varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಕತ್ತೆಗೊಂದು ಕಾಲ

ವಾರ್ತಾ ಭಾರತಿ : 2 Nov, 2017
ಕುಂ. ವೀರಭದ್ರಪ್ಪ

ಶರ್ಮಾ ದಂಪತಿಯನ್ನು ಶ್ರೀಮಠದ ಆಡಳಿತವರ್ಗ ಅತಿಗಣ್ಯಾತಿಗಣ್ಯ ಅತಿಥಿಗಳೆಂದು ಪರಿಗಣಿಸಿತ್ತು. ಅವರಿಗೆ ತಿಪ್ಪೆ ಹೆಸರಿನ ವೈಭವೋಪೇತ ಅತಿಥಿಗೃಹದಲ್ಲಿ ವಾಸ್ತವ್ಯ ಕಲ್ಪಿಸಲಾಯಿತು. ಇಲ್ಲೊಂದು ವಿಶೇಷ ಸಂಗತಿ ಎಂದರೆ ಗಾರ್ದಭಾನಂದ ಪ್ರಭುಪಾದರನ್ನು ಉತ್ತರಾಧಿಕಾರಿಗಳೆಂದು ಪೂಜ್ಯ ಹಿರಿಯ ಸ್ವಾಮೀಜಿ ಘೋಷಿಸಿದ ಬಳಿಕ ಶ್ರೀಮಠ ಶರವೇಗದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ದೇಶದ ನಾನಾಕಡೆಯಿಂದ ಕೋಟ್ಯಧೀಶರು, ಉದ್ಯಮಿಗಳು, ರಾಜಕಾರಣಿಗಳು ‘ಅದನ್ನು ನಾನು ಇದನ್ನು ನೀನು ಎಂದು’ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಶ್ರೀಮಠದ ಶ್ರೇಯೋಭಿವೃದ್ಧ್ದಿಗೆ ಶ್ರಮಿಸುತ್ತಿದ್ದರು.

ಪೀಠಿಕಾ ಪ್ರಕರಣ

ಮಾತೃಭಾಷೆಯಲ್ಲಿ ಬರೆದರೆ ಕಷ್ಟ ಓದುವುದು, ಇನ್ನು ಮೃತಭಾಷೆಯಲ್ಲಿ ಬರೆದರೆ ಓದುವುದುಂಟೆ! ಈ ಸಮಸ್ಯೆಯನ್ನು ಅಕ್ಷರಶಃ ಎದುರಿಸಿದ್ದು ಪಂಡಿತ್ ವಿಲೋಮ ಶರ್ಮಾ. ಅವರು ಧರಿಸುತ್ತಿದ್ದುದೋ ಅಚ್ಚ ಬಿಳಿ ಉಡುಪು, ದಿನನಿತ್ಯ ಕ್ಷೌರ ಮಾಡಿಕೊಳ್ಳುತ್ತಿದ್ದುದರಿಂದಲೂ ಅಕ್ಷರಶಃ ಕೇಸರಿವರ್ಣದವರಾಗಿದ್ದರಿಂದಲೂ ಅವರ ಮುಖ ತಾಮ್ರದ ಪಾತ್ರೆಯಂತೆ ಹೊಳೆಯುತ್ತಿತ್ತು, ಪುಷ್ಕಲವಾಗಿದ್ದ ತಲೆಗೂದಲು ಬಿರುಗಾಳಿಗೂ ಮಿಸುಕುತ್ತಿರಲಿಲ್ಲ. ಇನ್ನು ಅದೇ ಮುಖದ ಮೇಲೆ ತ್ರಿಪುಂಡ್ರ ನಾಮಗಳಿತ್ಯಾದಿ ಜಾತಿಸೂಚಕ ಮುದ್ರಿತ ಲಾಂಛನಗಳು ಬೇರೆ. ಇನ್ನು ಕೊರಳಲ್ಲಿ ಅಭಿಮಂತ್ರಿತ ರುದ್ರಾಕ್ಷಿ ಮಾಲೆಗಳ ನಡುವೆ ತರಾವರಿ ಚಿನ್ನದ ಸರಗಳು, ಇನ್ನು ಅವರ ನೀಳಕಾಯವೋ ಅದರ ವಝನವೋ! ಶ್ರೀಯುತರು ಭೂಮಿ ಕಂಪಿಸುವಂತೆ ಹೆಜ್ಜೆ ಇಕ್ಕುತ್ತ ನಡೆಯುತ್ತಿದ್ದರು, ಶ್ರೀಯುತರು ಬಾಯಿ ತೆರೆದರೆ ಗುಡುಗು ಸಿಡಿಲುಗಳನ್ನು ನೆನಪಿಸುತ್ತಿದ್ದರು. ಇನ್ನು ಬಾಹುಗಳು ಮೊಣಕಾಲವರೆಗೆ ವಿಸ್ತರಿಸಿದ್ದರಿಂದ ಶ್ರೀಯುತರು ತಮ್ಮನ್ನು ತಾವು ವಿಷ್ಣುಪರಮಾತ್ಮನ ವ್ಯಕ್ತಿತ್ವಕ್ಕೆ ಹೋಲಿಸಿಕೊಳ್ಳಲು ನಾಚಿಕೊಳ್ಳುತ್ತಿರಲಿಲ್ಲ. ಅದಕ್ಕೆಂದೆ ತಮ್ಮ ಹಸ್ತಗಳನ್ನು ಚಿನ್ನದ ಕಡಗಗಳಿಂದಲೂ ನವರತ್ನಖಚಿತ ಹರಳುಗಳಿಂದ ಶೃಂಗರಿತ ಉಂಗುರಗಳಿಂದಲೂ ಸಿಂಗರಿಸಿ ವಿಷ್ಣು ಮೇಲಿನ ಅಪಾರಭಕ್ತಿಯನ್ನು ಪ್ರಕಟಿಸುತ್ತಿದ್ದರು. ಇನ್ನು ಅವರ ವಿದ್ವತ್ತಿಗೆ ಬಂದರೆ ಕಾಶಿಯಲ್ಲೊಂದೇ ಅಲ್ಲದೆ ಜರ್ಮನ್ ದೇಶದಲ್ಲೂ ಸಂಸ್ಕೃತವನ್ನು ಅಧ್ಯಯನ ಮಾಡಿದ್ದರು, ಕಾಳಿದಾಸ ಬಾಣ ಬಾರವಿಗಳಂಥ ಸೃಜನಶೀಲ ಲೇಖಕರ ಹಾಗೂ ದಂಡಿ ಕುಂತಕ ಅಭಿನವ ಗುಪ್ತರಂಥ ವೈಯಾಕರಣಿಗಳ ಅಭೇದ್ಯ ಕೃತಿಗಳನ್ನು ಜೀರ್ಣಿಸಿಕೊಂಡು ವಾತಾಪಿ ಎಂದು ಮಠಮಾನ್ಯಗಳಿಂದ ಶ್ಲಾಘಿಸಿಕೊಂಡಿದ್ದರು. ಸಂಸ್ಕೃತ ಭಾಷೆಯಲ್ಲಿ ಅವು ಇವು ಮಾತ್ರವಲ್ಲದೆ ಮಹಾಕಾವ್ಯಗಳನ್ನು ರಚಿಸಿ ರಾಷ್ಟ್ರಪತಿಗಳ ಮುಗುಳುನಗೆಗೆ ಪಾತ್ರರಾಗಿದ್ದರು, ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಹೊರತುಪಡಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಅಂಥ ತಮ್ಮ ಬಗ್ಗೆ ಈ ಪ್ರಾದೇಶಿಕ ಭಾಷಾ ಲೇಖಕರಿಗೇಕೆ ಅಸಡ್ಡೆ ಎನ್ನುವುದು ಅರ್ಥವಾಗುತ್ತಿಲ್ಲ! ಕನಿಷ್ಠಪಕ್ಷ ತಮ್ಮ ಷಷ್ಠ್ಯಬ್ಧಿ ಸಮಾರಂಭವನ್ನು ಆಚರಿಸಬಾರದೇನು ಇವರು! ತಮ್ಮ ಸಾಧನೆ ಕುರಿತು ಅಭಿನಂದನಾ ಗ್ರಂಥವನ್ನೆಂದೋ ಸಂಪಾದಿಸಿ ಗೌರವಿಸಿ ವಾಗ್ದೇವಿಯ ಕೃಪೆಗೆ ಪಾತ್ರರಾಗಬಹುದಿತ್ತು ಎಂದು ತಮ್ಮಷ್ಟಕ್ಕೆ ತಾವೇ ಗೊಣಗುವುದು ಶ್ರೀಯುತರ ದಿನಚರಿಯ ಭಾಗವಾಗಿತ್ತು. ಹ್ಹಾ ಅಂದಹಾಗೆ.. ಈ ಅತೃಪ್ತಿ ಶ್ರೀಯುತರನ್ನು ಕಾಡಲಾರಂಭಿಸಿದ್ದು ಅರವತ್ತರ ಬಳಿಕ. ಅವೆರಡು ಹಾಳಾಗಿ ಹೋಗಲಿ, ಹೋಗುವಾಗ ಬರುವಾಗ ಸ್ಥಳೀಯರು ತಮ್ಮನ್ನು ಗುರುತಿಸಿ ನಮಸ್ಕರಿಸದಿರುವುದು ಅಪಮಾನವೆಂದು ಭಾವಿಸಿದರು. ಆ ನಗರದಲ್ಲಿ ಲೇಖಕ ಸಾಹಿತಿಗಳಿದ್ದರು, ಸಾಹಿತ್ಯಿಕ ಸಂಘ ಸಂಸ್ಥೆಗಳು ಸಹ ಇದ್ದವು. ಸಾಹಿತ್ಯ ಅಕಾಡಮಿಗಳಿದ್ದವು. ಅಲ್ಲಿನ ಲೇಖಕರು ಎಲ್ಲೆಲ್ಲೊ ಹೋಗಿ ಉಪನ್ಯಾಸಗಳನ್ನು ನೀಡಿ ಮಾಧ್ಯಮಗಳಲ್ಲಿ ಮಿಂಚುತ್ತಿದ್ದರು. ನೀನೆನಗಿದ್ದರೆ ನಾನಿನಗೆ ಎಂಬ ಸಹಕಾರ ತತ್ವದ ಆಧಾರದ ಮೇಲೆ ಬೇರೆ ಬೇರೆ ನಗರವಾಸಿ ಸಾಹಿತಿಗಳನ್ನು ತಮ್ಮ ನಗರಕ್ಕೆ ಬರಮಾಡಿಕೊಂಡು ಸತ್ಕರಿಸುತ್ತಿದ್ದರು. ಆದರೆ ಅವರ್ಯಾರು ಇವರನ್ನು ಅಪ್ಪಿತಪ್ಪಿ ಮಾತಾಡಿಸುತ್ತಿರಲಿಲ್ಲ. ಇವರು ಸ್ವಯಂಪ್ರೇರಣೆಯಿಂದ ಮಾತಾಡಿಸಿದರು ಮಾತಾಡಿಸದೆ ಕಂಡು ಕಾಣದವರಂತೆ ಹೋಗುತ್ತಿದ್ದರು. ಇದು ಇವರ ಸಮಸ್ಯೆ ಮಾತ್ರವಾಗಿರಲಿಲ್ಲ, ಶ್ರೀಯುತರ ಧರ್ಮಪತ್ನಿ ಪ್ರಸೂನಮಾಂಬೆಯವರದ್ದು ಸಹ ಆಗಿತ್ತು. ಪ್ರಸಿದ್ಧ ಸಂಸ್ಕೃತ ಭಾಷೆಯ ಸಾಹಿತಿಯ ಪತ್ನಿಯಾದ ತಮಗೆ ನೆರೆಹೊರೆಯ ಮಹಿಳೆಯರು ಕನಿಷ್ಠ ಗೌರವ ಕೊಡುವುದು ಬೇಡವೆ! ಸಕ್ಕರೆ ಕಾಫಿಪುಡಿ ಇತ್ಯಾದಿ ಕೇಳಿ ಪಡೆದು ತಮ್ಮ ಹಂಗಿನಲ್ಲಿರುವುದು ಬೇಡವೆ! ತಮ್ಮ ಮನೆಯನ್ನು ಪ್ರವೇಶಿಸಿ ಕಪಾಟೊಳಗೆ ಅಲಂಕರಿಸಲ್ಪಟ್ಟಿರುವ ಸ್ಮರಣಿಕೆಗಳನ್ನು ಕಣ್ತುಂಬ ನೋಡುವುದು ಬೇಡವೆ! ತಮ್ಮ ಮನೆಯ ಆಕರ್ಷಕ ಕಪಾಟಿನಲ್ಲಿ ಜೋಡಿಸಿಟ್ಟಿರುವ ಸಂಸ್ಕೃತ ಪಾಲಿ ಪೈಶಾಚಿಕ ಹಾಗೂ ಇನ್ನಿತರ ಅಲಭ್ಯ ಭಾಷೆಗಳ ತೂಕದ ಗ್ರಂಥಗಳನ್ನು ತೆರೆದು ನೋಡುವುದೊತ್ತಟ್ಟಿಗಿರಲಿ ಅಬ್ಬಾ ಎಂದು ಉದ್ಗರಿಸುವುದಾದರು ಬೇಡವೇನು! ಛೀ ಛೀ ಎಂದು ಅಭಿರುಚಿಹೀನರು ಎಂದು ಸಿಡಿಮಿಡಿಗುಟ್ಟುತ್ತಿದ್ದರು. ತಾವು ವಾಸಿಸುತ್ತಿರುವುದು ಕಾಡಲ್ಲೊ ಊರಲ್ಲೋ! ಪ್ರತಿನಿತ್ಯ ವಟಗುಟ್ಟುತ್ತಿದ್ದರು. ಇವೊಂದೇ ಅಲ್ಲದೆ ದಿನಂಪ್ರತಿ ಒಂದಲ್ಲಾ ಒಂದು ಅಪಶಕುನಗಳು ಬೇರೆ. ಈ ಸಸ್ಯಾಹಾರಿ ದಂಪತಿ ಮೃಷ್ಟಾನ್ನ ಭೋಜನ ಮಾಡುತ್ತಿದ್ದರು ಸಹ ಈ ತೆರನ ಚಿಂತೆಯಿಂದ ರಕ್ತಹೀನತೆಯಿಂದ ನರಳಲಾರಂಭಿಸಿದರು. ಅಲ್ಲದೆ ನಿದ್ರಾಹೀನತೆ ಬೇರೆ, ಅಲ್ಲದೆ ತಮಗೆ ಬೀಳುತ್ತಿದ್ದ ದುಃಸ್ವಪ್ನಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ತಮ್ಮ ಮಲಮೂತ್ರ ಪರೀಕ್ಷಿಸಿದ ವೈದ್ಯರ ಪಾಲಿಗೆ ಅವರು ಆಶ್ಚರ್ಯಚಕಿತ ಚಿಹ್ನೆಗಳಂತೆ ಗೋಚರಿಸಿದರು. ದಿನಗಳೆದಂತೆ ಅವರಿಬ್ಬರು ಎಂಥ ಭ್ರಾಂತಿಗೊಳಗಾದರೆಂದರೆ ಸ್ಥಳೀಯ ಲೇಖಕರು ತಮ್ಮನ್ನು ನಾಶ ಮಾಡಲು ಸಂಚು ನಡೆಸುತ್ತಿರಬಹುದೇ ಎಂದು ಸಂದೇಹಿಸತೊಡಗಿದರು. ಅಲ್ಲದೆ ಅದನ್ನು ಮಾಧ್ಯಮದೆದುರು ಹೊರಹಾಕಿ ಅವರ ಹರಿತ ಮಾತುಗಳ ಹಲ್ಲೆಗೆ ತುತ್ತಾದರು. ಈ ಅನರ್ಥ ಉಪಟಳ ಬೇಗುದಿಯಿಂದ ಬಿಡುಗಡೆ ಪಡೆಯಲಿಕ್ಕೆಂದು..

