ಮುಖ್ಯಮಂತ್ರಿ ಸಿದ್ದರಾಮ ಅಲ್ಲ ಸಿದ್ದರಾವಣ : ಬಿ.ಎಸ್.ಯಡಿಯೂರಪ್ಪ
ಗುಂಡ್ಲುಪೇಟೆ,ಜ.22: ರಾಜ್ಯದಲ್ಲಿ ಅಚ್ಛೇದಿನ್ ಬರಲು ಕಾಂಗ್ರೆಸನ್ನು ಮನೆಗೆ ಕಳುಹಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಮಾಡಿದ ತಪ್ಪಿನಿಂದ ರಾಜ್ಯದ ಅಭಿವೃದ್ದಿಯ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಹಾಗಾಗಿ ಮತ್ತೊಮ್ಮೆ ಈ ತಪ್ಪು ಮಾಡದಿರಿ ಎಂದು ಹೇಳಿದರು.
ಕ್ಷೇತ್ರದಲ್ಲಿನ ಜನತೆ ಪೂರ್ಣ ಪ್ರಮಾಣದಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದರು. ಆದರೆ ಚುನಾವಣೆಯ ಎರಡು ದಿನಗಳ ಹಿಂದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸರ್ಕಾರ ಮಾಡಿದ ತಂತ್ರಗಾರಿಕೆಯಿಂದ ಬಿಜೆಪಿ ಸೋಲನ್ನು ಕಂಡಿತು. ಹಾಗಾಗಿ ಸಿದ್ದರಾಮಯ್ಯ ತಲೆಗೆ ಪಿತ್ತ ನೆತಿಗೆ ಏರಿದೆ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆ ಎಂಬ ದುರಹಂಕಾರದಿಂದ ದುರಾಡಳಿತ ನಡೆಸುತ್ತಿದ್ದಾರೆ. ಸರ್ಕಾರದ ಅಧಿಕಾರ ಬಲ, ಹಣಬಲ, ಹೆಂಡದ ಬಲದಿಂದ ಮತ್ತು ತೋಳ್ಬಲದಿಂದ ಉಪ ಚುನಾವಣೆಯಲ್ಲಿ ಜಯಭೇರಿಯನ್ನು ಬಾರಿಸಿದರು. ಆದರೆ ಇದು ನಿಜವಾದ ಗೆಲುವಲ್ಲ. ಕ್ಷೇತ್ರದ ಪ್ರತಿಯೊಂದು ಹಳ್ಳಿ ಹಳ್ಳಿಗಳನ್ನು ನಾನು ಸುತ್ತಿದ್ದೇನೆ. ಇಲ್ಲಿನ ಜನತೆಯ ನಾಡಿಮಿಡಿತ ನನಗೆ ಗೊತ್ತಿದೆ. ನಮ್ಮ ದಾರಿ ತಪ್ಪಿಸಿದವರು ಸರ್ಕಾರದ ಮಂತ್ರಿ ಮಹೋದಯರು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮ ಅಲ್ಲ ‘ಸಿದ್ದರಾವಣ’
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೇವರ ಮೇಲೆ ನಂಬಿಕೆ ಬರುತ್ತಿದೆ.ಹೀಗಾಗಿ ಹೋದ ಕಡೆಗಳಲ್ಲೆಲ್ಲಾ ನಾನು ಹಿಂದು, ನನ್ನ ಹೆಸರಿನಲ್ಲಿಯೇ ರಾಮ ಇಲ್ಲವಾ ಎಂದು ಪ್ರಶ್ನಿಸುತ್ತಿದ್ದಾರೆ. ನಿಜವಾಗಿಯೂ ಈತ ಸಿದ್ದರಾಮ ಅಲ್ಲ, ಸಿದ್ದರಾವಣ. ರಾವಣನ ಮಾದರಿಯಲ್ಲಿ ರಾಜ್ಯದ ಜನತೆಯನ್ನು ಕಾಡುತ್ತಿದ್ದಾರೆ. ಮುಂದಿನ ನಾಲ್ಕು ತಿಂಗಳಲ್ಲಿ ಇದಕ್ಕೆಲ್ಲಾ ಮುಕ್ತಿ ದೊರೆತು ರಾಮ ರಾಜ್ಯ ಸ್ಥಾಪನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೀರಾವರಿ ಯೋಜನೆಗಳಿಗೆ 1 ಲಕ್ಷ ಸಾವಿರ ಕೋಟಿ ಮೀಸಲು : ಬಿಜೆಪಿ ಸರ್ಕಾರ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವುದರೊಂದಿಗೆ ಅಧಿಕಾರ ಹಿಡಿಯುವುದು ಖಂಡಿತಾ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದು ಲಕ್ಷ ಸಾವಿರ ಕೋಟಿ ರೂಪಾಯಿಗಳ ಮಹಾ ಯೋಜನೆಯನ್ನು ರೂಪಿಸಿ, ರಾಜ್ಯದಲ್ಲಿನ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆಯನ್ನು ಮಾಡುವುದು ಮೊದಲ ಆದ್ಯತೆ ಎಂದರು.
