ವೇಶ್ಯಾವಾಟಿಕೆಗೆ ಮಹಿಳೆಯರ ಸಾಗಾಣಿಕೆ ಆರೋಪ: ಇಬ್ಬರು ಮಹಿಳೆಯರ ಬಂಧನ
ತುಮಕೂರು,ಜ.16: ವೇಶ್ಯಾವಾಟಿಕೆಗೆ ಮಹಿಳೆಯರನ್ನು ಸರಬರಾಜು ಮಾಡುತಿದ್ದ ಆರೋಪದಲ್ಲಿ ಇಬ್ಬರು ಮಹಿಳೆಯರನ್ನು ಕೋರ ಪೊಲೀಸರು ಬಂಧಿಸಿದ್ದಾರೆ.
ಕೆಲಸ ಕೊಡಿಸುವ ನೆಪದಲ್ಲಿ ಹೆಣ್ಣು ಮಕ್ಕಳನ್ನು ಆಂಧ್ರಪ್ರದೇಶ, ದೆಹಲಿ ಮತ್ತಿತರ ಮಹಾನಗರಗಳಲ್ಲಿ ವೇಶ್ಯಾವಾಟಿಕೆಗೆ ದೂಡುತಿದ್ದ ಮಧುಗಿರಿ ತಾಲೂಕು ಮಿಡಿಗೇಶಿಯ ಭಾಗ್ಯಮ್ಮ,ಆಂಧ್ರಪ್ರದೇಶದ ಕದರಿ ಗ್ರಾಮದ ನೂರ್ ಜಾನ್ ಮತ್ತು ಕೊರಟಗೆರೆ ಪಟ್ಟಣದ ಭಾಗ್ಯ ಎಂಬುವವರನ್ನು ಬಂಧಿಸಲಾಗಿದೆ.
ದೆಹಲಿ ಪೊಲೀಸರು ಕೋರಾ ಪೊಲೀಸ್ ಠಾಣೆಗೆ ನೀಡಿದ ಮಾಹಿತಿಯನ್ವಯ, ದೆಹಲಿ ಪೊಲೀಸರಿಂದ ವೇಶ್ಯಾವಾಟಿಕೆ ಕೇಂದ್ರದಿಂದ ರಕ್ಷಿಸಲ್ಪಟ್ಟಿದ್ದ ಯುವತಿಯನ್ನು ತುಮಕೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವೇಶ್ಯಾವಾಟಿಕೆ ದಂಧೆಯಿಂದ ರಕ್ಷಿಸಲ್ಪಟ್ಟ ಹೆಣ್ಣು ಮಗಳನ್ನು ಕೆಲಸ ಕೊಡಿಸುವ ನೆಪದಲ್ಲಿ ಆಂಧ್ರಪ್ರದೇಶದ ಹಿಂದೂಪುರದ ಮತ್ತೊಂದು ಹುಡುಗಿಯೊಂದಿಗೆ ನೂರ್ಜಾನ್ ಜೊತೆ ದೆಹಲಿ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿ,ಅಲ್ಲಿನ ಮಹಿಳೆಯೊಬ್ಬರಿಗೆ ಮಾರಾಟ ಮಾಡಿದ್ದರು ಎಂದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯ ಎಸ್.ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ಮಧುಗಿರಿ ಉಪವಿಭಾಗದ ಡಿವೈಎಸ್ಪಿ ಓ.ಬಿ.ಕಲ್ಲೇಶಪ್ಪ,ಕೊರಟಗೆರೆ ಸಿಪಿಐ ಎಸ್.ಮುನಿರಾಜು, ಮತ್ತಿತರರು ಆರೋಪಿಗಳ ಬಂಧನಕ್ಕೆ ಶ್ರಮಿಸಿದ್ದು, ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್.ಪಿ ಅವರು ಅಭಿನಂದಿಸಿದ್ದಾರೆ.