ಹ್ಹಾಂ ಅಂದಹಾಗೆ ಶಾಸ್ತ್ರ ಚೂಡಾಮಣಿ ಪ್ರಶಸ್ತಿ ಪುರಸ್ಕೃತ ಪಂ. ವಿಲೋಮಶರ್ಮಾರು ಎಂದು ಶಾಸ್ತ್ರೋಕ್ತ ರೀತಿಯಲ್ಲಿ ಕರೆದದ್ದು ಶ್ರೀಗಾರ್ದಭಪುರಿ ಕ್ಷೇತ್ರದ ಶ್ರೀ ಶ್ರೀ ವಿಪುಲಾನಂದ ಭಗವತ್ಪಾದರು, ಅಂದರೆ ಈಗ ಭೌತಿಕವಾಗಿ ಜೀವಂತವಿರುವ ಶ್ರೀಶ್ರೀ ವ್ಯಾಕುಲಾನಂದ ಭಗವತ್ಪಾದರ ತೀರ್ಥರೂಪ ಸಮಾನರು. ಅವತ್ತಿನಿಂದ ಇವತ್ತಿನ ತನಕ ಶರ್ಮಾರು ಗಾರ್ದಭಪುರಿ ಮಠಕ್ಕೆ ಶ್ರದ್ಧೆ ಭಕ್ತಿಯಿಂದ ನಡೆದುಕೊಳ್ಳುತ್ತಿರುವರು. ಶ್ರೀಗಳು ಹಾಕಿದ ಗೆರೆಯನ್ನು ಲಕ್ಷ್ಮಣರೇಖೆ ಎದೇ ಭಾವಿಸಿ ಇದುವರೆಗೆ ಶರ್ಮಾರು ಉಲ್ಲಂಘಿಸಿಲ್ಲವೆನ್ನುವುದು ಅತಿಶಯೋಕ್ತಿ ಅಲ್ಲವೆ ಅಲ್ಲ. ಸಾಹಿತಿವೇತ್ತರು ವರ್ಷಕ್ಕೆರಡು ಸಲವಾದರು ಶ್ರೀಕ್ಷೇತ್ರದಲ್ಲಿ ಹಲವು ದಿವಸಗಳ ಪರ್ಯಂತ ವಾಸ್ತವ್ಯ ಹೂಡಿ ತಮ್ಮ ದೈಹಿಕ ಹಾಗೂ ಮಾನಸಿಕ ಕ್ಲೇಷಗಳನ್ನು ನಿವಾರಿಸಿಕೊಂಡಿರುವುದುಂಟು. ಅಂಥ ಗಣ್ಯಾತಿಗಣ್ಯ ವ್ಯಕ್ತಿಗಳಿಗೆಂದೇ ಶ್ರೀಗಳು ಶ್ರೀಮಠದಲ್ಲಿ ಯುನಾನಿ ಅಲೋಪತಿ ಹೊರತುಪಡಿಸಿ ಇನ್ನಿತರೆ ವೈದ್ಯಕೀಯ ಪದ್ಧತಿಗಳನ್ನು ಅಳವಡಿಸಿ ರಾಷ್ಟ್ರದಾದ್ಯಂತ ಹೆಸರು ಗಳಿಸಿರುವರು. ಮೃತಭಾಷೆ ಮೃತಸಂಸ್ಕೃತಿಗೆ ಸಂಬಂಧಿಸಿದ ಸನಾತನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುವರು. ಅಂಥವರಲ್ಲಿ ಪಂ. ಶರ್ಮಾರು ಅಗ್ರಗಣ್ಯಮಾನ್ಯರು.

ಅದೇ ಸಮಯಕ್ಕೆ ಸರಿಯಾಗಿ ಶ್ರೀಗಳಿಂದ ಬಂದ ಆಮಂತ್ರಣದ ಒಕ್ಕಣಿಕೆಯಲ್ಲಿ ಏನಿತ್ತೆಂದರೆ.. ಶ್ರೀಶ್ರೀ ವ್ಯಾಕುಲಾನಂದ ಭಗವತ್ಪಾದರು ಪೀಠಾರೋಹಣ ಮಾಡಿ ಐವತ್ತು ವರ್ಷಗಳು ಉರುಳಿರುವ ವಿಷಯ ತಿಳಿದು ಶರ್ಮಾರು ಆನಂದಾತಿಶಯದಿಂದ ಬೀಗಿದರು. ಕಾರಣ ಷೋಡಷಪ್ರಾಯದವರಿದ್ದ ಶ್ರೀಗಳ ಅಂಗಸೌಷ್ಠವ ಕುರಿತು ಸೌಂದರ್ಯ ಲಹರಿ ರಚಿಸಿದಾಗ ಶರ್ಮಾರ ವಯಸ್ಸು ಕೇವಲ ಇಪ್ಪತ್ತೈದರ ಒಳಗೆ ಇತ್ತು. ಆ ಖಂಡಕಾವ್ಯ ಆರ್ಯಾವರ್ತ ವಿಶ್ವವಿದ್ಯಾನಿಲಯಗಳಲ್ಲಿ ಕಳೆದ ಐವತ್ತು ವರ್ಷಗಳಿಂದ ಪಠ್ಯವಾಗಿರುವುದು, ಅಲ್ಲದೆ ಅದು ಪೈಶಾಚಿಕ ಪ್ರಾಕೃತ ಹಿಬ್ರೂ ಪಾಳಿ ಭಾಷೆಗಳಿಗೆ ಅನುವಾದಗೊಂಡು ಈಜಿಪ್ಟ್ ದೇಶದ ಕೈರೋ ನಗರದ ವಸ್ತುಸಂಗ್ರಹಾಲಯದ ಪಾಲಾಗಿರುವುದು. ಅದನ್ನು ಕಲಿಸುತ್ತಿರುವ ಪ್ರಾಧ್ಯಾಪಕರ ಪಂಡಿತೋತ್ತ ಮರ ಮುಗುಳ್ನಗೆಯನ್ನು ಅಪಹರಿಸಿರುವುದು. ಆದರೂ ಆ ಕಬ್ಬಿಣದ ಕಡಲೆಯು ಇಂದಿಗೂ ಆಶ್ಚರ್ಯಚಕಿತ ಚಿಹ್ನೆಯ ಪ್ರಭಾವಳಿ ಧರಿಸಿರುವುದು. ಶರ್ಮಾರ ಹಾಗೂ ಶ್ರೀಗಳ ಅನ್ಯೋನ್ಯತೆಗೆ ಇಂಥ ಕಾರಣಗಳು ಅನೇಕ ಇರುವವು. ಇದು ಕಥಾನಕದ ಪೀಠಿಕಾಪ್ರಕರಣವಾದ್ದರಿಂದ ಅವೆಲ್ಲವನ್ನು ಪ್ರಸ್ತಾಪಿಸುವುದು ಒಳಿತಲ್ಲ. ಒಂದೆ ಮಾತಲ್ಲಿ ಹೇಳುವುದಾದರೆ ಶರ್ಮಾರು ಭಗವತ್ಪಾದರ ಆತ್ಮದ ಪರಿಚ್ಛೇದವೆಂದು ಹೇಳಬಹುದು. ಕ್ಲೇಷಕ್ಕೆ ತುತ್ತಾದ ಶರ್ಮಾರ ಕನಸಿನಲ್ಲಿ ಹೊಳೆದು ಶ್ರೀಮಠದಲ್ಲಿ ವಿಶ್ರಾಂತಿ ಪಡೆದು ಪಾಂಡಿತ್ಯಕ್ಕೆ ಸಂಬಂಧಿಸಿದ ದಣಿವು ನಿವಾರಿಸಿಕೊ ಎಂದು ಅಪ್ಪಣೆ ನೀಡುವ ಪರಿಪಾಟ ಅನೂಚಾನವಾಗಿ ನಡೆದು ಬಂದಿರುವುದು. ಅದರಂತೆ!

