ಬೆಂಗಳೂರು: ನೌಕರರ ಖಾಯಂಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ
ಬೆಂಗಳೂರು, ಜ. 29: ಹಿಂದುಳಿದ ವರ್ಗ, ಮುರಾರ್ಜಿ ದೇಸಾಯಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ವಿವಿಧ ಹಾಸ್ಟೆಲ್ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು.
ಸೋಮವಾರ ಇಲ್ಲಿನ ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, 2017ರ ಜೂನ್ 15ರಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಣಯದಂತೆ ಮತ್ತೊಂದು ಸಭೆ ಕರೆಯಬೇಕೆಂದು ಒತ್ತಾಯಿಸಿದರು.
ಈಗಾಗಲೇ ಸೇವೆ ಸಲ್ಲಿಸುತ್ತಿರುವ ನೌಕರರು 1985ರಿಂದ 2014ರ ವರೆಗೆ ಇಲಾಖೆಯಲ್ಲಿ ಜಾರಿಯಲ್ಲಿದ್ದ ನಿಯಮಗಳನ್ವಯ ಖಾಯಂಗೆ ಅರ್ಹರಾಗಿದ್ದು, ಅವರು ಸೇವೆ ಸಲ್ಲಿಸುತ್ತಿರುವ ಹುದ್ದೆಗಳಲ್ಲೇ ಸೇವೆಯನ್ನು ಖಾಯಂಗೊಳಿಸಬೇಕು. ಸೇವೆಯಲ್ಲಿರುವ ನೌಕರರ ಸೇವೆ ಖಾಯಂ ಮಾಡದಿದ್ದಲ್ಲಿ, ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆಯಂತೆ ಖಾಯಂ ನೌಕರರಷ್ಟೇ ವೇತನ ಮತ್ತಿತರ ಸೌಕರ್ಯ ನೀಡಿ ನಿವೃತ್ತಿಯ ವರೆಗೆ ಅವರು ಇರುವ ಹುದ್ದೆಗಳಲ್ಲಿಯೇ ಮುಂದುವರೆಸಬೇಕು ಎಂದು ಕೋರಿದರು.
ಹೊರಗುತ್ತಿಗೆ ಪದ್ದತಿಯನ್ನು ಕೈಬಿಟ್ಟು, ಪೌರಾಡಳಿತ ಇಲಾಖೆಯಂತೆ, ಸಮಾಜ ಕಲ್ಯಾಣ ಇಲಾಖೆಯಿಂದಲೇ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನವನ್ನು ಪಾವತಿಸಲು ಆದೇಶ ಮಾಡಬೇಕು. ಪಿಎಫ್ ಮತ್ತು ಇಎಸ್ಐ ಸಮಸ್ಯೆ ಪರಿಹರಿಸಲು ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.