗಳನ್ನು ನೀಡಿದ್ದರಿಂದ ನ್ಯಾಯಾಲಯ ಆತನ ಹೇಳಿಕೆಯನ್ನು ಪರಿಗಣಿಸಿಲ್ಲ. ರಾಜ- ರಾಣಿ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ತಂದೆ ರಾಜನ ಜತೆಗಿದ್ದರೆ ಉಳಿದಿಬ್ಬರು ಮಕ್ಕಳು ರಾಣಿಯ ಸಂಬಂಧಿಕರ ಮನೆಯಲ್ಲಿದ್ದಾರೆ. ಹಿರಿಯ ಪುತ್ರನು ವಿಚಾರಣೆಯ ವೇಳೆ ತಂದೆಯ ಪರವಾಗಿ ಸಾಕ್ಷಿ ಹೇಳಿದ್ದಾನೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಪ್ರಾರಂಭಿಕ ಹಂತದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಶಿವ ಪ್ರಸಾದ್ ಆಳ್ವ ಮತ್ತು ಬಳಿಕ ಬಿ. ಶೇಖರ ಶೆಟ್ಟಿ ವಾದ ಮಂಡಿಸಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.