ಅಪ್ಪಣೆಯಾಯಿತೆ ಎಂದು ಪ್ರಸೂನಾಂಬೆಯು ಇನ್ನು ಇಲ್ಲವೆಂದು ಸಚ್ಚಾರಿತ್ರರು! ಹೀಗೆ ಮುಂದುವರಿದಲ್ಲಿ ತಮ್ಮ ಮನಸ್ಸು ಕ್ಲೇಷಗಳ ಸೆರೆಮನೆಯಾಗುವುದು ನಿಸ್ಸಂದೇಹವೆಂದು ಊಹಿಸಿ ಆ ಸಾದ್ವಿ ವಿಶೇಷ ಅರ್ಚನೆ ಮಾಡಿದಳು. ಪಾತಿವ್ರತ್ಯದ ಫಲವೋ ಎಂಬಂತೆ! ಆ ದಿವಸ ಅರುಣೋದಯ ಸಮಯದಲ್ಲಿ ಶರ್ಮಾರು ಪ್ರಸೂನಾ ಎಂದು ಆನಂದಾತಿಶಯದಿಂದ ಉದ್ಗರಿಸಿದರಲ್ಲದೆ ಆಕೆಯನ್ನು ಆಲಂಗಿಸಿ ವಿಷಯ ತಿಳಿಸಿದರು. ಅಪ್ಪಣೆಯಾಗಲಿ ಮಹಾಸ್ವಾಮಿ ಎಂದು ಅಂಗಲಾಚಿದ್ದಕ್ಕೆ ದ್ವಿಪಾದಿ ಭಗವತ್ಪಾದರ ಬದಲಿಗೆ ಶ್ರೀಶ್ರೀ ಚತುಷ್ಪಾದಿ ಭಗವತ್ಪಾದರು ಗೋಚರಿಸಿ ಉಲಿದು ಅಪ್ಪಣೆ ಕೊಡಿಸಿದರೆಂದು ವಿವರಿಸಿದರು. ಶ್ರೀಶ್ರೀ ವ್ಯಾಕುಲಾನಂದ ಭಗವತ್ಪಾದರ ಆತ್ಮ ಶ್ರೀಮಠದ ಉತ್ತರಾಧಿಕಾರಿ ಶ್ರೀಚತುಷ್ಪಾದಾನಂದ ಸ್ವಾಮೀಜಿಯವರ ದೇಹದೊಳಗೆ ವಿಹರಿಸುತ್ತಿರುವುದೆಂದು ವಾಡಿಕೆ. ಅದರಂತೆ ಅವತ್ತು ಸಹ. ದ್ವಿಪಾದಿಗಳು ಚತುಷ್ಪಾದಿಗಳು ಅಧ್ಯಾತ್ಮ ಎಂಬ ನಾಣ್ಯದ ಎರಡು ಮುಖಗಳಷ್ಟೆ.

ಪಂ. ವಿಲೋಮಶರ್ಮಾರು ಪತ್ನಿಯೊಂದಿಗೆ ಬ್ರಾಹ್ಮಿಮುಹೂರ್ತದಲ್ಲಿ ಹೊರಟು ಗೋಧೂಳಿ ಮುಹೂರ್ತಕ್ಕೆ ಸರಿಯಾಗಿ ಶ್ರೀಕ್ಷೇತ್ರ ಗಾರ್ದಭಪುರಿ ಪ್ರವೇಶಿಸಿದರು. ಅದು ಪರಮ ಪವಿತ್ರ ದಿವಸವಾಗಿತ್ತು, ಕಾರಣ ಚತುಷ್ಪಾದಾನಂದ ಭಗವತ್ಪಾದರು ಉತ್ತರದಾಯಿತ್ವದ ಪೀಠಾರೋಹಣ ಮಾಡಿದ್ದು ಅದೇ ದಿವಸ. ಆದ್ದರಿಂದ ಭಕ್ತಾದಿಗಳು ನಾಡಿನ ಅಷ್ಟದಿಕ್ಕುಗಳಿಂದ ಆಗಮಿಸಿದ್ದರು. ಬಜಾರಗಳಲ್ಲಿ ರಸ್ತೆ ರಸ್ತೆಗಳಲ್ಲಿ ಗಾರ್ದಭೇಶ್ವರರ ಆಕರ್ಷಕ ಪ್ರತಿಕೃತಿಗಳನ್ನು ಮಾರುತ್ತಿದ್ದರು. ಸ್ವಯಂಪ್ರೇರಿತರಾಗಿ ತಂಡೋಪತಂಡಗಳಾಗಿ ಆಗಮಿಸಿದ್ದ ಜಾನಪದ ಕಲಾವಿದರಲ್ಲಿ ಕೆಲವರು ಹಾಡುತ್ತಿದ್ದರು, ಇನ್ನು ಕೆಲವರು ಕುಣಿಯುತ್ತಿದ್ದರು. ಶರ್ಮಾ ದಂಪತಿಯ ಮನಸ್ಸನ್ನು ಸೂರೆಗೊಂಡ ದೃಶ್ಯವೆಂದರೆ ಶ್ರೀಮಠದ ಪ್ರತಿಭಾವಂತ ವಿದ್ಯಾರ್ಥಿಗಳು ಶ್ರೀಗಳ ಪ್ರೀತ್ಯರ್ಥ ಗಾರ್ದಭಗಳಂತೆ ವೇಷಧಾರಣ ಮಾಡಿ ಅವುಗಳ ಧ್ವನಿಯನ್ನು ಅನುಕರಿಸುತ್ತಿದ್ದುದು, ಭಕ್ತಾದಿಗಳು ಕೇಕೆ ಹಾಕಿ ಅವರ ಪ್ರತಿಭೆಯನ್ನು ಮುಕ್ತಕಂಠದಿಂದ ಮತ್ತೇಭವಿಕ್ರೀಡಿತ ವೃತ್ತದಲ್ಲಿ ಶ್ಲಾಘಿಸುತ್ತಿದ್ದುದು ನಯನಮನೋಹರವಾಗಿತ್ತು.

ಶರ್ಮಾ ದಂಪತಿಯನ್ನು ಶ್ರೀಮಠದ ಆಡಳಿತವರ್ಗ ಅತಿಗಣ್ಯಾತಿಗಣ್ಯ ಅತಿಥಿಗಳೆಂದು ಪರಿಗಣಿಸಿತ್ತು. ಅವರಿಗೆ ತಿಪ್ಪೆ ಹೆಸರಿನ ವೈಭವೋಪೇತ ಅತಿಥಿಗೃಹದಲ್ಲಿ ವಾಸ್ತವ್ಯ ಕಲ್ಪಿಸಲಾಯಿತು. ಇಲ್ಲೊಂದು ವಿಶೇಷ ಸಂಗತಿ ಎಂದರೆ ಗಾರ್ದಭಾನಂದ ಪ್ರಭುಪಾದರನ್ನು ಉತ್ತರಾಧಿಕಾರಿಗಳೆಂದು ಪೂಜ್ಯ ಹಿರಿಯ ಸ್ವಾಮೀಜಿ ಘೋಷಿಸಿದ ಬಳಿಕ ಶ್ರೀಮಠ ಶರವೇಗದಲ್ಲಿ ಅಭಿವೃದ್ದಿ ಪಥದಲ್ಲಿ ಸಾಗಿತ್ತು. ದೇಶದ ನಾನಾಕಡೆಯಿಂದ ಕೋಟ್ಯಧೀಶರು, ಉದ್ಯಮಿಗಳು, ರಾಜಕಾರಣಿಗಳು ‘ಅದನ್ನು ನಾನು ಇದನ್ನು ನೀನು ಎಂದು’ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಶ್ರೀಮಠದ ಶ್ರೇಯೋಭಿವೃದ್ಧ್ದಿಗೆ ಶ್ರಮಿಸುತ್ತಿದ್ದರು. ಶ್ರೀಕ್ಷೇತ್ರವನ್ನು ಆವರಿಸಿದ್ದ ಪರ್ವತಗಳ ಮೇಲೆ ಅತಿಥಿಗೃಹಗಳು ತಲೆ ಎತ್ತಿದ್ದವು. ಗಾರ್ದಭಾನಂದ ಪ್ರಭೂಜಿಯವರ ಪ್ರೀತ್ಯರ್ಥ ತ್ಯಾಜ್ಯವೆಲ್ಲವು ಪೂಜ್ಯವೆಂದು ಪರಿಗಣಿಸಲ್ಪಟ್ಟಿತ್ತು. ಆದ್ದರಿಂದ ಆ ಗಿರಿಶಿಖರದ ಮೇಲೆ ನಿರ್ಮಿಸಲಾಗಿದ್ದ ಅತಿಥಿಗೃಹಕ್ಕೆ ಕಸ ಎಂದು ನಾಮಕರಣ ಮಾಡಿದ್ದರು. ಶ್ರೀಮಠದಲ್ಲಿ ಆಸ್ಥಾನ ವಿದ್ವಾನ್ ಕೀರಲುಕುಮಾರ್ ಅವರ ಕರ್ಕಶ ಸ್ವರಾಲಾಪನೆಯನ್ನು ಬೆಟ್ಟಗಳೆಲ್ಲವು ಪ್ರತಿಧ್ವನಿಸುತ್ತಿದ್ದವು. ಅದರ ಪರಿಣಾಮ ಆ ಪ್ರಾಂತದಲ್ಲಿದ್ದ ಕೋಗಿಲೆಗಳು ದೂರದೂರಕ್ಕೆ ವಲಸೆ ಹೋಗಿದ್ದವು. ಅವುಗಳ ಸ್ಥಾನದಲ್ಲಿ ಅಪಾರ ಸಂಖ್ಯೆಯಲ್ಲಿ ಕಾಗೆಗಳು ಆಗಮಿಸಿ ವಿರಾಜಮಾನವಾಗಿದ್ದವು. ಹೀಗಾಗಿ ಕರ್ಕಶ ಎಂಬ ಪದಕ್ಕೆ ತಾರಾವೌಲ್ಯ ಪ್ರಾಪ್ತವಾಗಿತ್ತು.

ಮಾರನೆ ದಿವಸ ಶ್ರೀಶ್ರೀಗಾರ್ದಭಾನಂದ ಭಗವತ್ಪಾದರ ಪೀಠಾರೋಹಣದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಸಂಗೀತ ಸಂಸ್ಕೃತಿ ಇಲಾಖೆ ಸಚಿವೆ ಕು ಗ್ರಾಂಥಿಕಾ ದೋಮೆ ಉದ್ಘಾಟಿಸಿದರು. ಬಳಿಕ ಪ್ರಸಿದ್ಧ ಉದ್ಯಮಿ ಪದ್ಮಶ್ರೀ ಜಲಕಾಕ್ ಮತ್ತವರ ಕುಟುಂಬದ ಸದಸ್ಯರು ಶ್ರೀಶ್ರೀ ಗಾರ್ದಭಾನಂದ ಪ್ರಭುಪಾದರಷ್ಟೆ ತೂಕದ ಬೆಳ್ಳಿರೂಪಾಯಿಗಳನ್ನು ಶ್ರೀಮಠಕ್ಕೆ ಅರ್ಪಿಸಿ ಕೃತಾರ್ಥರಾದರು. ಬಳಿಕ ಎಂದಿನಂತೆ ನಡೆದ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದವು, ಅವೆಲ್ಲ ಭಕ್ತಿಪೂರ್ವಕವಾಗಿ ಹಾಜರಿದ್ದ ಭಕ್ತಸ್ತೋಮವನ್ನು ರೋಮಾಂಚನಗೊಳಿಸಿದವು. ಹೀಗೆ ಸಮಾರಂಭ ಸಾಂಗೋಪಾಂಗವಾಗಿ ಮುಕ್ತಾಯಗೊಳ್ಳುವಷ್ಟರಲ್ಲಿ!

