ರೈತ ಪರ ಸರಕಾರ ಸ್ಥಾಪನೆಗೆ ಮುಂದಾಗಲು ಕರೆ
ಹುಳಿಯಾರು,ಜ.15: ರೈತರ ಏಳಿಗೆಯಿಂದ ಮಾತ್ರ ದೇಶದ ಏಳಿಗೆ ಸಾಧ್ಯವಾಗುವುದಿದ್ದು, ರೈತ ಸಮುದಾಯವನ್ನು ವಂಚಿಸುವ ರಾಜಕಾರಣಿಗಳನ್ನು ದೂರವಿಟ್ಟು ರೈತ ಪರ ಸರಕಾರ ಸ್ಥಾಪಿಸಲು ಜನತೆ ಮುಂದಾಗಬೇಕಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕರೆ ನೀಡಿದ್ದಾರೆ.
ಹುಳಿಯಾರು ಸಮೀಪದ ವಳಗೆರೆಹಳ್ಳಿಯಲ್ಲಿ ಸೋಮವಾರ ನಡೆದ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಮೋದಿ ಪ್ರಧಾನಿ ಆಗುವ ಮುಂಚೆ ವಿದೇಶದಲ್ಲಿರುವ ದೇಶದ ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದು, ಇದುವರೆಗೂ ನಯಾಪೈಸೆ ಹಾಕುವುದಿರಲಿ ಸಾಸಿವೆ ಡಬ್ಬಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನೂ ಕಿತ್ತುಕೊಂಡರು. ಸಿದ್ಧರಾಮಯ್ಯ ಅವರು ಪ್ರತಿ ವರ್ಷ 1 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರಾದರೂ ಹೊಸ ಉದ್ಯೋಗ ಸೃಷ್ಟಿಸುವುದಿರಲಿ ಖಾಲಿ ಇರುವ ಸರಕಾರಿ ಹುದ್ದೆಗಳನ್ನೇ ಭರ್ತಿ ಮಾಡಿಲ್ಲ. ಹಾಗಾಗಿ ಜನರನ್ನು ವಂಚಿಸಿ ಅಧಿಕಾರ ಹಿಡಿಯುವುದರಲ್ಲಿ ರಾಜಕೀಯ ಪಕ್ಷಗಳು ಒಂದೇ ನಾಣ್ಯದ ಮುಖಗಳಿದ್ದಂತೆ ಎಂದರು.
ರೈತರು ಮತ್ತು ಕಾರ್ಮಿಕರು ಒಂದಾದರೆ ದೇಶದ ರಾಜಕೀಯ ವ್ಯವಸ್ಥೆಯನ್ನೇ ಬದಲಾಯಿಸಬಹುದಾಗಿದೆ.ದೇಶದ ದುರಂತ ಎನ್ನುವಂತೆ ಇದುವರೆಗೂ ಈ ದುಡಿಯುವ ವರ್ಗಗಳು ಒಂದಾಗುತ್ತಿಲ್ಲ. ಇನ್ನು ಮಹಿಳೆಯರು ಮನಸ್ಸು ಮಾಡಿದರೂ ರಾಜಕೀಯ ಬದಲಾವಣೆ ಮಾಡಬಹುದಾದರೂ ಹಣ, ಸೀರೆಗಳ ಆಸೆಗೆ ರಾಜಕೀಯ ಪಕ್ಷಗಳ ಸಮಾವೇಶಕ್ಕೆ ಸಹಸ್ರ ಸಂಖ್ಯೆಯಲ್ಲಿ ಹೋಗುತ್ತಾರೆ. ನೀರು, ಭೂಮಿ, ವಿದ್ಯುತ್ ಸಂಬಂಧ ರೈತರ ಹೋರಾಟಗಳಿಗೆ ಬೆರಳೆಣಿಕೆಯಷ್ಟು ಮಂದಿಯೂ ಬರುವುದಿಲ್ಲ. ಹಾಗಾಗಿಯೇ ದೇಶದಲ್ಲಿ ಇನ್ನೂ ಆರ್ಥಿಕ, ಸಾಮಾಜಿಕ, ರಾಜಕೀಯ ಅಸಮಾನತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕು ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ,ಪ್ರಧಾನ ಕಾರ್ಯದರ್ಶಿ ಚಿಕ್ಕಸಿದ್ಧರಾಮಯ್ಯ, ತಾಲೂಕು ರೈತ ಸಂಘದ ಉಪಾಧ್ಯಕ್ಷ ಕರಿಯಪ್ಪ, ಸೋಮಜ್ಜನಪಾಳ್ಯ ಬೀರಲಿಂಗಯ್ಯ, ಕೆಂಕೆರೆ ಭೀಮಣ್ಣ, ಹುಳಿಯಾರಪ್ಪ, ನಂದಿಹಳ್ಳಿ ಬಸಪ್ಪ, ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.