ಅಗ್ನಿ ಅನಾಹುತ: ಅಪಾರ ನಷ್ಟ
ಸೊರಬ,ಜ.17 : ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಸೋಮವಾರ ರಾತ್ರಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಅಂಗಡಿ ಮಳಿಗೆಯಲ್ಲಿ ವ್ಯಾಪಾರಕ್ಕಾಗಿಟ್ಟಿದ್ದ ಅಪಾರ ಪ್ರಮಾಣದ ದವಸ ಧಾನ್ಯಗಳು ಹಾನಿಗೊಳಗಾಗಿದೆ.
ಗ್ರಾಮದ ಕೃಷ್ಣಕಾಮತ್ ಹಾಗೂ ಸದಾನಂದ ಕಾಮತ್ ಅವರಿಗೆ ಸೇರಿದ ದಿನಸಿ ಮತ್ತು ನ್ಯಾಯ ಬೆಲೆ ಅಂಗಡಿ ಅಗ್ನಿಗಾಹುತಿಯಾಗಿದೆ. ಅಂಗಡಿಯಲ್ಲಿದ್ದ ಅಕ್ಕಿ, ಎಣ್ಣೆ, ಬೇಳೆ ಕಾಳು ಮುಂತಾದವು ಸಂಪೂರ್ಣ ಸುಟ್ಟಿ ಹೋಗಿವೆ. ಹೆಂಚಿನ ಕಟ್ಟಡವಾಗಿರುವುದರಿಂದ ಮನೆಯ ಮರಮಟ್ಟುಗಳು ಕೂಡಾ ಸಂಪೂರ್ಣ ಭಸ್ಮವಾಗಿವೆ. ಸಾಲು ಕೇರಿಯ ಮನೆಗಳಿರುವ ಇಲ್ಲಿ ಸೋಮವಾರ ರಾತ್ರಿ ಸುಮಾರು 2 ಗಂಟೆಯ ಹೊತ್ತಿಗೆ ವಿದ್ಯುತ್ ಶಾರ್ಟ್ ಸರ್ಕೂಟ್ನಿಂದ ಬೆಂಕಿ ತಗುಲಿದ್ದು, ನೋಡನೋಡುತ್ತಿದ್ದಂತೆಯೆ ಬೆಂಕಿ ತ್ವರಿತಗತಿಯಲ್ಲಿ ವ್ಯಾಪಿಸಿದೆ. ಸಕಾಲಕ್ಕೆ ಅಗ್ನಿಶಾಮಕ ದಳದವರು ಹಾಗೂ ಗ್ರಾಮಸ್ಥರು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗುವುದನ್ನ ತಪ್ಪಿಸಿದ್ದಾರೆ ಎಂದು ಗ್ರಾಮದ ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆ, ಮೆಸ್ಕಾಂ, ರಕ್ಷಣಾ ಇಲಾಖೆ ಭೇಟಿ ನೀಡಿದ್ದು, 25-30 ಲಕ್ಷ ರೂ.ಹಾನಿಯೆಂದು ಅಂದಾಜಿಸಿದ್ದಾರೆ. ಗ್ರಾಪಂ ಅಧ್ಯಕ್ಷ, ಸದಸ್ಯರು, ತಾಪಂ ಮಾಜಿ ಅಧ್ಯಕ್ಷ ಹೆಚ್.ಗಣಪತಿ ಮೊದಲಾದವರು ಆಗಮಿಸಿ ವೀಕ್ಷಣೆ ನಡೆಸಿದ್ದಾರೆ.