ಮಹಾಮಸ್ತಕಾಭಿಷೇಕ: ಶ್ರವಣಬೆಳಗೊಳದಲ್ಲಿ ಶೌಚಾಲಯಗಳ ಸ್ವಚ್ಛತೆಗೆ ಕಾರ್ಮಿಕರ ನೇಮಕ!
ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯೇ?
ಶ್ರವಣಬೆಳಗೊಳ, ಜ.28: ಮುಂಬರುವ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಶ್ರವಣಬೆಳಗೊಳಕ್ಕೆ ಭೇಟಿ ನೀಡುವ ಧಾರ್ಮಿಕ ನಾಯಕರಿಗಾಗಿ ಜಾಡಮಾಲಿಗಳು ಶುಚಿಗೊಳಿಸಬೇಕಾದ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು thehindu.com ವರದಿ ಮಾಡಿದೆ. ಇದು ಜಾಡಮಾಲಿಗಳ ನೇಮಕಾತಿ ತಡೆ ಮತ್ತು ಅವರ ಪುನರ್ವಸತಿ ಕಾಯ್ದೆ- 2013ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಜಾಡಮಾಲಿಗಳ ಒಂದು ಗುಂಪು ಶೌಚಾಲಯ ಸ್ವಚ್ಛಗೊಳಿಸುವ ಸಲುವಾಗಿ ಡಿಸೆಂಬರ್ 10ರಂದೇ ಈ ಇಲ್ಲಿಗೆ ಆಗಮಿಸಿದೆ ಎನ್ನಲಾಗಿದೆ. ವಿಚಿತ್ರ ಸಂಗತಿಯೆಂದರೆ ಈ ಜೈನ ತೀರ್ಥಕ್ಷೇತ್ರ ಇರುವ ಹಾಸನ ಜಿಲ್ಲೆಯನ್ನು ‘ಬಯಲುಶೌಚ ಮುಕ್ತ ಜಿಲ್ಲೆ’ ಎಂದು ಘೋಷಿಸಲಾಗಿದೆ. ಫೆಬ್ರವರಿ 17ರಂದು ಉದ್ಘಾಟನೆಯಾಗುವ ಮಹಾಮಸ್ತಕಾಭಿಷೇಕಕ್ಕಾಗಿ ಹಲವು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಾಮಸ್ತಕಾಭಿಷೇಕ 12 ವರ್ಷಗಳಿಗೊಮ್ಮೆ ನಡೆಯುತ್ತದೆ.
ಧಾರ್ಮಿಕ ಮುಖಂಡರಿಗಾಗಿ ತ್ಯಾಗಿ ನಗರದಲ್ಲಿ ಈ ಶೌಚಾಲಯಗಳು ನಿರ್ಮಾಣವಾಗಿದ್ದು, ಇದನ್ನು ಜಾಡಮಾಲಿಗಳೇ ಶುಚಿಗೊಳಿಸಬೇಕಾಗುತ್ತದೆ. ಇದು ಕಾನೂನುಬಾಹಿರವಾಗಿದೆ. ಈ ಮೆಗಾ ಉತ್ಸವಕ್ಕೆ ಆಗಮಿಸುವ ಗಣ್ಯರಿಗಾಗಿ ವಿಶೇಷವಾಗಿ ಇವುಗಳನ್ನು ನಿರ್ಮಿಸಲಾಗಿದೆ ಎಂದು ಮಹಾಮಸ್ತಕಾಭಿಷೇಕ ಸಿದ್ಧತೆಯಲ್ಲಿರುವ ಅಧಿಕಾರಿಗಳು ಹೇಳುತ್ತಾರೆ. "ಈ ಧಾರ್ಮಿಕ ಮುಖಂಡರು ಬೇಸಿನ್ ಸೆಟ್ ಇರುವ ಶೌಚಾಲಯ ಬಳಸುವುದಿಲ್ಲ. ಇದಕ್ಕಾಗಿ ಸಿಮೆಂಟ್ ಪ್ಲಾಟ್ಫಾರಂ ನಿರ್ಮಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ 50ಕ್ಕೂ ಹೆಚ್ಚು ಧಾರ್ಮಿಕ ಮುಖಂಡರು ನಗರಕ್ಕೆ ಆಗಮಿಸಿದ್ದು, ಬಹಳಷ್ಟು ಮಂದಿ ಇಂಥ ಶೌಚಾಲಯ ಬಳಸುತ್ತಿದ್ದಾರೆ. ಇತರ ಕೆಲವರು ಬಯಲುಶೌಚ ಆಯ್ಕೆ ಮಾಡಿಕೊಂಡಿದ್ದಾರೆ.
ಉಪನಗರದ ಶುಚಿಗಾಗಿ ಬಹುತೇಕ ದಲಿತರನ್ನೊಳಗೊಂಡ 300 ಮಂದಿಯ ತಂಡವನ್ನು ಉತ್ತರ ಪ್ರದೇಶದಿಂದ ಕರೆಸಲಾಗಿದೆ. ದಿನಕ್ಕೆ ಮೂರು ಬಾರಿ ಶೌಚಾಲಯ ಶುಚಿಗೊಳಿಸಲು ಇವರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಕಾರ್ಮಿಕ ತಂಡದ ಮುಖ್ಯಸ್ಥ ಸಂತೋಷ್ ಕುಮಾರ್ನನ್ನು ಪ್ರಶ್ನಿಸಿದಾಗ, “ಜೀವನ ಸಾಗಿಸಲು ಇಂಥ ಕೆಲಸ ಮಾಡುವುದು ಅನಿವಾರ್ಯ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.” ಅಹ್ಮದಾಬಾದ್, ಹರಿದ್ವಾರ ಹೀಗೆ ದೊಡ್ಡ ಸಮಾರಂಭಗಳು ನಡೆಯುವಲ್ಲೆಲ್ಲ ನಾವು ಹೋಗುತ್ತಿದ್ದೇವೆ. ಮಾಸಿಕ 8100 ರೂಪಾಯಿ ವೇತನ ನೀಡುತ್ತಾರೆ” ಎಂದು ವಿವರ ನೀಡಿದರು ಎಂದು thehindu.com ವರದಿ ಮಾಡಿದೆ.
ಕೃಪೆ: thehindu.com