ಕಾಂಗ್ರೆಸ್ ನಾಯಕತ್ವದ ಪೈಪೋಟಿಗೆ ನಿಂತಿಲ್ಲ : ಚಲುವರಾಯಸ್ವಾಮಿ ಸ್ಪಷ್ಟನೆ
ಮಂಡ್ಯ, ಜ.31: ನಾನು ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕತ್ವದ ಪೈಪೋಟಿಗೆ ನಿಂತಿಲ್ಲ. ಇಲ್ಲಿ ಸಾಮೂಹಿಕ ನಾಯಕತ್ವವಿರುತ್ತದೆ. ನಮಗೆ ಜನರ ಪ್ರೀತಿ-ವಿಶ್ವಾಸ ಮುಖ್ಯವೇ ವಿನಃ ನಾಯಕತ್ವ ಮುಖ್ಯವಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಎನ್.ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದ ಗುತ್ತಲು ಬಡಾವಣೆಯ ಕುವೆಂಪು ಶತಮಾನೋತ್ಸವ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತಾ ಸಮಿತಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಮಾಣಿಕತೆ, ಪಕ್ಷ ನಿಷ್ಠೆ ಹಾಗೂ ನಾಯಕರ ಪ್ರೀತಿವಿಶ್ವಾಸ ಗಳಿಸಿದವರಿಗೆ ಅವಕಾಶ ಇದ್ದೇ ಇರುತ್ತದೆ. ಯಾರೂ ದುಡುಕಿನ ನಿರ್ಧಾರ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ರಾಜಕೀಯವಾಗಿ ಬೇಗ ಎತ್ತರಕ್ಕೆ ಏರಬೇಕೆಂದು ಬಯಸುತ್ತಾರೆ. ತಮ್ಮೊಬ್ಬರಿಗೆ ಜೈಕಾರ, ಅಭಿನಂದನೆ ಸಿಗಬೇಕೆಂದು ಬಯಸುವವರೂ ಇದ್ದಾರೆ. ಪಕ್ಷ ನಿಷ್ಠೆ, ಗೌರವ, ಸ್ವಾಭಿಮಾನ ಉಳಿಸಿಕೊಂಡು ತಾಳ್ಮೆಯಿಂದ ಇದ್ದರೆ ಅಧಿಕಾರದ ಅವಕಾಶಗಳು ಸಿಗುತ್ತವೆ ಎಂದು ಅವರು ಕಿವಿಮಾತು ಹೇಳಿದರು.
ಮಂಡ್ಯ ಜಿಲ್ಲೆ ಸ್ವಾಭಿಮಾನಕ್ಕೆ ಹೆಸರಾದ ಜಿಲ್ಲೆ. ಗಂಡುಮೆಟ್ಟಿನ ನೆಲದಿಂದ ಬಂದ ಹಲವು ಧೀಮಂತ ನಾಯಕರು ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ, ಗೌರವಗಳನ್ನು ಗಳಿಸಿಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಂಡ್ಯವನ್ನು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು ಎಂಬ ಭಾವನೆ ಹಲವರಲ್ಲಿ ಮೂಡಿದೆ. ಆದರೆ, ಇಲ್ಲಿನ ಜನರು ವ್ಯಕ್ತಿತ್ವ, ಸ್ವಾಭಿಮಾನವನ್ನು ಎಂದಿಗೂ ಮಾರಿಕೊಂಡಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ಝಮೀರ್ ಅಹಮದ್ ಮಾತನಾಡಿ, ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹಿಂದೂ ಮತ್ತು ಮುಸಲ್ಮಾನರು ಅಣ್ಣ-ತಮ್ಮಂದಿರಂತೆ ಸೌಹಾರ್ದಯುತ ಜೀವನ ನಡೆಸುತ್ತಿದ್ದಾರೆ. ಇದನ್ನು ಸಹಿಸದ ವಿರೋಧಿಗಳು ಏನಾದರೂ ಮಾಡಿ ಇಬ್ಬರನ್ನೂ ಬೇರ್ಪಡಿಸಬೇಕು ಎಂಬ ಕುತಂತ್ರ ನಡೆಸುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು ಎಂದರು.
ದೈವಕೃಪೆಯಿಂದಲೋ ಏನೋ ನಾನು ಮತ್ತು ಚೆಲುವರಾಯಸ್ವಾಮಿ ಜಿಲ್ಲೆಯ ಜನರ ಹೃದಯದಲ್ಲಿ ಸೇರಿದ್ದೇವೆ. ಎಲ್ಲಿಗೇ ಹೋದರೂ ಜನರು ಬಿಡುತ್ತಿಲ್ಲ, ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ. ನಮಗಿಷ್ಟು ಸಾಕು. ಮುಂದಿನ ಚುನಾವಣೆಯಲ್ಲಿ ಮುಸಲ್ಮಾನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಮುನಾವರ್ಖಾನ್, ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಸಿ.ಡಿ.ಗಂಗಾಧರ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷ ರಫೀವುಲ್ಲಾ ಅವರನ್ನು ಸನ್ಮಾನಿಸಲಾಯಿತು.
ಶಾಸಕ ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಮುಖಂಡರಾದ ಅಮರಾವತಿ ಚಂದ್ರಶೇಖರ್, ರವಿಕುಮಾರ್ ಗಣಿಗ, ಶಿವನಂಜು, ಕೆ.ಎಲ್.ನಾಗೇಂದ್ರ, ಮುಜಾಹಿದ್ ಅಲಿಖಾನ್, ಹೊಸಹಳ್ಳಿ ಬೋರೇಗೌಡ, ಸುಜಾತಮಣಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಮಿತಿಯ ಅಧ್ಯಕ್ಷ ದೇವಯ್ಯ, ಇತರ ಮುಖಂಡರು ಉಪಸ್ಥಿತರಿದ್ದರು.