ಇಂದು ದೀಪ ಹಚ್ಚುವುದರ ಬದಲು ಬೆಂಕಿ ಹಚ್ಚುವ ಕೆಲಸವಾಗುತ್ತಿದೆ: ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ
ತುಮಕೂರು,ಫೆ.01: ದೀಪ ಹಚ್ಚುವುದು ಕಷ್ಟ, ಆದರೆ ಬೆಂಕಿ ಹಚ್ಚುವುದು ಸುಲಭ. ಇಂದು ದೀಪ ಹಚ್ಚುವುದಕ್ಕಿಂತ, ಧರ್ಮ, ದೇವರು, ಜಾತಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಬರದಿಂದ ಸಾಗುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಜಿನ ಮನೆಯಲ್ಲಿ ಕಸಾಪ ಆಯೋಜಿಸಿದ್ದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತಿದ್ದ ಅವರು, ಅಧಿಕಾರಕ್ಕಾಗಿ ಜನರ ನಡುವೆ ದೇವರು, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವವರ ಬದಲಿಗೆ, ಸೋದರತೆ, ಭಾತೃತ್ವವೆಂಬ ಜ್ಞಾನದ ಹಣತೆಯನ್ನು ಹಚ್ಚುವ ಅಗತ್ಯವಿದೆ ಎಂದರು.
ಕನ್ನಡ ಭಾಷೆಯ ