ದಾವಣಗೆರೆ: ಎಇಇ ಅಧಿಕಾರಿ ನಿವಾಸದ ಮೇಲೆ ಎಸಿಬಿ ದಾಳಿ
ದಾವಣಗೆರೆ,ಜ.4 : ನಗರದ ಬೆಸ್ಕಾಂನ (ಎಇಇ) ಅಧಿಕಾರಿ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧೆಡೆ ಹೊಲ, ನಿವೇಶನ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.
ಬೆಸ್ಕಾಂ ಎಇಇ ಜಿ.ಸಿ.ಜಗದೀಶಪ್ಪ ಮನೆಯ ಮೇಲೆ ಬುಧವಾರ ಬೆಳಿಗ್ಗೆಯೇ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡವು ಕೋಟ್ಯಾಂತರ ರು. ಮೌಲ್ಯದ ಆಸ್ತಿ, ದಾಖಲೆ, ಒಡವೆ, ನಗದನ್ನು ಪತ್ತೆ ಹಚ್ಚಿದ್ದಾರೆ.
ಇಲ್ಲಿನ ಶಿವಕುಮಾರ ಸ್ವಾಮಿ ಬಡಾವಣೆ ಮನೆಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾವಣಗೆರೆಯಲ್ಲಿ ಒಟ್ಟು 3 ಮನೆಗಳು, ಧಾರವಾಡದಲ್ಲಿ 2 ನಿವೇಶನ, ತುಮಕೂರು, ಬೆಂಗಳೂರಿನಲ್ಲಿ ತಲಾ ಒಂದೊಂದು ನಿವೇಶನ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನಲ್ಲಿ 20 ಎಕರೆ ಜಮೀನು, ಹೊಸದುರ್ಗ ಚಿಕ್ಕಮ್ಮನಹಳ್ಳಿಯಲ್ಲಿ 5 ಎಕರೆ ಜಮೀನನ್ನು ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ.
ಎಇಇ ಜಗದೀಶಪ್ಪ ಆದಾಯಕ್ಕಿಂತಲೂ ಹೆಚ್ಚು ಅಧಿಕ ಆಸ್ತಿ ಹೊಂದಿರುವುದು, ಇದೆಲ್ಲದರ ಬೆಲೆ ಕೋಟಿ ರೂ. ಗಳನ್ನು ದಾಟುತ್ತಿರುವುದು ಎಸಿಬಿ ದಾಳಿ ವೇಳೆ ಸ್ಪಷ್ಟವಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ವಂಶಿಕೃಷ್ಣ, ಪೋಲೀಸ್ ಉಪಾಧೀಕ್ಷಕ ವಾಸುದೇವ ರಾವ್ ನೇತೃತ್ವದ ತಂಡವು ದಾಳಿ ನಡೆಸಿದೆ.