ಶಾಲಾ ಬಸ್ ಢಿಕ್ಕಿ: ದಂಪತಿ ಮೃತ್ಯು
ಸಾಗರ, ಜ.18: ಶಾಲಾ ಬಸ್ ಢಿಕ್ಕಿ ಹೊಡೆದು ದಂಪತಿ ಮೃತಪಟ್ಟಿರುವ ಘಟನೆ ಇಲ್ಲಿನ ಕಂಬಳಿಕೊಪ್ಪ ಎಂಬಲ್ಲಿ ಗುರುವಾರ ನಡೆದಿದೆ.
ಮೃತಪಟ್ಟವರನ್ನು ರಾಮನಗರ ನಿವಾಸಿಗಳಾದ ಮುಹಮ್ಮದ್ ಸಾದಿಕ್(45) ಮತ್ತು ಅವರ ಪತ್ನಿ ರಾಹಿಲಾ(40) ಎಂದು ತಿಳಿದು ಬಂದಿದೆ.
ಖಾಸಗಿ ಶಾಲೆಯೊಂದರ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಕಂಬಳಿಕೊಪ್ಪ ತಲುಪುತ್ತಿದ್ದಂತೆಯೇ ಮುಂದಿನಿಂದ ಅತೀ ವೇಗದಿಂದ ಬರುತ್ತಿದ್ದ ವಾಹನವೊಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಸ್ತೆಯ ಎಡಭಾಗಕ್ಕೆ ತಿರುಗಿಸಿದ ಪರಿಣಾಮ ರಸ್ತೆಯ ಬದಿಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಸಾದಿಕ್ ದಂಪತಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ತಕ್ಷಣ ಸ್ಥಳಿಯರು ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ, ಆ ವೇಳೆಗಾಗಲೇ ದಂಪತಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story