ಬಶೀರ್ ಅಹ್ಮದ್
ಮಂಗಳೂರು, ಜು.30: ಜೋಕಟ್ಟೆ ಅಂಜುಮಾನ್ ಖುವ್ವತುಲ್ ಇಸ್ಲಾಮ್ ಸಂಸ್ಥೆಯ ಸ್ಥಾಪಕರಲ್ಲಿ ಓರ್ವರಾದ ದಿ. ಅಹ್ಮದ್ ಮಾಸ್ಟರ್ ಅವರ ದ್ವಿತೀಯ ಪುತ್ರ ಮುಹಮ್ಮದ್ ಇಸ್ಮಾಯೀಲ್ (ಬಶೀರ್ ಅಹ್ಮದ್) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಬೆಳಗ್ಗೆ ನಿಧನರಾದರು.
ಅವಿಭಜಿತ ದ.ಕ. ಜಿಲ್ಲೆಯ ಇಸ್ಲಾಮೀ ಆಂದೋಲನದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದ ಇಸ್ಮಾಯೀಲ್ ಅವರು, ಮಣಿಪಾಲದ ಮಸ್ಜಿದುಲ್ ಜಾಮಿಯಾದಲ್ಲಿ ಕೆಲವು ವರ್ಷಗಳ ಹಿಂದೆ ಪ್ರತೀ ಶುಕ್ರವಾರ ಅರೆಬಿಕ್-ಇಂಗ್ಲಿಷ್ನಲ್ಲಿ ಪ್ರವಚನ ನೀಡುತ್ತಿದ್ದರು. ಅರೆಬಿಕ್-ಇಂಗ್ಲಿಷ್ ಭಾಷಾಂತಕರಾಗಿಯೂ ಚಿರಪರಿಚಿತರಾಗಿದ್ದರು.
ಕಳೆದ 15 ವರ್ಷಗಳಿಂದ ಸೌದಿ ಅರೇಬಿಯಾದ ಪ್ರತಿಷ್ಠಿತ ದಾರ್-ಅಲ್-ರಿಯಾದ್ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಯನ್ನು ನಿರ್ವಹಿಸಿದ್ದ ಅವರು, ಕಳೆದ ಒಂದು ವರ್ಷದಿಂದ ದೇರಳಕಟ್ಟೆಯ ಬದ್ರಿಯಾ ವಿದ್ಯಾ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಜೋಕಟ್ಟೆಯ ಮುಹಿಯುದ್ದೀನ್ ಹೊಸ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.