ಸೋಲುಂಡವರನ್ನು ಬೆಂಬಲಿಸಿ: ಸತತ ಮೂರು ಬಾರಿ ಸೋಲು ಅನುಭವಿಸಿರುವ ಸಿ.ಎಸ್.ನಿರಂಜನ್ ಕುಮಾರ್ ಅವರನ್ನು ಈ ಬಾರಿ ಅತ್ಯಂತ ಹೆಚ್ಚಿನ ಮತಗಳನ್ನು ನೀಡಿ ಅವರನ್ನು ಶಾಸಕರನ್ನಾಗಿಸಿ ಎಂದು ಹೇಳುವುದರೊಂದಿಗೆ ಮುಂದಿನ ಅಭ್ಯರ್ಥಿ ಅವರೇ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯಗೆ ಬಿ.ಎಸ್.ವೈ ಬಹಿರಂಗ ಸವಾಲು
ನಾನು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಚಾಮರಾಜನಗರದ ಅಭಿವೃದ್ದಿಗೆ ನೂರಾರು ಕೋಟಿ ಅನುದಾನ ನೀಡಿದ್ದೇನೆ. ಕಾಂಗ್ರೇಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಅನುದಾನ ನೀಡಿದ್ದೀರಿ? ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಕಣ್ಣೀರಿಟ್ಟ ನಿರಂಜನ್ :
ಬಿ.ಜೆ.ಪಿ.ರಾಜ್ಯ ಸಮಿತಿ ಸದಸ್ಯ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ಉಪಚುನಾವಣೆಯ ಸೋಲಿಗೆ ಬೇಸರ ಇಲ್ಲ. ಆದರೆ ನನ್ನ ಗೆಲುವಿಗೆ ಯಡಿಯೂರಪ್ಪ ಮೂರು ಬಾರಿ ಮನೆ ಮನೆಗೆ ಬಂದು ಪ್ರಚಾರ ಮಾಡಿದರು. ಹೀಗಾಗಿ ನನಗೆ ಭಾರೀ ನೋವಾಗಿದೆ. ಇದು ನನ್ನ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಕಣ್ಣೀರಿಟ್ಟರು. ಈ ಬಾರಿ ಹೆಚ್ಚು ಮತ ನೀಡುವುದರೊಂದಿಗೆ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಕೋಟೆ ಎಂ.ಶಿವಣ್ಣ, ಡಿ.ಎಸ್.ವೀರಯ್ಯ, ಮಾಜಿ ಶಾಸಕಿ ಪರಿಮಳನಾಗಪ್ಪ, ಕೆ.ಪಿ.ನಂಜುಂಡಿ, ಬಿ.ಎಸ್.ಪುಟ್ಟಸ್ವಾಮಿ, ತೇಜಸ್ವಿನಿಗೌಡ, ರಮೇಶ್ಗೌಡ, ಮಾಜಿ ಸಚಿವ ರೇಣುಕಾಚಾರ್ಯ, ನೂರೊಂದು ಶೆಟ್ಟಿ, ಪ್ರೋ.ಕೆ.ಆರ್.ಮಲ್ಲಿಕಾರ್ಜುನಪ್ಪ, ಯುವ ಮುಖಂಡರಾದ ಪ್ರಣಯ್, ಎಸ್.ಸಿ.ಮಂಜುನಾಥ್, ಶಿವಪ್ರಕಾಶ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.