ಝಮೀರ್ ಅಹ್ಮದ್ ಖಾನ್ ಗೆಲವು ನಿಶ್ಚಿತ: ಮೇಲ್ಮನೆ ಸದಸ್ಯ ಪುಟ್ಟಣ್ಣ
ಬೆಂಗಳೂರು, ಜ. 27: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಝಮೀರ್ ಅಹ್ಮದ್ ಖಾನ್ ಗೆಲುವು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ಸಿ.ಗೋವಿಂದರಾಜ್ ನೇತೃತ್ವದಲ್ಲಿ ಅಣ್ಣಮ್ಮದೇವಿ ಭಕ್ತ ಮಂಡಲಿಯ ವಾರ್ಷಿಕೋತ್ಸವ ಹಾಗೂ ಊರಹಬ್ಬದ ಪ್ರಯುಕ್ತ ಮಹಿಳೆಯರಿಗೆ ದಿನೋಪಯೋಗಿ ವಸ್ತುಗಳು, ಸೀರೆಗಳು ಹಾಗೂ ಮಕ್ಕಳಿಗೆ ಪಠ್ಯ-ಪುಸ್ತಕ ವಿತರಿಸಿ ಅವರು ಮಾತನಾಡುತ್ತಿದ್ದರು.
ತಾಂತ್ರಿಕ ಕಾರಣಗಳಿಂದ ಶಾಸಕ ಝಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ನಿಧಾನವಾಗುತ್ತಿದೆ. ಆದರೆ, ಈಗಾಗಲೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವಂತೆ ಅವರು ಕಾಂಗ್ರೆಸ್ನಿಂದ ಸ್ಪರ್ಧೆಗಿಳಿಯಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಹಾಲಿ ಶಾಸಕರೂ ಆಗಿರುವ ಝಮೀರ್ ಅಹ್ಮದ್ ಖಾನ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಅವರ ಗೆಲುವು ನಿಶ್ಚಿತ ಎಂದು ಪುಟ್ಟಣ್ಣ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ನಟ ಯಶ್ ಮಾತನಾಡಿ, ಅಣ್ಣಮ್ಮದೇವಿಯ ಕೃಪೆ ನನ್ನ ಮೇಲಿದೆ. ಮನೆ ಬಿಟ್ಟು ಬಂದಾಗ ತಾಯಿಯ ಆಶೀರ್ವಾದದಿಂದ ಚಿತ್ರರಂಗದಲ್ಲಿ ಇಷ್ಟರಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಯಿತು. ಝಮೀರ್ ಅಹ್ಮದ್ ಖಾನ್ ಮೊದಲಿನಿಂದಲೂ ನನಗೆ ಹಲವು ಸಂದರ್ಭಗಳಲ್ಲಿ ಜೊತೆಯಾಗಿದ್ದಾರೆ. ಅವರ ಸಹಭಾಗಿತ್ವಕ್ಕೆ ನಾನು ಚಿರಋಣಿ ಎಂದು ಸ್ಮರಿಸಿದರು.
ಶಾಸಕ ಝಮೀರ್ ಅಹ್ಮದ್ ಖಾನ್ ಮಾತನಾಡಿ, ನಲವತ್ತು ವರ್ಷಗಳಿಂದ ಅಣ್ಣಮ್ಮದೇವಿ ಕಾರ್ಯಕ್ರಮವನ್ನು ಚಾಮರಾಜಪೇಟೆಯಲ್ಲಿ ಆಯೋಜಿಸುತ್ತಿದ್ದೇವೆ. ಸಮಾಜ ಸೇವಕ ಗೋವಿಂದರಾಜ್ ಅವರ ನೇತೃತ್ವದಲ್ಲಿ ಕ್ಷೇತ್ರದ ಬಡ ಜನರಿಗೆ ತಕ್ಕಮಟ್ಟಿನ ಸಹಾಯ ಮಾಡುತ್ತಿದ್ದೇವೆ ಎಂದರು.