ಅಂದು ಸಮಯ ಹನ್ನೆರಡು ದಾಟಿದ್ದರಿಂದ ಹಿರಿಯ ಸ್ವಾಮೀಜಿಯವರ ದರ್ಶನ ಪ್ರಾಪ್ತವಾಗಲಿಲ್ಲ. ಮಾರನೆ ದಿವಸದವರೆಗೆ ಶರ್ಮಾ ದಂಪತಿಯು ನಿರೀಕ್ಷಣಾನೋಂಪಿ ಆಚರಿಸುವುದು ಅನಿವಾರ್ಯವಾಯಿತು. ತಾವಿದ್ದ ಅತಿಥಿಗೃಹದಲ್ಲಿ ಅತಿಗಣ್ಯರಿಗೆ ಮೀಸಲಿರಿಸಿದ್ದ ಸುಸಜ್ಜಿತ ಕೋಣೆಗಳಲ್ಲಿ ವಿವಿಧ ನಗರಗಳಿಂದ ಆಮಂತ್ರಿಸಲ್ಪಟ್ಟಿದ್ದ ಗಾರ್ದಭಿನಿಯರಿಗೆ ವಸತಿ ಕಲ್ಪಿಸಲಾಗಿತ್ತು. ಅವೆಲ್ಲ ಬೆದೆಗೆ ಬಂದಿದ್ದರಿಂದ ಕೆರಳಿ ಚೀರಿಕೊಳ್ಳುತ್ತಿದ್ದವಲ್ಲದೆ ತಮ್ಮ ಪೋಷಕರ ಮೇಲೆ ಹಲ್ಲೆ ನಡೆಸಿ ಹಿಂಸಿಸುತ್ತಿದ್ದವು. ತೀರಾ ಪಕ್ಕದ ಕೋಣೆಯಲ್ಲಿದ್ದ ಶರ್ಮಾ ದಂಪತಿಯು ನಿದ್ದೆ ಮಾಡದೆ ಎಲ್ಲಿಯವರೆಗೆ ಮಗ್ಗುಲು ಬದಲಾಯಿಸುತ್ತ ಕೃತಕ ನಿದ್ದೆಯನ್ನು ಅಭಿನಯಿಸಲಾದೀತು! ಪೂರ್ಣ ಎಚ್ಚರಗೊಂಡು ಪರಸ್ಪರ ಮುಖಗಳನ್ನು ನೋಡುತ್ತಲು, ಅದು ಇದು ಮಾತನಾಡುತ್ತಲು ಕಾಲಕ್ಷೇಪ ಮಾಡಲಾರಂಭಿಸಿದರು. ತಮಗೆ ಮೂರೂವರೆ ಮಕ್ಕಳಿದ್ದರು ಸಹ ಅವರು ಅಕ್ಷರಶಃ ಒಂಟಿಯಾಗಿದ್ದರು. ಕಾರಣ ಅವೆಲ್ಲ ಇನ್ನಿತರೆ ದೇಶಗಳಿಗೆ ವಲಸೆ ಹೋಗಿದ್ದವು. ಅವುಗಳ ಹೆಸರುಗಳನ್ನು ಹೇಳುವುದಾದರೆ ಜೇಷ್ಠಪುತ್ರ ವಿಷಪ್ರಾಶನಶರ್ಮಾ, ಮಧ್ಯಮಪುತ್ರ ಪಂ. ಅಪವ್ಯಯಶರ್ಮಾ ಹಾಗೂ ತೃತೀಯಪುತ್ರನ ಹೆಸರು ವೃಕೋದರಶರ್ಮಾ. ಆ ಸಂತಾನವು ನಿಮ್ಮಂಥ ಮತಿಹೀನರು ನಮ್ಮ ತಂದೆತಾಯಿಗಳು ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದು ಎಂದು ಖತಿಯಿಂದ ನುಡಿದಂದಿನಿಂದ ಅವರ ಮುಖಗಳನ್ನು ತಾವಾಗಲಿ, ತಮ್ಮ ಮುಖಗಳನ್ನು ಅವರಾಗಲಿ ನೋಡಿಲ್ಲ. ಆದರು ತಮ್ಮವು ಹೆತ್ತ ಕರುಳುಗಳು ಅಲ್ಲವೆ! ಮಕ್ಕಳ ಸೊಸೆಯಂದಿರ ಹಾಗೂ ಚಿನಕುರುಳಿಗಳಂಥ ಮೊಮ್ಮಕ್ಕಳ ನೆನಪುಗಳನ್ನು ಆವಾಹಿಸಿಕೊಂಡು ಮೆಲಕು ಹಾಕಿದರು. ಕಾಲಕ್ಷೇಪಕ್ಕೆ ನೆನಪುಗಳೆ ಆಹಾರ ತಾನೆ! ಇನ್ನು ತಾವು ಊಹಾತ್ಮಕವಾಗಿ ವಿದೇಶಗಳನ್ನು ಸುತ್ತುವವರಿದ್ದರು, ಆದರೆ ಅಷ್ಟರಲ್ಲಿ..

ಏಕಕಾಲಕ್ಕೆ ಸಹಸ್ರಾರು ಗಾರ್ದಭಗಳು ಒಕ್ಕೊರಲಿನಿಂದ ಸುಪ್ರಭಾತ ಹಾಡಲಾರಂಭಿಸಿದೊಡನೆ ಭಕ್ತಾದಿಗಳು ಬಡಿದೆಬ್ಬಿಸಿದಂತೆ ಎಚ್ಚರವಾದರು. ಶ್ರೀಶ್ರೀ ಗಾರ್ದಬೇಶ್ವರರು ಮಠದ ಉತ್ತರದಾಯಿತ್ವ ವಹಿಸಿಕೊಂಡ ಕ್ಷಣವೇ ಉತ್ತರಾದಿ ದಕ್ಷಿಣಾದಿ ಸಂಗೀತವನ್ನು ಶ್ರೀಮಠದಿಂದ ಉಚ್ಛಾಟಿಸಲ್ಪಟ್ಟಿತು, ಸುಪ್ರಸಿದ್ಧ ಸಂಗೀತಗಾರರನ್ನು ಅಲ್ಲಿಂದ ಓಡಿಸಲಾಯಿತೆನ್ನುವುದಕ್ಕಿಂತ ಅವರೆ ಅಲ್ಲಿಂದ ತಮ್ಮ ತಮ್ಮ ಕಾಲುಗಳಿಗೆ ಬುದ್ದಿ ಹೇಳಿದರೆನ್ನುವುದೆ ಸೂಕ್ತ. ಎಲ್ಲ ಸಂಗೀತಗಾರರ ಮನಸ್ಥಿತಿ ಒಂದೇೆ ಇದ್ದರು ಆರ್ಥಿಕ ಸ್ಥಿತಿ ಒಂದೇ ಇರಲು ಸಾಧ್ಯವೇ? ಅದು ಅವರವರ ಅದೃಷ್ಟವಲ್ಲದೆ ಇನ್ನೇನು? ಆದ್ದರಿಂದ ತೀರಾ ಹತಾಶ ಸ್ಥಿತಿಯಲ್ಲಿದ್ದ ಕಳಪೆ ಸಂಗೀತಗಾರರು ತಮ್ಮ ಪ್ರಾರಾಬ್ಧದ ಮೇಲೆ ಬಾರಹಾಕಿ ಅಲ್ಲಿಯೆ ಉಳಿದರು. ತಮ್ಮ ಧ್ವನಿಯನ್ನು ಗಾರ್ದಭ ಧ್ವನಿಗೆ ಬದಲಾಯಿಸಿಕೊಂಡರು. ಗಾರ್ದಭ ಸ್ವರವಿನ್ಯಾಸದಲ್ಲಿ ಹಲವು ರಾಗಗಳನ್ನು ಸಂಶೋಧಿಸಿ ಶ್ರೀಗಳ ಕೃಪೆಗೆ ಪಾತ್ರರಾದರು. ಆದ್ದರಿಂದ ಶ್ರೀಮಠದ ಸಾತ್ವಿಕ ಪರಿಸರದಲ್ಲಿ ಸುಶುಪ್ತಿ ಜಾಗರಗಳ ನಡುವೆ ಅಂತರವಿರಲಿಲ್ಲ, ನಿದ್ದೆ ನೆಮ್ಮದಿಗೆ ಆಸ್ಪದವಿರಲಿಲ್ಲ. ನಶ್ವರ ಮನುಷ್ಯನನ್ನು ಅತೃಪ್ತಿ ಆಶಾಂತಿ ಕಾಡುತ್ತಿರಬೇಕೆನ್ನುವುದು, ಹಾಗೆ ಕಾಡಿದಾಗಲೆ ಮೋಕ್ಷ ಪ್ರಾಪ್ತಿಯಾಗುವುದು ಎನ್ನುವುದು ಶ್ರೀಗಳ ಆಶೀರ್ವಚನ. ಆದ್ದರಿಂದ ಶರ್ಮಾ ದಂಪತಿ ತಮ್ಮ ದೇಹಗಳನ್ನು ಹಾಸಿಗೆಯಿಂದ ಬೇರ್ಪಡಿಸಿದರು.

ಮೊದಲು ಸ್ನಾನ ಸಂಧ್ಯಾವಂದನೆ ಮುಗಿಸಿದ ಶ್ರೀಯುತರು ಪಂಚಾಂಗದ ಪುಟಗಳನ್ನು ತಿರುವಿ ಗ್ರಹಗತಿಗಳನ್ನು ಪರಿಶೀಲಿಸಿದರು. ಕಾಕತಾಳೀಯವೆಂದರೆ ತಾವು ನಿರ್ಧರಿಸಿದ ವೇಳೆಗೆ ಸರಿಯಾಗಿ ಶ್ರೀಮಠದಿಂದ ಆಮಂತ್ರಣ ಕೋಣೆಯ ಹೊಸ್ತಿಲು ಪ್ರವೇಶಿಸಿತು. ಶ್ರೀಮತಿ ಪ್ರಸೂನಾಂಬೆ ಅರ್ಧ ತಾಸಿನಲ್ಲಿ ಮಡಿಯುಡಿ ಧರಿಸಿ ಸಿದ್ಧ್ದರಾದರು. ಹೊರಟರೆನ್ನುವುದಕ್ಕಿಂತ..

