4 ವರ್ಷಗಳಲ್ಲಿ 2806 ಹಿಂದೂಗಳ, 341 ಮುಸ್ಲಿಮರ ಮೇಲಿನ ಪ್ರಕರಣಗಳು ವಾಪಸ್ : ರಾಮಲಿಂಗಾರೆಡ್ಡಿ
"ಎಲ್ಲಾ ಸಮುದಾಯದ ಅಮಾಯಕರ ಮೇಲಿನ ಪ್ರಕರಣ ಹಿಂಪಡೆಯುತ್ತೇವೆ"
ಬೆಂಗಳೂರು, ಜ.27: ಕೇವಲ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಮಾತ್ರ ಹಿಂಪಡೆಯುವುದಿಲ್ಲ. ಎಲ್ಲಾ ಸಮುದಾಯದ ಮುಗ್ಧ ಆರೋಪಿಗಳ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವುದರ ಕುರಿತು ಸ್ಪಷ್ಟನೆ ಕೋರಿ ವಿವಿಧ ಜಿಲ್ಲೆಯ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕಳೆದ ನಾಲ್ಕು ವರ್ಷದಲ್ಲಿ 3164 ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಅದರಲ್ಲಿ ಹಿಂದೂ ಸಮುದಾಯದ 2806, ಮುಸ್ಲಿಂ ಸಮುದಾಯದ 341 ಹಾಗೂ ಇತರೆ 17ಮಂದಿಯ ಪ್ರಕರಣಗಳು ಒಳಗೊಂಡಿವೆ. ಹೀಗಾಗಿ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಮಾಯಕ ಆರೋಪಿಗಳ ಪ್ರಕರಣಗಳನ್ನು ಹಿಂಪಡೆಯಲು ಸ್ಪಷ್ಟನೆ ಕೋರಿ ಕಳೆದ ಡಿ.22 ಹಾಗೂ ಜ.14ರಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ ಕೇವಲ ಅಲ್ಪಸಂಖ್ಯಾತರು ಎಂದು ತಪ್ಪಾಗಿ ನಮೂದಾಗಿದೆ. ಹೀಗಾಗಿ ಆ ಪತ್ರಗಳನ್ನು ಹಿಂಪಡೆಯುವಂತೆ ನಿರ್ದೇಶಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ನ್ಯಾ.ರಾಜೇಂದ್ರ ಸಾಚಾರ್ ಸಮಿತಿಯ ಶಿಫಾರಸ್ಸಿನ ಅನ್ವಯ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಅಮಾಯಕ ಆರೋಪಿಗಳ ಪ್ರಕರಣಗಳನ್ನು ವಾಪಸ್ ಪಡೆಯಲು ಉದ್ದೇಶಿಸಲಾಗಿದೆ. ಈ ಕುರಿತು ಎಲ್ಲ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಪತ್ರ ಬರೆಯಲಾಗಿದೆ. ಅಲ್ಲಿಂದ ವರದಿ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಆರೆಸ್ಸೆಸ್ ಪ್ರಕರಣಗಳು ವಾಪಸ್: ಸಂಘಪರಿವಾರದ ಮುಗ್ಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಆ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು. ಈ ಕುರಿತು ಸಂಘಪರಿವಾರ ಇಲ್ಲವೆ ಅವರ ಕುಟುಂಬಸ್ಥರು ಮನವಿ ಮಾಡಿಕೊಂಡರೆ ಕೂಡಲೆ ಸ್ಪಂದಿಸಲಾಗುವುದು ಎಂದು ಅವರು ಹೇಳಿದರು.
ನಾಡು, ನುಡಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಪ್ರತಿಭಟನಾಕಾರರು ರೈಲು ತಡೆದು ಪ್ರತಿಭಟನೆ ಮಾಡಿರುತ್ತಾರೆ, ರಸ್ತೆ ತಡೆ ನಡೆಸಿರುತ್ತಾರೆ. ಅಂತಹ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು. ಇದರಲ್ಲಿ ಧರ್ಮ, ಜಾತಿ ಎಂಬ ಪ್ರಶ್ನೆ ಬರುವುದಿಲ್ಲವೆಂದು ಅವರು ಹೇಳಿದರು.
ಗಂಭೀರ ಪ್ರಕರಣ ವಾಪಸಿಲ್ಲ: ಕೊಲೆ, ಕೊಲೆಯತ್ನ ಸೇರಿದಂತೆ ಹೆಚ್ಚಿನ ಪ್ರಮಾಣದ ಸಾರ್ವಜನಿಕ ಆಸ್ತಿಗಳನ್ನು ನಾಶ ಮಾಡಿರುವ ಆರೋಪಿಗಳ ಪ್ರಕರಣಗಳನ್ನು ವಾಪಸ್ ಮಾಡುವುದಿಲ್ಲ. ಕಳೆದ 10ವರ್ಷಗಳಲ್ಲಿ ಕೋಮು ದಳ್ಳುರಿ ಸಂಬಂಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ, ಅದರಲ್ಲಿ ವಾಪಸ್ ಪಡೆದಿರುವ ಪ್ರಕರಣಗಳ ಸಂಖ್ಯೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.