ಹೊನ್ನಾಳಿ: ಶ್ರೀ ಗುರು ಸಿದ್ದರಾಮೇಶ್ವರರ 845ನೇ ಜಯಂತಿ
ಹೊನ್ನಾಳಿ,ಜ.15: ಶಾಂತಿ, ಸಮನ್ವಯತೆ ಕುರಿತು ಪಾಠ ಮಾಡುವ ಬುದ್ದಿಜೀವಿಗಳು ಮೊದಲು ನಮ್ಮ ಇತಿಹಾಸದ ಬಗ್ಗೆ ತಿಳಿದಿರಬೇಕು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತ್ ಕುಮಾರ ಹೆಗಡೆ ಹೇಳಿದರು.
ಇಲ್ಲಿನ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀಗುರುಸಿದ್ದರಾಮೇಶ್ವರರ 845ನೇ ಜಯಂತಿ ಕಾರ್ಯಕ್ರಮದಲ್ಲಿ ಮಹಿಳಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ನಮ್ಮ ಧರ್ಮ ಧ್ವಜ ಹಾರಾಡುತ್ತಿದೆ. ಆದರೆ, ಅದಕ್ಕಾಗಿ ಒಂದೇ ಒಂದು ಹನಿ ರಕ್ತ ನಾವು ನೆಲಕ್ಕೆ ಚೆಲ್ಲಿರಲಿಲ್ಲ. ನಮ್ಮ ಸಂಸ್ಕೃತಿ, ನಡವಳಿಕೆ, ಆಚಾರ, ವಿಚಾರದ ಆಧಾರದ ಮೇಲೆ ಜಗತ್ತೆ ನಮ್ಮತ್ತ ಆಕರ್ಷಿತವಾಗಿದೆ. ಆದರೆ, ಇಂದಿನ ಸಮಾಜದಲ್ಲಿ ಜಾತಿಯತೆ ಹೆಚ್ಚಾಗುತ್ತಿದೆ. ನೋಡುವ ದೃಷ್ಟಿಯೂ ಬದಲಾಗುತ್ತಿದೆ. ವಿಕೃತ ಮನಸ್ಸುಗಳನ್ನು ಹೆಚ್ಚು ನಂಬುವಂತ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಮೊದಲು ಸಮಸಮಾಜವಿತ್ತು. ಹಿಂದೆ ಬಸವಣ್ಣನವರು ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಆದರೆ, ವಿಪರ್ಯಾಸವೆಂದರೆ ಇಂದು ಅವರನ್ನೇ ಜಾತಿಗೆ ಸೀಮಿತಗೊಳಿಸಲಾಗಿದೆ. ಬುದ್ದಿಜೀವಿಗಳು ಎನ್ನಿಸಿಕೊಳ್ಳುವ ಕೆಲವರ ತಲೆಯಲ್ಲಿ ಏನು ಇರುವುದಿಲ್ಲ. ಆದರೆ, ಅವರು ಬುದ್ದಿವಂತರೆನಿಸಿಕೊಂಡಿದ್ದಾರೆ. ಅವರಿಗೆ ಈ ಮಣ್ಣಿನ ಅರಿವು ಇಲ್ಲದಿರುವುದರಿಂದ ಈ ರೀತಿ ಮಾತನಾಡುತ್ತಾರೆ ಎಂದರು.
1905 ರಲ್ಲಿ ರೈಟ್ಸ್ ಸಹೋದರರು ವಿಮಾನ ಕಂಡು ಹಿಡಿದರು ಎಂದು ಹೇಳುತ್ತಾರೆ. ಆದರೆ, ವಿಮಾನವನ್ನು 1895ರಲ್ಲಿ ಮುಂಬಯಿಯ ಭಾರತೀಯರೊಬ್ಬರು ಕಂಡು ಹಿಡಿದಿದ್ದು. ಇದನ್ನು ಯಾವ ಇತಿಹಾಸದಲ್ಲಿ ಹೇಳಿಲ್ಲ. ಯೋಚನೆ ಮಾಡದೆ ಒಪ್ಪಿಕೊಳ್ಳುತ್ತಿದ್ದೇವೆ. ಆದರೆ, ಸತ್ಯ ಹೇಳುವ ಇತಿಹಾಸ ನಮಗೆ ಬೇಕಿದೆ. ಅವರವರ ಮೂಗಿನ ನೇರಕ್ಕೆ ಬರೆದಿರುವ ಇತಿಹಾಸ ನಮಗೆ ಬೇಡ ಎಂದರು.
ನೊಳಂಬ ವೀರಶೈವ ಸಮಾಜದ ರಾಜ್ಯಾಧ್ಯಕ್ಷ ನಾಗರಾಜ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸ್ವಾಗತ ಸಮಿತಿ ಅಧ್ಯಕ್ಷ ರುದ್ರೆಗೌಡ, ಮೋಹನ್ಕುಮಾರ್, ರಾಮಲಿಂಗಪ್ಪ, ಎಸ್.ಆರ್. ಪಾಟೀಲ್, ಮಾದೇನಹಳ್ಳಿ ನಾಗರಾಜ್, ಎಸ್.ಎ. ಹುಡೇದ್, ಶಾಂತರಾಜ್ಪಾಟೀಲ್ ಹಾಜರಿದ್ದರು.