ದೇರ್ಲ ವಿಠಲ ರೈ
ಪುತ್ತೂರು, ಮೇ 17: ನಿವೃತ್ತ ಕಂದಾಯ ಅಧಿಕಾರಿ, ಹಿರಿಯ ಕಾಂಗ್ರೆಸ್ ಧುರೀಣ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ವಿಠಲ ರೈ (76) ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ನಿಧನರಾಗಿದ್ದಾರೆ.
ಕಾಸರಗೋಡು ಕುಂಬ್ದಾಜೆ ಗ್ರಾಮದ ಮುಕ್ಕೂರು ಗುತ್ತು ದಿ. ಕೊರಗಪ್ಪ ರೈ ಮತ್ತು ಕಮಲ ದಂಪತಿ ಪುತ್ರರಾದ ವಿಠಲ ರೈ ದೇರ್ಲರವರು ಕಂದಾಯ ಅಧಿಕಾರಿಯಾಗಿ ಕುಂದಾಪುರ, ಉಡುಪಿ, ಸುಬ್ರಹ್ಮಣ್ಯ, ಪುತ್ತೂರು, ಮಡಿಕೇರಿ, ಉಜಿರೆ, ಬ್ರಹ್ಮಾವರ, ಸುಳ್ಯ ಮುಂತಾದ ಕಡೆ ಸೇವೆ ಸಲ್ಲಿಸಿದರು.
ಪುತ್ತೂರು ತಾಲೂಕು ವಾಲಿಬಾಲ್ ಎಸೋಸಿಯೇಶನ್ನ ಉಪಾಧ್ಯಕ್ಷರಾಗಿ, ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷರಾಗಿ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಮ ನಿರ್ದೇಶಿತ ಸದಸ್ಯರಾಗಿ, ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಶ್ರೀ ಅಯ್ಯಪ್ಪ ಸ್ವಾಮಿ ಗುಡಿ ನಿರ್ಮಾಣ ಸಮಿತಿಯಲ್ಲೂ ಇವರು ತೊಡಗಿಸಿಕೊಂಡಿದ್ದರು. ಪ್ರಸ್ತುತ ಕುಂಬ್ರ ವಿಶ್ವಯುವಕ ಮಂಡಲದ ಮಹಾಪೋಷಕರು, ದೇರ್ಲ ಲಕ್ಷ್ಮೀ ವೆಂಕಟ್ರಮಣ ಮಠದ ಸಂಚಾಲಕರಾಗಿದ್ದರು.
ಮೃತರಿಗೆ ಪತ್ನಿ , ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರ ಮನೆಗೆ ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಪುತ್ತೂರಿನ ಉದ್ಯಮಿ ಕರುಣಾಕರ ರೈ, ಚೆನ್ನಪ್ಪ ರೈ ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.