ಹಿಂದಿನ ದಿವಸವಷ್ಟೇ ರಾಜ್ಯಮಟ್ಟದ ಗಾರ್ದಭಗಳ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಲೆಂದು ನಾಡಿನ ನಾಲ್ಮೂಲೆಯಿಂದ ನೂರಾರು ಗಾರ್ದಭಗಳು ಶ್ರೀಮಠಕ್ಕೆ ಆಗಮಿಸಿದ್ದವು. ಅವೆಲ್ಲ ರಸ್ತೆ ಇಕ್ಕೆಲದಲ್ಲಿ ಪೌಷ್ಟಿಕಯುಕ್ತ ಆಹಾರ ನಮಲುತ್ತಿದ್ದವು. ಅವುಗಳಲ್ಲಿ ಕೆಲವು ಆವೇಶದಿಂದ, ಇನ್ನು ಕೆಲವು ಭಾವುಕತೆಯಿಂದ ಮತ್ತು ಕೆಲವು ಲೈಂಗಿಕ ವಾಂಛೆಯಿಂದ ಹೇಷಾರವ ಮಾಡಿ ದ್ವಿಪಾದಿಗಳನ್ನು ಬೆಚ್ಚಿ ಬೀಳಿಸುತ್ತಿದ್ದವು. ಅದೇ ಸಮಯಕ್ಕೆ ಸರಿಯಾಗಿ ಎದುರಿಗೆ ಆಗಮಿಸಿದ ಡಾ ವೃಶ್ಚಿಕಾನಂದ್ ಅವಾಸ್ತವ್ ಹತ್ತಿರ ಬಂದೊಡನೆ ಗುರುತಿಸಿ ಓಹೋ ಹಾಹ್ಹಾ ಎಂದು ಉದ್ಗರಿಸಿ ಸಖೇದಾನಂದವನ್ನು ಅಭಿವ್ಯಕ್ತಿಸಿದರು. ಅವರು ಭೂತಾನ್ ರಾಷ್ಟ್ರದಲ್ಲಿನ ಪಿಲಿಪಿಲಿ ವಿಶ್ವವಿದ್ಯಾನಿಲಯದಲ್ಲಿನ ಪೈಶಾಚಿಕ ಭಾಷಾ ವಿಭಾಗದ ಮುಖ್ಯಸ್ಥರೆಂದು ಕಾರ್ಯ ನಿರ್ವಹಿಸುತ್ತಿರುವುದು ತಮ್ಮ ಆರನೆ ಇಂದ್ರಿಯಕ್ಕೆ ಹೊಳೆದ ವಿಷಯ. ಅಂಥವರು ಇಲ್ಲಿ! ತಮ್ಮ ಸಮಕ್ಷಮದಲ್ಲಿ! ಆಶ್ಚರ್ಯವಾಗದಿರುವುದೆ! ಕೇಳಿದ್ದಕ್ಕೆ ಮಹೋದಯ್!

ಶ್ರೀಮಠ ಗಾರ್ದಭಗಳಿಗೆಂದೇ ಸಾಂಸ್ಕೃತಿಕ ಸ್ಪರ್ಧೆೆ ಏರ್ಪಡಿಸಲು ಉದ್ದೇಶಿಸಿತ್ತು, ಅದೂ ಪ್ರೊ.ಅವಾಸ್ತವ್ ಮಾರ್ಗದರ್ಶನದಲ್ಲಿ. ಅದು ಸಹ ಅದೇ ದಿವಸ ಸಂಜೆ. ವಿಷಯ ತಿಳಿದೊಡನೆ ಶರ್ಮಾ ದಂಪತಿ ರೋಮಾಂಚಿತರಾದರು, ಪ್ರಾಂಜಲ ಮನಸ್ಸಿನಿಂದ ಒಪ್ಪಿದರು. ಕ್ರೀಡಾಕೂಟವೇನೊ ಸರಿ, ಆದರೆ ಗಾರ್ದಭಗಳಿಂದ ಸಾಂಸ್ಕೃತಿಕ ಪ್ರದರ್ಶನ ಸಾಧ್ಯವೆ! ಅದೇ ಶ್ರೀಮಠದ ವೈಶಿಷ್ಟ್ಯವೆಂದು ಹೇಳಿ ಶರ್ಮಾ ತಮ್ಮ ಅರ್ಧಾಂಗಿನಿಯವರ ಆತಂಕ ನಿವಾರಿಸಿದರು. ಕೆಲವು ಪಠ್ಯೇತರ ಚಟವಟಿಕೆಗಳಲ್ಲಿ ಚತುಷ್ಪಾದಿಗಳು ದ್ವಿಪಾದಿಗಳನ್ನು ಮೀರಿಸುವವು ತಾಯಿ ಎಂದು ಅವಾಸ್ತವ್ ಹೆಚ್ಚುವರಿಯಾಗಿ ಹೇಳಿದರು. ಬಳಿಕ ತುರ್ತು ಕಾರ್ಯನಿಮಿತ್ತ ವೃಶ್ಚಿಕ್ ಮಹೋದಯ್ ಅವರಿಂದ ಬೇರ್ಪಟ್ಟರು.

ಶ್ರೀಮಠದ ಮುಖ್ಯದ್ವಾರದ ಮುಂದಿನ ಅಂಗಳದಲ್ಲಿ ನೂರಕ್ಕು ಹೆಚ್ಚು ಕಾರುಗಳು ವಿಶ್ರಾಮ ಸ್ಥಿತಿಯಲ್ಲಿದ್ದವು. ಬೆಂಜು ಕ್ಯಾಡಿಲಾಕು ಕಂಟೆಸ್ಸಾ ಇವೇ ಮೊದಲಾದ ಉಚ್ಚಜಾತಿಗೆ ಸೇರಿದ್ದ ಅವು ಕಿಮ್ಮತ್ತಿನದ್ದಾಗಿದ್ದವು. ನಿಸ್ಸಂದೇಹವಾಗಿ ಒಡೆಯರು ಅವುಗಳಿಗಿಂತ ಹೆಚ್ಚು ಮಾರುಕಟ್ಟೆಯ ವೌಲ್ಯ ಉಳ್ಳವರಿದ್ದರು. ಸ್ವಾಗತಕಾರ ಅಷ್ಟಾವಕ್ರ ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ಶ್ರೀಶ್ರೀ ವ್ಯಾಕುಲಾನಂದ ಪ್ರಭುಗಳು ಚಿನ್ನದ ಆಸನದ ಮೇಲೆ ವಿರಾಜಮಾನರಾಗಿದ್ದರು. ಅವರಿಗೆ ಉಸಿರಳತೆ ದೂರದಲ್ಲಿ ಶ್ರೀಶ್ರೀ ಗಾರ್ದಭಾನಂದ ಪ್ರಭೂಜಿಯವರನ್ನು ಚಿನ್ನದ ಸರಪಳಿಯಿಂದ ಬಂಧಿಸಿರುವುದು ವಿಶೇಷವೆನ್ನಿಸಿತು. ಅವರೆದುರು ಬೆಳ್ಳಿ ಕರಂಡಕದಲ್ಲಿ ಬಾದಾಮು ಗೋಡಂಬಿ ಪಿಸ್ತಾ ಖರ್ಜೂರ ಇವೇ ಮೊದಲಾದ ಡ್ರೈಪ್ರೂಟ್ಸ್ ಗಳನ್ನು, ಇನ್ನೊಂದು ಕರಂಡಕದಲ್ಲಿ ಸೇಬು ಬಾಳೆ ಕಿತ್ತಳೆ ಸಪೋಟ ಚಕ್ಕೋತ ಇವೇ ಮೊದಲಾದ ಹಣ್ಣು ಹಂಪಲು ತುಂಬಿದ್ದರು. ಡಾ ಹಾಲಾಹಲ್ ಗಸಗಸಿ ಹಾಗೂ ಕೇಸರಿ ಮಿಶ್ರಿತ ಕೆನೆಭರಿತ ಕ್ಷೀರ ಸೇವಿಸುವಂತೆ ಪರಿಪರಿಯಿಂದ ವಿನಂತಿಸುತ್ತಿದ್ದುದು ಮನೋಜ್ಞವಾಗಿತ್ತು. ಅದರೆದುರು ಅಂಜಲೀಬದ್ಧರಾಗಿ ಉಪಸ್ಥಿತರಿದ್ದವರಲ್ಲಿ ಪ್ರಸಿದ್ಧ್ದ ರಾಜಕಾರಣಿಗಳು ಉದ್ಯಮಿಗಳು ಐಎಎಸ್-ಐಪಿಎಸ್ ಶ್ರೇಣಿ ಅಧಿಕಾರಿಗಳು ಪ್ರಮುಖರು. ಅವರೆಲ್ಲ ತಮ್ಮ ಭವಿಷ್ಯ ತಿಳಿಯುವ ನಿಮಿತ್ತ ಕಷ್ಟಕೋಟಲೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಮಿತ್ತ ಆಗಮಿಸಿದ್ದರು. ಚತುಷ್ಪಾದಾನಂದಜೀ ಕಡೆ ತದೇಕಚಿತ್ತರಾಗಿ ನೋಡುತ್ತಿದ್ದರು. ಆದರೆ ಗಾರ್ದಭಾನಂದರು ಅವರ ಕಡೆ ಕುಡಿಗಣ್ಣಿನಿಂದ ನೋಡುತ್ತಲು, ಕೆಲವೊಮ್ಮೆ ವಿಚಿತ್ರವು ಕಾರಣಿಕ ಸದೃಶವು ಆದ ಧ್ವನಿ ಹೊರಡಿಸುತ್ತಲೂ ಲೀಲಾವಿನೋದದಲ್ಲಿ ನಿಮಗ್ನರಾಗಿದ್ದ ದೃಶ್ಯ ಹಬ್ಬ ಸದೃಶವಾಗಿತ್ತು. ಪ್ರಸೂನಾಂಬೆ ವ್ಯಕ್ತಪಡಿಸುತ್ತಿದ್ದ ಸಮಸ್ಯೆ ಸಂದೇಹಗಳಿಗೆ ಶರ್ಮಾರು ವೇದ ಪ್ರಮಾಣಿತ ಸಮಾಧಾನ ಸೂಚಿಸುತ್ತಿದ್ದರು. ಅದು ದಿನವಿಡೀ ಕ್ರಿಯಾಕಲಾಪ. ಸುಮಾರು ಹೊತ್ತಿನ ನಂತರ..

ಹಿರಿಯ ಸ್ವಾಮೀಜಿಯವರ ಆರನೆ ಇಂದ್ರಿಯ ಶರ್ಮಾರ ಸಮಸ್ಯೆಯನ್ನು ವಾಕ್ಯಾರ್ಥ ಸಹಿತ ಗ್ರಹಿಸಿತು, ಆದರೆ ಅದು ವರದಿ ಮಾಡುವಷ್ಟರಲ್ಲಿ ಅದರ ಒಡೆಯ ನಿದ್ದೆ ಹೋಗಿದ್ದರು. ಆದರು ಅದು ಶರ್ಮಾ ದಂಪತಿಯನ್ನು ಅವರ ಕನಸಿನಲ್ಲಿ ಹಾಜರುಪಡಿಸಿತು. ಕೇಳಲಾಗಿ..

ಪುನಃ ಬೆಳಗ್ಗೆ ಶ್ರೀಗಳು ಹಾಗೂ ಕಿರಿಯ ಸ್ವಾಮೀಜಿ ಗಾರ್ದಭಾನಂದ ಭಗವತ್ಪಾದರು ಜೊತೆ ಜೊತೆಯಲ್ಲಿ ವಾಯುವಿಹಾರ ಹೊರಟಿದ್ದರು. ಅಂಥ ಅಪರೂಪದ ದೃಶ್ಯಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ದೇಶ-ವಿದೇಶಗಳ ಛಾಯಾಗ್ರಾಹಕರು ತೆರೆಮರೆಯಲ್ಲಿ ಅಡಗಿ ಕುಳಿತು ಸೆರೆ ಹಿಡಿಯತೊಡಗಿದ್ದರು, ಕಾರಣ ಕಿರಿಯ ಸ್ವಾಮೀಜಿ ಅಚಾನಕ್ಕಾಗಿ ಕೆರಳಿ ಕ್ಯಾಮಾರಗಳನ್ನು ಧ್ವಂಸ ಮಾಡಿದ ಟನೆಗಳಿಗೆ ಕೊರತೆ ಇರಲಿಲ್ಲ. ಇನ್ನೊಂದು ವಿಶೇಷವೆಂದರೆ ಕೆಲವು ಕವಿಗಳು ಅಲ್ಲಲ್ಲಿ ನಿಂತು ಸ್ವಾಮಿದ್ವಯರ ನಡಿಗೆಯ ಗಾಂಭೀರ್ಯ ಕುರಿತಂತೆ ಆಶುಕವಿತ್ವ ರಚಿಸುವುದರಲ್ಲಿ ತಲ್ಲೀನರಾಗಿದ್ದರು. ಇಂಥ ನಯನಮನೋಹರ ದೃಶ್ಯಗಳು ಅಡಿಗಡಿಗೆ! ಅದೇ ಸಮಯಕ್ಕೆ ಸರಿಯಾಗಿ..

