ದೊಡ್ಡ ಬಜೆಟ್ಗಿಂತ ಸದಭಿರುಚಿಯ ಚಿತ್ರವನ್ನು ಕನ್ನಡಿಗರು ಗೆಲ್ಲಿಸುತ್ತಾರೆ: ನಟ ಗುರುನಂದನ್
ಚಿಕ್ಕಮಗಳೂರು, ಜ.29: ನೂರು ಕೋಟಿಯ ದೊಡ್ಡ ಬಜೆಟ್ ಸಿನಿಮಾಗಿಂತ ನೂರು ಜನರ ಮನಮುಟ್ಟುವ ಸದಭಿರುಚಿಯ ಚಿತ್ರವನ್ನು ಕನ್ನಡದ ಜನ ಗೆಲ್ಲಿಸುತ್ತಾರೆಂಬ ನಂಬಿಕೆ ನನಗಿದೆ ಎಂದು ಫಸ್ಟ್ ರ್ಯಾಂಕ್ ರಾಜು ನಾಯಕ ನಟ ಗುರುನಂದನ್ ಹೇಳಿದರು.
ಅವರು ಸೋಮವಾರ ನಗರದ ಮಿಲನ್ ಚಿತ್ರ ಮಂದಿರದಲ್ಲಿ 2ನೇ ವಾರದಲ್ಲಿ ಪ್ರದರ್ಶನಗೊಳ್ಳುತ್ತಿರುವ ರಾಜು ಕನ್ನಡ ಮೀಡಿಯಂ ಚಿತ್ರ ವೀಕ್ಷಿಸಿ ನಂತರ ಅಭಿಮಾನಿಗಳ ಗೌರವ ಸ್ವೀಕರಿಸಿ ಮಾತನಾಡಿದರು.
ಚಿತ್ರಗಳಲ್ಲಿ ಬಜೆಟ್ ಪ್ರಾಮುಖ್ಯತೆಗಿಂತ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಥೆ ಮತ್ತು ಪಾತ್ರಗಳ ನಿರ್ವಹಣೆಗೆ ಕನ್ನಡದ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ಈ ಸಿನಿಮಾ ಸಾಕ್ಷಿಯಾಗಿ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ. ಅದರಲ್ಲೂ ನನ್ನ ತವರೂರಲ್ಲಿಯೇ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ್ದು ಬಹಳ ಸಂತೋಷ ಕೊಟ್ಟಿದೆ ಎಂದರು.
ದಶಕಗಳ ಹಿಂದೆ ಅಣ್ಣಾವ್ರ ಚಿತ್ರವನ್ನು ಇದೇ ಚಿತ್ರಮಂದಿರದಲ್ಲಿ ಕುಟುಂಬದೊಂದಿಗೆ ಕುಳಿತು ನೋಡಿದ ನೆನೆಪಿದೆ. ಕನ್ನಡ ನಾಡಿನ ಜನರ ಆಶೀರ್ವಾದ ದಿಂದ ಅದೇ ಪರದೆಯಲ್ಲಿ ನನ್ನ ಚಿತ್ರ ನೋಡುತ್ತಿದ್ದೇನೆ. ಇದು ನನ್ನ ಭಾಗ್ಯ. ರಾಜ್ಯದ 200 ಚಿತ್ರಮಂದಿರದಲ್ಲಿ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಜನರು ಈ ಚಿತ್ರವನ್ನು ಸ್ವೀಕರಿಸಿರುವುದರಿಂದ ನನ್ನ ಮುಂದಿನ ಚಿತ್ರಗಳಿಗೆ ಸ್ಪೂರ್ತಿ ಹೆಚ್ಚಿದೆ. ನಟ ಸುದೀಪ್ ಉತ್ತಮ ಪಾತ್ರ ನಿರ್ವಹಿಸಿರುವುದು ಈ ಚಿತ್ರಕ್ಕೆ ಕಳೆ ತಂದಿದೆ ಎಂದು ಹೇಳಿದರು.
ಪರಭಾಷಾ ಚಿತ್ರಗಳ ಆರ್ಭಟದ ನಡುವೆಯೂ ಕನ್ನಡ ಚಿತ್ರ ಅಧ್ಬುತವಾಗಿ ನಿಂತಿದೆ ಎಂದರೆ ಅದರಲ್ಲಿ ಒಳ್ಳೆಯ ಸಂದೇಶ ಇದೆ ಎಂಬುವುದು ನನ್ನ ನಂಬಿಕೆ. ಫೆ.1 ರಂದು ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ನಾರ್ತ್ ಅಮೇರಿಕಾಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಅಲ್ಲಿಗೂ ಭೇಟಿ ನೀಡುತ್ತೇನೆ. ತೆಲುಗು, ತಮಿಳು, ಬಾಲಿವುಡ್ ಚಿತ್ರಗಳಿಗೂ ಅವಕಾಶಗಳು ಬಂದಿದೆ. ಅನ್ಯಭಾಷೆ ಚಿತ್ರಗಳಲ್ಲಿ ಅಭಿನಯಿಸುವ ಯೋಚನೆ ಇನ್ನೂ ಮಾಡಿಲ್ಲ ಎಂದು ನುಡಿದರು.
ಹಾಸನ ಸೇರಿದಂತೆ ಇತರೆ ಜಿಲ್ಲೆಗಳಿಗೆ ಬೇಟಿ ನೀಡಿದ್ದು, ಚಿಕ್ಕಮಗಳೂರು, ಕಡೂರು, ಭದ್ರಾವತಿ ನಂತರ ಶಿವಮೊಗ್ಗ, ಮಂಗಳೂರು, ಹಾಗೂ ಉತ್ತರ ಕರ್ನಾಟಕ ಭಾಗಗಳಿಗೆ ತೆರಳಿ ಚಿತ್ರದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.
ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ವ್ಯವಸ್ಥಾಪಕ ಶಿವಪ್ಪ ಹೂಗುಚ್ಚ ನೀಡಿ ಸ್ವಾಗತಿಸಿದರು. ಸಹನಟ ಅಮಿತ್ ಹಾಗೂ ಸುದರ್ಶನ್ ಇನ್ನಿತರರು ಜೊತೆಗಿದ್ದರು.