ಕೋಮು ಸಂಘರ್ಷ ಸೃಷ್ಟಿಸುವವರಿಗೆ ಇನ್ನು ಉಳಿಗಾಲವಿಲ್ಲ: ಪ್ರಕಾಶ್ ರೈ
ಸೌಹಾರ್ದತೆಗಾಗಿ ಕರ್ನಾಟಕ ವೇದಿಕೆ ವತಿಯಿಂದ ಮಾನವ ಸರಪಳಿ
ಮೈಸೂರು,ಜ.30: ಕೋಮು ಸಂಘರ್ಷ ಸೃಷ್ಟಿ ಮಾಡುವವರಿಗೆ ಇನ್ನು ಉಳಿಗಾಲ ಇಲ್ಲ ಎಂದು ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈ ಹೇಳಿದರು.
ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಮಂಗಳವಾರ ಸೌಹಾರ್ದತೆಗಾಗಿ ಕರ್ನಾಟಕ ವೇದಿಕೆ ಏರ್ಪಡಿಸಿದ್ದ ಮಾನವ ಸರಪಳಿಗೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಮನುಷ್ಯರು, ನಮಗೆ ಶಾಂತಿ ಬೇಕು ಎಂದು ಈ ದೇಶದ ಜನ ಬಯಸುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಠಿಸಿ ಕೋಮು ಸೌಹಾರ್ದತೆ ಉಂಟು ಮಾಡುವವರನ್ನು ಇನ್ನು ಮುಂದೆ ಸಹಿಸಿಕೊಳ್ಳುವುದಿಲ್ಲ. ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕಿದೆ. ಕೋಮು ದಳ್ಳುರಿ ಉಂಟು ಮಾಡುವವರು ಯಾವುದೇ ಪಕ್ಷದಲ್ಲಿದ್ದರೂ ಅಂತಹವರನ್ನು ಮಟ್ಟಹಾಕುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಈ ದೇಶದ ಹೆಣ್ಣು ಮಗಳು ಗೌರಿಯ ಹತ್ಯೆಯಾಯಿತು. ರಾಜ್ಯ, ದೇಶ ಸೇರಿದಂತೆ ವಿದೇಶದಲ್ಲೂ ಖಂಡನೆ ವ್ಯಕ್ತವಾಯಿತು. ಆದರೆ ಮನುಷತ್ವವೇ ಇಲ್ಲ ಎಂಬಂತೆ ಈ ದೇಶದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಒಂದೇ ಒಂದು ಹೇಳಿಕೆಯನ್ನು ಕೊಡಲಿಲ್ಲ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಐ ಹೇಟ್ ಮೋದಿ, ಅಮಿತ್ ಶಾ, ಅನಂತಕುಮಾರ್ ಹೆಗಡೆ ಎಂದು ಕಿಡಿಕಾರಿದರು.
ಈ ದೇಶದ ಜನರು ಸೌಹಾರ್ದತೆಯನ್ನು ಬಯಸುತ್ತಿದ್ದಾರೆ. ಪ್ರಜ್ಞಾವಂತ ಜನರು ಇಷ್ಟು ದಿನ ಸುಮ್ಮನಿದ್ದರು. ಆದರೆ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ. ಶಾಂತಿ ಸೌಹಾರ್ದತೆ ನೆಲೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋಮುವಾದಿಗಳಿಗೆ ಮತ ಹಾಕಬೇಡಿ ಎಂದು ಹೇಳುವ ನೀವು, ಯಾವ ರಾಜಕೀಯ ಪಕ್ಷಕ್ಕೆ ಮತ ಹಾಕಿ ಎಂದು ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರೈ, ಯಾವ ರಾಜಕೀಯ ಪಕ್ಷಗಳಲ್ಲಿ ಕೋಮುವಾದಿಗಳಿದ್ದಾರೋ ಅಂತವರಿಗೆ ಮತ ಹಾಕಬೇಡಿ ಎಂದು ಹೇಳುತ್ತೇನೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ಳಬೇಕು? ಈ ದೇಶದ ಜನರಿಗೆ ಯಾರು ಕೋಮುವಾದಿಗಳು ಎಂದು ಗೊತ್ತಿದೆ. ಅವರು ಪಾಠ ಕಲಿಸಲಿದ್ದಾರೆ ಎಂದು ಉತ್ತರಿಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಅಶೋಕ ರಸ್ತೆ ಮೂಲಕ ಲಷ್ಕರ್ ಪೊಲೀಸ್ ಠಾಣೆ ವರೆಗೆ ಮಾನವ ಸರಪಳಿ ನಿರ್ಮಿಸಿ ನಂತರ ಪುರಭವನದಲ್ಲಿ ಅಂತ್ಯಗೊಂಡಿತು. ಸಾಹಿತಿ ದೇವನೂರು ಮಹಾದೇವ ಪ್ರಮಾಣ ವಚನ ಪ್ರತಿಜ್ಞಾ ವಿಧಿ ಭೋದಿಸಿದರು. ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಜೋಡಿ ಮಾನವ ಸರಪಳಿಯಲ್ಲಿ ಭಾಗಿಯಾಗಿ ಸೌಹಾರ್ದತೆಗೆ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು .
ಪ್ರಗತಿಪರ ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ದೇವನೂರು ಮಹದೇವ, ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಮುಜಾಫರ್ ಅಸ್ಸಾದಿ, ಗೋವಿಂದ ರಾಜು, ಹರಿಪ್ರಸಾದ್, ನಂದಾ ಹಳೆಮನೆ, ಪತ್ರಕರ್ತ ಟಿ.ಗುರುರಾಜ್, ರಾಮೇಶ್ವರಿ ವರ್ಮ, ಪ.ಮಲ್ಲೇಶ್, ರೈತ ಸಂಘದ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು, ದಲಿತ ಸಂಘರ್ಷ ಸಮಿತಿಯ ಬೆಟ್ಟಯ್ಯ ಕೋಟೆ, ಮಾಜಿ ಮೇಯರ್ ಪುರುಷೋತ್ತಮ್, ಜಗದೀಶ್ ವಿದ್ಯಾರ್ಥಿಗಳು ಚಿಂತಕರು, ಸಾಹಿತಿಗಳು, ಹಲವಾರು ಮಂದಿ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.
ನಮ್ಮದು ಜನಗಳ ಭಾರತ. ದನಗಳ ಭಾರತ ಅಲ್ಲ. ಶಾಂತಿ ಸೌಹಾರ್ದತೆ, ಸಹಬಾಳ್ವೆ ಮೂಡುವಂತೆ ನೋಡಿಕೊಳ್ಳಬೇಕು, ಮನುಷ್ಯ ಭಾರತದಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ನೀಡಬಾರದು.
-ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠ.ಭಾರತ ದೇಶ ಸರ್ವ ಧರ್ಮ ಸಮಾನತೆಯ ರಾಷ್ಟ್ರ ಆಗಬೇಕು. ಇಲ್ಲಿ ಮತ ಗಲಭೆ, ಜಾತಿ ಗಲಭೆ ಬೇಡ. ಸೌಹಾರ್ದತೆಯಿಂದ ಬದುಕಲು ಎಲ್ಲರೂ ಕೈಜೊಡಿಸಬೇಕು.
-ಪ್ರೊ.ಕೆ.ಎಸ್.ಭಗವಾನ್, ಸಾಹಿತಿ, ಪ್ರಗತಿಪರ ಚಿಂತಕರು.