ಶರ್ಮಾ ದಂಪತಿ ರಾತ್ರಿ ಇಡೀ ಗೊರಕೆ ಕನವರಿಕೆ ರಾಗ ಸಂಯೋಜಿತ ಕೀರ್ತನೆಗಳನ್ನು ಭಜನೆ ಮಾಡಿದರು, ನಿದ್ದೆ ಇಲ್ಲದೆ ಮಗ್ಗುಲು ಬದಲಾಯಿಸಿದರು, ಪರಸ್ಪರ ಮುಖದಲ್ಲಿ ಮುಖವಿರಿಸಿ ನೋಡಿದರು, ತಮ್ಮ ಕುಟುಂಬದ ಸದಸ್ಯರ ಹಕೀಕತ್ತು ಕುರಿತಂತೆ ಚರ್ಚಿಸಿದರು, ತಮ್ಮ ಸಂಸ್ಕೃತ ಗ್ರಂಥಗಳಿಂದ ಮಾಹೆಯಾನ ಮನೆ ಬಾಗಿಲಿಗೆ ಬರುತ್ತಿರುವ ಗೌರವಧನದ ಸಿಂಹಪಾಲನ್ನು ಶ್ರೀಮಠದಲ್ಲಿರುವ ಅಸಂಖ್ಯಾತ! ಹ್ಹಾಂ.. ಅಂದಹಾಗೆ ಶ್ರೀಚತುಷ್ಪಾದಾನಂದ ಪ್ರಭೂಜಿ ತಮ್ಮ ವಿಶಿಷ್ಟವು ಪರಿಣಾಮಕಾರಿಯು ಆದಂಥ ಭವಿಷ್ಯವಾಣಿ ನುಡಿಯಲಾರಂಭಿಸಿದಂದಿನಿಂದ ಶ್ರೀಕ್ಷೇತ್ರದ ಕೀರ್ತಿ ಪತಾಕೆಯು ದೇಶವಿದೇಶಗಳೆಲ್ಲೆಡೆೆ ಹಾರಾಡುತ್ತಿರುವುದು ಸರ್ವವಿಧಿತ. ಪ್ರಧಾನಿ ಮೊಗೊಂಬೊ ಸ್ವಾಮೀಜಿ ಕಾರಣಿಕ ನಿಜವೆಂದು ನಂಬಿ ವಿಸ್ಮಿತರಾಗಿ ತಮ್ಮ ದೇಶ ಕೀನ್ಯಾದಿಂದ ನೂರಕ್ಕೂ ಹೆಚ್ಚು ಗಾರ್ದಭಗಳನ್ನು ವಿಶೇಷ ವಿಮಾನದ ಮೂಲಕ ಕಳಿಸಿಕೊಟ್ಟಿದ್ದರು. ಅವು ಸ್ಥಳೀಯ ಗಾರ್ದಭಗಳಂತೆ ದೈಹಿಕವಾಗಿ ದುರ್ಬಲವಿರದೆ ಬಲಿಷ್ಠವಾಗಿದ್ದವು, ಅವುಗಳ ಅರಚುವಿಕೆ ಸಿಂಹಗರ್ಜನೆಯನ್ನು ಹೋಲುತ್ತಿತ್ತು. ಅವುಗಳಲ್ಲಿ ಕೆಲವು ಓಟದಲ್ಲಿ ಕತರ್ ದೇಶದ ಕುದುರೆಗಳನ್ನು ಸೋಲಿಸಿ ಅಬಕಾರಿ ದೊರೆ ಮತ್ತೇಶ್ವರ್ ತ್ರಿಪಾಠಿಯ ಚಿತ್ತ ಸೂರೆಗೊಂಡವು. ಆತ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಕಾಡಿಬೇಡಿ ಎರಡು ಗಾರ್ದಭಗಳನ್ನು ಐವತ್ತು ಲಕ್ಷಕ್ಕೆ ಖರೀದಿಸಿ ತನ್ನ ಸ್ಟಡ್‌ಫಾರಂ ಸೇರಿಸಿಕೊಂಡ. ಅವು ರೇಸ್ ಕೋರ್ಸಲ್ಲಿ ಆಗಸ್ಟೆ ಈಗಸ್ಟೆ ಹೆಸರಿನ ಐನಾತಿ ಅಶ್ವಗಳನ್ನು ಸೋಲಿಸಿದವು, ಅದರ ಪರಿಣಾಮ ತ್ರಿಪಾಠಿ ಹಲವು ಕೋಟಿಗಳನ್ನು ಗಳಿಸಿದ. ಇದು ವಿಶ್ವದಾದ್ಯಂತ ಸುದ್ದಿಯಾಯಿತು. ಅಂದಿನಿಂದ ಮಠದಲ್ಲಿನ ಗಾರ್ದಭಗಳು ಭಕ್ತಾದಿಗಳಿಂದ ಶ್ಲಾಘಿಸಿಕೊಳ್ಳುತ್ತಿರುವವು, ಅಲ್ಲದೆ ರಾಯಲ್ ಎನ್‌ಫೀಲ್ಡಗಿಂತ ಮಿಗಿಲೆನಿಪ ಅವುಗಳನ್ನು ಖರೀದಿಸಲು ಕೋಟ್ಯಧೀಶರು ಸಾಲಾಗಿ ನಿಂತಿರುವರು. ಈ ಕ್ಷಿಪ್ರ ಪುರೋಗತಿ ಗಮನಿಸಿದ ಏಕೈಕ ತಜ್ಞವ್ಯಕ್ತಿ ಎಂದರೆ ಡಾ ವಿಪ್ರಲಂಬ್ ಶುನಕ್. ಮುಖ್ಯವಾಗಿ ಸಾಕು ಹಾಗೂ ಅರೆ ಸಾಕು ಪ್ರಾಣಿಗಳ ಬಗ್ಗೆ ಹಲವು ಕೋನಗಳಿಂದ ಸಂಶೋಧನೆ ಮಾಡಿರುವ ಡಾ ಶುನಕ್ ಪ್ರಪಂಚದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವರು. ಅಲ್ಲದೆ ಶ್ರೀಯುತರು ಶ್ರೀಮಠದಲ್ಲಿನ ಪವಿತ್ರ ಚತುಷ್ಪಾದಿಗಳ ವೈದ್ಯಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವರು. ಅವರ ಸಲಹೆಯನ್ನು ಪುರಸ್ಕರಿಸಿ ಶ್ರೀಮಠದಲ್ಲಿ ಕೀನ್ಯಾ ಮೂಲದ ಗಾರ್ದಭಗಳ ವೀರ್ಯ ಸಂಗ್ರಹಣಾ ಕೇಂದ್ರ ಸ್ಥಾಪಿಸಲಾಗಿರುವುದು. ಇನ್ನೊಂದು ಮಹತ್ವದ ಸಂಗತಿ ಎಂದರೆ ವಿದೇಶಿ ಪುರಷಲಿಂಗೀಯ ಗಾರ್ದಭಗಳು ಸ್ವದೇಶಿ ಸ್ತ್ರೀಲಿಂಗೀಯ ಗಾರ್ದಭಗಳನ್ನು ಸಂಭೋಗಿಸುವಂತೆ ಉತ್ತೇಜಿಸಲು ಎಲ್ಲಾ ಏರ್ಪಾಡುಗಳನ್ನು ಕೈಗೊಂಡಿರುವುದು ಅಭಿಮಾನದ ಸಂಗತಿ. ಆರಂಭದಲ್ಲಿ ಗರ್ಭಧಾರಣೆಗೆ ಅವೆರಡು ಸಹಕರಿಸಲಿಲ್ಲ, ಕ್ರಮೇಣ ಲೈಂಗಿಕಾಸಕ್ತಿ ಕುದುರಿಸಿಕೊಂಡ ಬಳಿಕ ಶ್ರೀಮಠದಲ್ಲಿ ಶಿಶುರೂಪಿ ಗಾರ್ದಭಗಳ ಸಂಖ್ಯೆ ಹೆಚ್ಚಿರುವುದು. ಸಂತಾನ ವಂಚಿತ ಶ್ರೀಮಂತ ವನಿತೆಯರು ತಮ್ಮ ಮನಸ್ಸನ್ನು ಸೂರೆಗೊಂಡ ಶಿಶುಗಾರ್ದಭಗಳನ್ನು ದತ್ತು ಪಡೆದು ಅವುಗಳನ್ನು ಮುದ್ದಾಡುತ್ತಿರುವರು. ಇನ್ನೊಂದು ಗಮನಾರ್ಹ ವಿಷಯವೆಂದರೆ ಕೇಂದ್ರ ಸರಕಾರ ಶ್ರೀಮಠದಲ್ಲಿ ವಿಶ್ವ ಗಾರ್ದಭ ಸಮುದಾಯ ಕಲ್ಯಾಣ ಹಾಗೂ ಪುನರ್ವಸತಿ ಕೇಂದ್ರ ಸ್ಥಾಪಿಸಿರುವುದು. ಆದರೆ ರಾಜ್ಯ ಸರಕಾರ ಸಹ ಹಿಂದೆ ಬಿದ್ದಿಲ್ಲ. ಶ್ರೀಮಠದಲ್ಲಿ ಗಾರ್ದಭಗಳಿಗೆಂದೇ ಪ್ರತ್ಯೇಕ ಉದ್ಯಾನ ಹಾಗೂ ಗಾರ್ದಭ ತಳಿ ಸಂಶೋಧನಾಲಯ ಸ್ಥಾಪಿಸಿ ಅಭಿಮಾನ ಮೆರೆದಿರುವುದು. ಹೀಗಾಗಿ ಶ್ರೀಮಠ ಹಾಗೂ ಶಬ್ದಾರಣ್ಯ ಇವೆರಡು ಒಂದೆ ನಾಣ್ಯದ ಎರಡು ಮುಖಗಳು. ಆದ್ದರಿಂದ ಎಂಥ ಕುಂಭಕರ್ಣರು ಮಠದಲ್ಲಿ ಕಣ್ಣುತುಂಬ ನಿದ್ದೆ ಮಾಡುವುದು ಅಸಂಭವ. ಅದಕ್ಕೆ ಪೂರಕವಾಗಿ ಎಲ್ಲಿ ನೋಡಿದರು ಎಚ್ವರವೆ ಜೀವನ, ನಿದ್ದೆಯೆ ಮೃತ್ಯು ಎಂಬ ಫಲಕಗಳು ಗೋಚರಿಸುತ್ತಿರುವಮ. ಶರ್ಮಾ ದಂಪತಿಯ ನೆಮ್ಮದಿ ಎಂಬ ಮಾನಸ ಸರೋವರವನ್ನು ವೈಶಂಪಾಯನ ಸರೋವರವನ್ನಾಗಿ ಪರಿವರ್ತಿಸಿದ ಮಹತ್ವದ ಸಂಗತಿ ಎಂದರೆ.. ಸ್ವದೇಶಿ ಗಾರ್ದಭಗಳ ವಿದೇಶಿ ಗಾರ್ದಭಗಳ ನಡುವೆ ವಾಗ್‌ಯುದ್ಧ ನಡೆಯಿತು, ಅದು ಯಾವುದೇ ಅಣ್ವಸ್ತ್ರಗಳ ಮಾರಾಮಾರಿಗಿಂತ ಕಡಿಮೆ ಇರಲಿಲ್ಲ. ಇವೆಲ್ಲವನ್ನು ಅನ್ಯಥಾ ಭಾವಿಸುವಂತಿರಲಿಲ್ಲ, ಮಹಾಪ್ರಸಾದವೆಂದು ಭಾವಿಸುವುದು ಶ್ರೀಕ್ಷೇತ್ರಕ್ಕೆ ಸಲ್ಲಿಸುವ ಗೌರವವಾಗಿತ್ತು. ಸಾಧಕ ಬಾಧಕ ಯೋಚಿಸಿ ಶರ್ಮಾ ದಂಪತಿ ಧೃತಿಗೆಡಲಿಲ್ಲ.

