ಕೇಂದ್ರ ಸರ್ಕಾರದ ಹಣದಿಂದ ಮಜಾ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ: ಶೋಭಾ ಕರಂದ್ಲಾಜೆ
ಹನೂರು,ಜ.20: ಗ್ರಾಮೀಣಾಭಿವೃದ್ಧಿ ಯೋಜನೆಗಾಗಿ ನರೇಂದ್ರ ಮೋದಿ ನೀಡಿದ 3,500 ಕೋಟಿ ಅನುದಾನವನ್ನು ಬಳಕೆ ಮಾಡದೆ ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಬಡ್ಡಿ ಹಣದಲ್ಲಿ ಮಜಾ ಮಾಡಿ ಕೇಂದ್ರ ಸರ್ಕಾರಕ್ಕೆ ಸುಳ್ಳು ಲೆಕ್ಕ ಪತ್ರದ ವರದಿ ನೀಡಿದ ಸರ್ಕಾರವೆಂದರೆ ಅದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಹನೂರು ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಮುನ್ನ ರಾಜ್ಯದ ಬಜೆಟ್ ಗಾತ್ರ ಕೇವಲ 40 ಲಕ್ಷ ಕೋಟಿಯಿತ್ತು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಕಾಂಗ್ರೆಸ್ ಪುಡಾರಿಗಳು ಮತ್ತು ಅಧಿಕಾರಿಗಳ ಪಾಲಾಗುತ್ತಿದ್ದ ಸೋರಿಕೆಯನ್ನು ತಡೆಗಟ್ಟಿ ಬಜೆಟ್ ಗಾತ್ರವನ್ನು 1.02ಲಕ್ಷ ಕೋಟಿಗೆ ಏರಿಕೆ ಮಾಡಿದರು ಎಂದರು.
108 ಆಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರತಿಯೊಬ್ಬ ಬಡವರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಿದರು. ಅಲ್ಲದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಮಲತಾಯಿ ಧೋರಣೆ ತೋರದೆ 300 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಹನೂರು ಪಟ್ಟಣ ಮತ್ತು ಮಲೆ ಮಹದೇಶ್ವರ ಬೆಟ್ಟಕ್ಕೆ ಕುಡಿಯುವ ನೀರು ಯೋಜನೆಗಳನ್ನು ಜಾರಿಗೊಳಿಸಿದವರು ಯಡಿಯೂರಪ್ಪ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಶಾಪವೆಲ್ಲಿ ವಿಮೋಚನೆಯಾಗಿದೆ? : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿ ಶಾಪ ವಿಮೋಚನೆ ಮಾಡಿದ್ದೀನಿ ಎನ್ನುತ್ತಾರೆ. ಆದರೆ ಅವರು ಬಂದು ಜಿಲ್ಲೆಗೆ ಕೊಟ್ಟ ಕೊಡುಗೆ ಏನು? ಕಲ್ಲುಗಳನ್ನು ಇಟ್ಟು ಶಿಲಾನ್ಯಾಸ ಮಾಡಿದ್ದೇ ಇವರ ಸಾಧನೆ. ಪ್ರಧಾನಮಂತ್ರಿ ನರೇಂದ್ರಮೋದಿ ಜಿಲ್ಲೆಗಾಗಿ 66,656 ಶೌಚಾಲಯಗಳ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದಾರೆ. ಆದರೆ ಗುರಿತ ಲುಪಿರುವುದು ಮಾತ್ರ 15 ಸಾವಿರ ಶೌಚಾಲಯ ಮಾತ್ರ. ಕೇಂದ್ರ ಸರ್ಕಾರ ನೀಡಿದಂತಹ ಹಣವನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನೇ ಮಾಡಿಲ್ಲ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಂತ ಕ್ಷೇತ್ರಕ್ಕೆ ಒಳಪಡುವ ಕವಲಂದೆ ಹೋಬಳಿಗೆ ಕುಡಿಯುವ ನೀರು ಕೊಡಲು ಮತ್ತು ಪ್ರಸಿದ್ಧ ಸ್ಥಳ ತಲಕಾಡಿನ ರಸ್ತೆ ನಿರ್ಮಾಣ ಮಾಡಲು ಯಡಿಯೂರಪ್ಪ ಅವರೇ ಬರಬೇಕಾಯಿತು ಎಂದು ವ್ಯಂಗ್ಯವಾಡಿದರು. ಇನ್ನು ಶಾಸಕರು ಕಳೆದ 10 ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಯಡಿಯೂರಪ್ಪ ಅವರು ಕ್ಷೇತ್ರಕ್ಕಾಗಿ ತಂದಂತಹ ಯೋಜನೆಗಳನ್ನು ನೆನೆಗುದಿಗೆ ತಳ್ಳಿದ್ದೇ ಇವರ ಸಾಧನೆ ಎಂದು ಟೀಕಿಸಿದರು.
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ ರಾಜ್ಯಕ್ಕೆ ಯಡಿಯೂರಪ್ಪ ಅವರು ಆಧುನಿಕ ಬಸವಣ್ಣಯಿದ್ದಂತೆ. ಆದುದರಿಂದಲೇ ಅವರನ್ನು ರಾಜ್ಯದ ಜನತೆ ದೇವರಂತೆ ಕಾಣುತ್ತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಅಲ್ಲದೆ ಸಿದ್ಧರಾಮಯ್ಯ ಮತ್ತು ಅವರ ಸಹಚರರು ರಾಜ್ಯವನ್ನು ಲೂಟಿಮಾಡಿ ಹೈಕಮಾಂಡ್ಗೆ ಕಪ್ಪ ಸಲ್ಲಿಸುತ್ತಿದ್ದಾರೆ ಎಂದು ಟೀಕಿಸಿದರು.