ಚಿಕ್ಕಮಗಳೂರು : ಫೆ.3ರಂದು ಆಳ್ವಾಸ್ ನುಡಿಸಿರಿ-ವಿರಾಸತ್
ಚಿಕ್ಕಮಗಳೂರು, ಜ.31: ಚಿಕ್ಕಮಗಳೂರು ಆಳ್ವಾಸ್ ನುಡಿಸಿರಿ-ವಿರಾಸತ್ ಘಟಕ ಆಶ್ರಯದಲ್ಲಿ ಫೆ.3ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ ಎಂದು ಎಂದಿರುವ ವಿರಾಸತ್ ಕಾರ್ಯಾಧ್ಯಕ್ಷ ಡಾ.ಸುಬ್ರಾಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶನಿವಾರ ಸಂಜೆ 5.45ಕ್ಕೆ ಶಾಸಕ ಸಿ.ಟಿ.ರವಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಎಸ್ಪಿ ಕೆ.ಅಣ್ಣಾಮಲೈ, ನಗರಸಭಾ ಅಧ್ಯಕ್ಷೆ ಶಿಲ್ಪಾರಾಜಶೇಖರ್, ಸಿಡಿಎ ಅಧ್ಯಕ್ಷ ಸಯ್ಯದ್ ಹನೀಫ್ ಮತ್ತು ಉದ್ದಿಮೆ ಪ್ರಸನ್ನ ಕುಮಾರ್ ಶೆಟ್ಟಿ ಭಾಗವಹಿಸುವರು.
ಘಟಕದಅಧ್ಯಕ್ಷ ಡಾ||ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಾಧ್ಯಕ್ಷ ಡಾ.ಸಿ.ಕೆ.ಸುಬ್ರಾಯ ಉಪಸ್ಥಿತರಿರುವ ಉದ್ಘಾಟನಾ ಸಮಾರಂಭ 45 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
ಮೂಡುಬಿದರೆ ಆಳ್ವಾಸ್ ಶಿಕ್ಷಣಪ್ರತಿಷ್ಠಾನದ ಸುಮಾರು 350 ಪ್ರತಿಭಾವಂತ ವಿದ್ಯಾರ್ಥಿಗಳಿಂದ 3.30 ಗಂಟೆಗಳ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯಮಯವಾಗಿ ನಡೆಯಲಿದೆ. ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕೇರಳದ ಮೋಹಿನಿಯಾಟಂ, ಬಡಗುತಿಟ್ಟು ಯಕ್ಷಗಾನಪ್ರಯೋಗದಲ್ಲಿ ಶ್ರೀರಾಮಪಟ್ಟಾಭಿಷೇಕ, ಆಂಧ್ರದ ಜನಪದ ಬಂಜಾರನೃತ್ಯ, ಮಣಿಪುರಿ ಸ್ಟಿಕ್ಡ್ಯಾನ್ಸ್, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಭೋಶಂಭೋ ಶಾಸ್ತ್ರೀಯ ನೃತ್ಯ, ಮಣಿಪುರಿ ದೋಲ್ಚಲಮ್, ಚಾರ್ಪ್ರಹಾರ್ ಕಥಕ್ ನೃತ್ಯ, ಒರಿಸ್ಸಾದ ಗೋಟಿಪುವನೃತ್ಯ, ಮಹಾರಾಷ್ಟ್ರದ ಲಾವಣಿನೃತ್ಯ, ಗುಜರಾತಿನ ಗಾರ್ಭ-ದಾಂಡಿಯಾ, ಪಶ್ಚಿಮಬಂಗಾಳದ ಪುರುಲಿಯಾಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಪ್ರಯೋಗದಲ್ಲಿ ಅಗ್ರಪೂಜೆ ಮೊದಲಾದ ಬೆರಗುಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಮೂಹಿಕವಾದ ವಂದೇಮಾತರಂ ಜೊತೆಗೆ ಮಲ್ಲಕಂಬ ಮತ್ತು ರೋಪ್ ಕಸರತ್ತುಗಳು ವಿಶೇಷ ಆಕರ್ಷಣಿಯಾಗಿರುತ್ತದೆ.