ಮಾನಸಿಕವಾಗಿ ದೈಹಿಕವಾಗಿ ಪುನಃಶ್ಚೇತನಗೊಳ್ಳಲೆಂದು ಶರ್ಮಾ ದಂಪತಿ ಬ್ರಾಹ್ಮಿಮುಹೂರ್ತದಲ್ಲಿ ವಾಯುವಿಹಾರಕ್ಕೆಂದು ಹೊರಟರು. ಮಠದ ವಾತಾವರಣ ಎಂದಿಗಿಂತ ಹೆಚ್ಚು ಆಹ್ಲಾದಕರವಾಗಿತ್ತು. ದಕ್ಷಿಣಾಭಿಮುಖವಾಗಿ ಹೊರಟಿದ್ದ ಶರ್ಮಾ ದಂಪತಿಯನ್ನು ಉತ್ತರಾಭಿಮುಖವಾಗಿ ಹೊರಟಿದ್ದ ಸ್ವಾಮಿದ್ವಯರು ದೂರದಿಂದ ಗುರುತಿಸಿದರು, ಅವರಲ್ಲಿ ಮುಖ್ಯವಾಗಿ ಶ್ರೀಗಾರ್ದಭಾನಂದ ಪ್ರಭೂಜಿ ನಿಖರವಾಗಿ ಗುರುತಿಸಿ ಹೇಷಾರವ ಮಾಡಿದರು. ಹಿರಿಯ ಸ್ವಾಮೀಜಿ ಸಹ ಗುರುತಿಸಿ ಹತ್ತಿರ ಬರುವಂತೆ ಕೈಸನ್ನೆ ಮಾಡಿದರು.

ಸಾಸ್ಟಾಂಗ ಪ್ರಣಾಮ ಸಲ್ಲಿಸಿದ ದಂಪತಿಯನ್ನು ಶ್ರೀಗಳೀರ್ವರು ಕಣ್ತುಂಬ ಆಸ್ವಾದಿಸಿದರು. ಇಂಥ ಸಮಯಕ್ಕೆ ಇಂಥ ಸ್ಥಳಕ್ಕೆ ಬನ್ನಿರೆಂದು ಹೇಳುವುದನ್ನು ಮರೆಯಲಿಲ್ಲ.

***

ವೈತರಣಿ ಹೆಸರಿನ ಭವನ ನಿಬಿಡ ಕಾಡಿನ ನಡುವೆ ಇತ್ತು. ಸೈನಿಕ ಸಮವಸ್ತ್ರ ಧರಿಸಿದ್ದ ಕೆಲವರು ಅಲ್ಲಲ್ಲಿ ಕವಾಯತು ಮಾಡುತ್ತಿದ್ದರು. ಇವರನ್ನು ನೋಡಿದೊಡನೆ ಅವರು ಒಳಗೆ ಕರೆದೊಯ್ದರು. ತ್ಯಾಜ್ಯ ಹೆಸರಿನ ಹಜಾರಕ್ಕೆ ಕರೆದೊಯ್ದರು. ಅಲ್ಲಿ ಚರಂಡಿ ಹೆಸರಿನ ಉಪಾಹಾರ ಕೊಡಿಸಿದರು. ತ್ಯಾಜ್ಯ ಕಸ ಚರಂಡಿ! ಈ ಸರ್ವನಾಮಗಳನ್ನು ಅಸಹ್ಯ ಪದಗಳ ಗುಂಪಿಗೆ ಸೇರಿಸಿರುವುದು ಆಧುನಿಕ ಮನುಷ್ಯ, ಅಸಹ್ಯವನ್ನು ಸಹ್ಯವಾಗಿಸಿಕೊಳ್ಳುವುದೇ ಯೋಗಿಯ ಲಕ್ಷಣವೆಂದು ಶ್ರೀಗಳ ಉವಾಚ. ರಾಷ್ಟ್ರಪತಿಗಳು ಪ್ರಧಾನಿಗಳು ದೇಶದ ಅತ್ಯುನ್ನತ ಅಧಿಕಾರಿಗಳು ಕೋಟ್ಯಧೀಶರೇ ಇವಕ್ಕೆಲ್ಲ ಅಸಹ್ಯಪಟ್ಟುಕೊಂಡಿಲ್ಲವೆಂದ ಬಳಿಕ ಜುಜುಬಿ ಶರ್ಮಾ ದಂಪತಿ ಅಸಹ್ಯಪಟ್ಟುಕೊಳ್ಳುವುದುಂಟೆ! ಹಸನ್ಮುಖತೆ ಮಾಸದಂತೆ ಎಚ್ಚರವಹಿಸಿದರು. ತಮ್ಮ ನಿರೀಕ್ಷೆಯಲ್ಲಿದ್ದ ಶ್ರೀಗಳನ್ನು ಪ್ರಸನ್ನವದನರನ್ನಾಗಿಸಿದರು. ಅಮೋಘ ಧನ್ಯ ಇತ್ಯಾದಿ ಅಲೌಕಿಕ ವಿಶೇಷಣಗಳನ್ನು ಯಥೇಚ್ಛ ಬಳಸಿದರು, ವಿಲೋಮಶರ್ಮಾರು ತಮ್ಮ ಮನಸ್ಸಿನ ತಳಮಳ ಅಶಾಂತಿ ಸಾಮಾಜಿಕವಾಗಿ ತಾವು ನಿರ್ಲಕ್ಷೆಗೆ ತುತ್ತಾಗುತ್ತಿರುವುದು! ಇವೆಲ್ಲ ಸಂಕಟಗಳನ್ನು ಸಂಸ್ಕೃತ ಹಾಗೂ ಒತ್ತಕ್ಷರಗಳ ಸಹಿತ ವಿವರಿಸಿದರು. ಕೆಲವು ಕಡೆ ಅನುಷ್ಟುಪ್ ಛಂದಸ್ಸು ಬಳಸುವುದನ್ನು ಪ್ರಕಾಂಡ ಪಂಡಿತರು ಮರೆಯಲಿಲ್ಲ. ಅವರು ಹೇಳಿದ್ದು ದ್ವಿಪಾದಾನಂದ ಭಗವತ್ಪಾದರಿಗೆ ತಿಲಗಾತ್ರ ಅರ್ಥವಾಗಲಿಲ್ಲ, ಆದರೆ ಅರ್ಥವಾದ ಕಾರಣಕ್ಕೆ ಗಾರ್ದಭಾನಂದ ಭಗವತ್ಪಾದರು ತಲೆ ಅಲ್ಲಾಡಿಸಿದರು, ತಮ್ಮ ಅಮೂಲ್ಯ ಅಭಿಪ್ರಾಯವನ್ನು ತಮ್ಮ ಭಾಷೆಯಲ್ಲಿ ಆಭಿವ್ಯಕ್ತಿಸಿದರು. ಅಲ್ಲದೆ ಮುಂದೆ ತಮ್ಮ ಶ್ಯಾಮಲವರ್ಣದ ನೀಳ ನಾಲಗೆಯಿಂದ ಶ್ರೀಯುತರ ಮುಖದ ಎಡಪಾರ್ಶ್ವವನ್ನು ನೆಕ್ಕಿದರು. ಅದರಿಂದ ಶರ್ಮಾ ದಂಪತಿ ಭಾವಪರವಶರಾದರು, ಹಿರಿಯ ಸ್ವಾಮೀಜಿ ಸಹ ನಿಮ್ಮ ಸಂಕಟಗಳು ಪರಿಹಾರವಾಗುವವು, ಅಲ್ಲದೆ ಅವರ ಮನದಿಂಗಿತ ಪೂರೈಸಿದರೆ ಮಾತ್ರ ನಿಮಗೆ ಉತ್ತರೋತ್ತರ ಅಪಾರ ಕೀರ್ತಿ ಪ್ರಾಪ್ತವಾಗುವುದು ಎಂದು ಹೇಳಿದರು. ಅವರ ಮಾತುಗಳಿಂದ ಮೂಕವಿಸ್ಮಿತರಾದರು ಶರ್ಮಾ!

ಚತುಷ್ಪಾದಾನಂದರು ಇಂಥ ವ್ಯಕ್ತಿಯ ಮುಖವನ್ನು ನೇವರಿಸಿದರೆಂಬ ಸುದ್ದಿಯನ್ನು ಭಕ್ತಾದಿಗಳ ಕರ್ಣೇಂದ್ರಿಯಗಳು ಏಕಕಾಲಕ್ಕೆ ಗ್ರಹಿಸಿದವು, ಅ ಅತ್ಯಮೂಲ್ಯ ಪ್ರಸಾದಕ್ಕಾಗಿ ಚಾತಕ ಪಕ್ಷಿಗಳಂತೆ ನಿರೀಕ್ಷೆಯಲ್ಲಿದ್ದ ಗಣ್ಯಾತಿಗಣ್ಯ ಅತಿಥಿಗಳು ಪುಳಕಗೊಂಡರು, ತಮಗೆ ಆ ಭಾಗ್ಯವಿಲ್ಲವಲ್ಲ ಎಂದು ಮರುಗಿದರು. ಆದರೆ ತ್ರಿಕಾಲಜ್ಞಾನಿಗಳ ಜಿಹ್ವಾಕೃಪಾಕಟಾಕ್ಷಕ್ಕೆ ಭಾಜನರಾದ ಭಾಗ್ಯಶಾಲಿಯ ದರ್ಶನ ಪಡೆಯಬೇಕು, ಸಾಧ್ಯವಾದರೆ ಆ ಪುಣ್ಯವಂತರ ಗಲ್ಲವನ್ನು ತಾವು ಸ್ಪರ್ಶಿಸಿ ಪುನೀತರಾಗಬೇಕೆಂದು ನಿಶ್ಚಯಿಸಿದರೆಂದ ಬಳಿಕ ಕೇಳುವುದೇನಿದೆ!

ಮುಟ್ಟಿಸಿಕೊಳ್ಳಲು ನೋಡಿಸಿಕೊಳ್ಳಲು ನಿಮ್ಮ ಗಂಟೇನು ಹೋಗುವುದು ಎಂದು ಪ್ರಸೂನಾಂಭ ನುಡಿದಷ್ಟು ಸುಲಭವಿರಲಿಲ್ಲ ಅದರ ಅನುಭವ. ಒಂದರಿಂದ ಹತ್ತರ ಸಂಖ್ಯೆ ಭಕ್ತರಿಂದ ಮುಟ್ಟಿಸಿಕೊಳ್ಳಬಹುದು, ಆದರೆ ಅದರ ಸಂಖ್ಯೆ ಸಾವಿರಕ್ಕು ಮಿಕ್ಕು ಇಹುದಲ್ಲವೆ! ಹೌದು ಅವರು ಅಸಂಖ್ಯಾತರಿದ್ದರು. ಉತ್ಸವಕ್ಕೆ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಅವರು ಚತುಷ್ಪಾದರೆದುರು ಪದ್ಮಾಸನ ಹಾಕಿಯೊ, ನಾಮಸ್ಮರಣೆ ಮಾಡುತ್ತಲೋ, ಕೃಪೆ ತೋೀರು ತಂದೆ ಎಂದು ಗಟ್ಟಿಯಾಗಿ ಪ್ರಾರ್ಥಿಸುತ್ತಲೋ! ಆದರೆ ಸ್ವಾಮಿ ಕಣ್ಣು ತೆರೆದಿರಲಿಲ್ಲ. ಆದರೆ ಅದು ಒಲಿದಿರುವುದು ಶರ್ಮಾ ಹೆಸರಿನ ಪಂಡಿತೋತ್ತಮರಿಗೆ!

