ಹೊದಿಸಬೇಕಿದೆ ಸತ್ತ ರೈತನ ಮೇಲೊಂದು ಕೇಸರಿ ಧ್ವಜ
ಕಾವ್ಯ
ಹೊದಿಸಬೇಕಿದೆ ಸತ್ತ ರೈತನ ಮೇಲೊಂದು ಕೇಸರಿ ಧ್ವಜ
ಆದರೆ ಆತ್ಮ ಶಾಂತಿಗಲ್ಲ
ಅನ್ನ ಕೊಡುವ ರೈತನ ಕಷ್ಟವೂ ರಾಜಕೀಯ ದಾಳವಿಲ್ಲಿ
ಬಂಡಿ ಹೊಡಿಯುವವನ ಮಾತಿಗಿಲ್ಲ ಬೆಲೆ ಇಲ್ಲಿ
ಸುಪ್ಪತ್ತಿಗೆಯ ಸುಖ ಮಾಡುವವರಿಗೆ ಕೋಟಿ ಲೂಟಿ
ಚಿಲ್ಲರೆ ನೂರು ಸಾವಿರ ಪರಿಹಾರ ಕೇಳುವವರಿಗೆ ಲಾಠಿ
ಕೊಳ್ಳೆಹೊಡೆದು ದೇಶವನು ಕಡೆಯಾಗಿ ಕಂಡು
ಓಡಿ ಹೋದವರಿಗಿಲ್ಲ ಅಂಜಿಕೆ
ಬತ್ತಿದ ಭೂಮಿಯ ತಾಯಿಯೆಂದು ನಂಬಿ
ದಿನದೂಡುವವನಿಗೆ ಗತಿಯಿಲ್ಲ ಗಂಜಿಗೆ ಹುಸಿ ದೇಶಭಕ್ತಿ ನುಡಿವವನಿಗೆ ಹಾರ ತುರಾಯಿಯ ಸನ್ಮಾನ
ದುಡಿದು ದೇಶಕಟ್ಟುವವನಿಗೆ ದಿನವೂ ಅವಮಾನ
ಹೊದಿಸಬೇಕಿದೆ ಸತ್ತ ರೈತನ ಮೇಲೊಂದು ಕೇಸರಿ ಧ್ವಜ
ಆದರೆ ಆತ್ಮ ಶಾಂತಿಗಲ್ಲ
ದೇಶ ನ್ಯಾಯದ ಬಗೆಗೆ ಮಾತಾಡಿದರೆ ಕೊಲ್ಲುವರಿಲ್ಲಿ.
ರೈತರ ಸಮಸ್ಯೆಗೆ ಪರಿಹಾರಗಳು ಗೌಣವಿಲ್ಲಿ
ಹಸಿರು ಬೆಳೆದು ಹಸಿದು ಸತ್ತ ರೈತನ ಚಿತೆಗೆ ಕೊಡಲು ಕಾಸಿಲ್ಲ
ಕೇಸರಿ ದ್ವೇಷ ಧ್ವಜ ಹೊದ್ದು ಸತ್ತರೆ ಲಕ್ಷ ಹಣಕ್ಕೆ ಕೊರತೆಯಿಲ್ಲ
ಅದಕ್ಕೆ ಹೇಳುತ್ತಿರುವುದು
ಹೊದಿಸಬೇಕಿದೆ ಸತ್ತ ರೈತನ ಮೇಲೊಂದು ಕೇಸರಿ ಧ್ವಜ
ಆದರೆ ಆತ್ಮ ಶಾಂತಿಗಲ್ಲ.