ಇದರಿಂದ ಬಿಡುಗಡೆಯಾಗುವಷ್ಟರಲ್ಲಿ ಸಂಜೆ ಸಮೀಪಿಸಿತು. ಬಳಿಕ ಹಿರಿಯ ಸ್ವಾಮೀಜಿ ಅವರಿಂದ ಕರೆ ಬಂದಿತು. ದಂಪತಿ ಹೋದರು, ಅದರೆ ಪ್ರಸೂನಾಂಬೆಯ ದುರದೃಷ್ಟಕ್ಕೆ ಚತುಷ್ಪಾದಾನಂದರು ಅಲ್ಲಿರದೆ ಧ್ಯಾನಮಂದಿರದಲ್ಲಿ ವಿಪದ್ಮಾಸನಯುಕ್ತರಾಗಿದ್ದರು. ಲಘು ಪ್ರಸಾದ ವಿತರಣೆ ಬಳಿಕ ಶ್ರೀಗಳು ಒಮ್ಮೆಗೆ ಗದ್ಗದಿತರಾದರು, ಅವರ ಬಿಕ್ಕಳಿಕೆ ಅರ್ಥ ಮಾಡಿಕೊಂಡ ವಟು ರೇಶ್ಮೆ ಕರವಸ್ತ್ರ ತಂದು ಅವರ ಪಕ್ಕದಲ್ಲಿರಿಸಿದನು, ತಾವು ಬಟವಾಡೆ ಮಾಡಲಿರುವ ಅಣಿಮುತ್ತುಗಳು ಗೋಪ್ಯವಾದ್ದರಿಂದ! ಅದನ್ನು ಅರ್ಥ ಮಾಡಿಕೊಂಡ ಆ ಸೂಕ್ಷ್ಮಗ್ರಾಹಿ ತರುಣನು ಹೊರಗೆ ಹೋಗಿ ಕೋಣೆಯ ಕಿಟಿಕಿ ಬಾಗಿಲುಗಳನ್ನು ಭದ್ರಪಡಿಸಿದನು. ಬಲವಂತಕ್ಕೆ ಮಣಿದು ಶರ್ಮಾ ಶ್ರೀವ್ಯಾಕುಲಾನಂದರ ಸನಿಹದಲ್ಲಿ ಆಸೀನರಾದರು. ಎಂದಿನಂತೆ ಗುರುಗಳು ಮಗು ಎಂಬ ಸಂಬಂಧವಾಚಕದೊಡನೆ ಮಾತು ಆರಂಭಿಸಿದರು.

‘‘ಮಗು ನಿಮ್ಮಂಥ ನಿಷ್ಠಾವಂತ ಭಕ್ತರಿಗೆ ತಿಳಿಯದಿರುವುದು ಏನುಂಟು! ವರ್ಷದ ಹಿಂದೆ ನಮ್ಮ ಶ್ರೀಮಠ ತಕ್ಕಮಟ್ಟಿಗೆ ಶ್ರೀಮಂತವಾಗಿತ್ತು, ಹಲವು ಶತಮಾನಗಳ ಹಿಂದೆ ಎಷ್ಟಿತ್ತೋ ಆಗಲೂ ಅಷ್ಟೇ ಇತ್ತು. ಆದರೆ ಕೈವಲ್ಯಾಪುರ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈ ಮಠದಲ್ಲಿ ಇಂದಿನಂತೆ ಚಿನ್ನದ ಹೊಗೆಯಾಡುತ್ತಿರಲಿಲ್ಲ, ಹಿಂದೆ ಮಠದ ಕೀರ್ತಿ ರಾಜ್ಯದ ಮೇರೆ ದಾಟಿತ್ತು, ಆದರೆ ಇಂದಿನಂತೆ ದೇಶ ವಿದೇಶಗಳಲ್ಲಿ ಸುವಿಖ್ಯಾತವಾಗಿರಲಿಲ್ಲ. ಅದಕ್ಕೆ ಕಾರಣ ಶ್ರೀಗಾರ್ದಭಾನಂದ ಭಗವತ್ಪಾದರು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಕೈವಲ್ಯಾಪುರ ಎಂದಿದ್ದುದನ್ನು ಶ್ರೀಗಾರ್ದಭಪುರಿ ಎಂದು ಬದಲಾಯಿಸಲು ಆ ಮಹಿಮಾನ್ವಿತರೇ ಕಾರಣ. ಆ ಪವಾಡ ಪುರುಷರಿಂದ ಈ ಶ್ರೀಗಾರ್ದಭಪುರಿ ಸರಕಾರದಿಂದ ಶ್ರೀಕ್ಷೇತ್ರದ ಸ್ಥಾನಮಾನ ಪಡೆದಿರುವುದು, ಗಣ್ಯಾತಿಗಣ್ಯರು ಶ್ರೀಕ್ಷೇತ್ರವನ್ನು ಸಂಪದ್ಭರಿತವಾಗಿಸುತ್ತಿರುವರು, ಶ್ರೀಮಠದ ಆಶ್ರಯದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಆರಂಭಗೊಂಡಿರುವವು, ಶ್ರೀಶ್ರೀ ಚತುಷ್ಪಾದಾನಂದ ಸ್ವಾಮೀಜಿ ಅವರ ಕೀರ್ತಿಯಿಂದ ಸ್ವದೇಶಿ ಹಾಗೂ ವಿದೇಶಿಯ ಸಹಸ್ರಾರು ಗಾರ್ದಭಗಳು ಶ್ರೀಮಠದಲ್ಲಿ ಆಶ್ರಯ ಪಡೆದಿವೆ, ಅಲ್ಲದೆ ಅವುಗಳ ನಡುವೆ ಸಾಮರಸ್ಯ ಏರ್ಪಡಿಸಿರುವುದು ಶ್ರೀಮಠದ ಹೆಗ್ಗಳಿಕೆ, ಅವುಗಳ ಲೈಂಗಿಕ ಅನ್ಯೋನ್ಯತೆಯಿಂದ ಜನಿಸುತ್ತಿರುವ ಶಿಶುಪ್ರಾಯದ ಗಾರ್ದಭಗಳು ಕೆಲವೆ ತಿಂಗಳುಗಳಲ್ಲಿ ಜಾತ್ಯಾಶ್ವಗಳನ್ನು ಓಟಗಳಲ್ಲಿ ಸೋಲಿಸುವುದು ಮಾತ್ರವಲ್ಲದೆ ದೇಶದ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯವಾಗಿ ಎತ್ತಿ ಹಿಡಿದಿರುವವು, ಅಲ್ಲದೆ ವಿದೇಶಿ ವಿನಿಮಯ ಹೆಚ್ಚಿಸಿ ಸರಕಾರದ ಖಜಾನೆಯನ್ನು ತುಂಬಿಸುತ್ತಿರುವವು, ಆದರೆ ಇದೆಲ್ಲ ಶಾಖಾ ಮಠಗಳ ಸ್ವಾಮಿಗಳು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ! ಅದರಲ್ಲೂ..

ಮಾರ್ಜಾಲ ಮಠದ ಸ್ವಾಮಿ ಕರ್ಕಶಾನಂದರು ಕಾಮ್ರೇಡ್ ಕಿರುಕುಳ್ ಸಂಗಡ ಸೇರಿಕೊಂಡು ಅಪಪ್ರಚಾರ ಮಾಡುತ್ತಿರುವುದು ತಲೆನೋವಿನ ಸಂಗತಿಯಾಗಿರುವುದು. ಅಂಥವರ ಮಸಲತ್ತು ಮಾಧ್ಯಮದವರನ್ನು ಕೆರಳಿಸದೆ ಇದ್ದೀತೆ! ಏನ್ ಸ್ವಾಮೀಜಿ ಒಂದು ಯಕಃಶ್ವಿತ್ ಕತ್ತೆಗೆ ಮಠದ ಪಾರುಪತ್ಯೆ ವಹಿಸಿದ್ದು ನ್ಯಾಯವೇ ಎಂದು ಕೇಳಿದರು. ನಿಜ ಸಂಗತಿ ಗೊತ್ತಿದ್ದು ಹಾಗೆ ಕೇಳಿದರೆ ಏನೆಂದು ಹೇಳುವುದು! ಎಲ್ಲಾ ಪ್ರಶ್ನೆಗಳಿಗೆ ವೌನವಹಿಸಿದೆವು. ನಮ್ಮಂಥ ಸನಾತನಿಗಳಿಗಿಂತ ನಿಮ್ಮಂಥ ಪಂಡಿತಶ್ರೇಷ್ಠರು ಉತ್ತರ ನೀಡಿ ಅಂಥ ಪ್ರಶ್ನೆಗಳನ್ನು ಹಾಕುತ್ತಿರುವವರ ಬಾಯಿಗಳನ್ನು ಮುಚ್ಚಿಸಬೇಕಿದೆ, ಅದಕ್ಕೆ ನೀವು ಏನು ಮಾಡಬೇಕಿರುವುದೆಂದರೆ’’! ಎಂದು ಸ್ವಾಮೀಜಿಗಳು ಹೇಳುವುದಕ್ಕ್ಕೂ ಶ್ರೀಗಾರ್ದಭಾನಂದ ಪ್ರಭೂಜಿ ಆಗಮಿಸುವುದಕ್ಕೂ ಸರಿ ಹೋಯಿತು. ದುಃಖ ಚತುಷ್ಪಾದಿಗಳ ಕಣ್ಣಲ್ಲಿ ಹೆಪ್ಪುಗಟ್ಟಿತ್ತು. ಎರಡು ಕ್ಷಣಗಳ ಬಳಿಕ ಅದು ದುಮ್ಮಿಕ್ಕಿತು. ಪಂಡಿತ ವಿಲೋಮಶರ್ಮಾರಿಗೆ ಶ್ರೀಮಠದ ಹಾಗೂ ಉಭಯ ಶ್ರೀಗಳ ಮನದಿಂಗಿತ ಅರ್ಥವಾಯಿತು. ಆದಿವಿಷ್ಣುವಿನ ಮೇಲಿನ ಅಪವಾದ ಹೋಗಲಾಡಿಸಲು ವಿಜಯನಗರದರಸು ಶ್ರೀಕೃಷ್ಣದೇವರಾಯ ಆಮುಕ್ತಮಾಲ್ಯದ ಹೆಸರಿನ ಮಹಾಕಾವ್ಯ ರಚಿಸಿ ಭಗವಂತನ ಕೃಪೆಗೆ ಪಾತ್ರನಾದನೋ ಹಾಗೆ ತಾವು ಸಹ ಶ್ರೀಶ್ರೀ ಗಾರ್ದಭಾನಂದ ಭಗವತ್ಪಾದರ ಜೀವನವನ್ನಾಧರಿಸಿ ಮಹಾಕಾವ್ಯ ರಚಿಸಿ ಶ್ರೀವನ್ ಮಠದ ಕಿರ್ತಿಗೆ ಭಾಜನರಾಗ ಬೇಕೆಂದು ನಿರ್ಧರಿಸಿದರು. ಅಲ್ಲದೆ ಆ ಮಹಾಕಾವ್ಯದ ಪ್ರಾರ್ಥನಾ ಪದ್ಯವನ್ನು ಇಂದು ಮಧ್ಯರಾತ್ರಿ ರಚಿಸುವುದಾಗಿ ವಾಗ್ದಾನ ಮಾಡುತ್ತ ಶರ್ಮಾರು ಉಭಯ ಶ್ರೀಗಳ ಪಾದಗಳಿಗೆರಗಿದರು.

(ನನ್ನ ಅಪ್ರಕಟಿತ ಹೊಸ ಕಾದಂಬರಿಯ ಆರಂಭದ ಭಾಗ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)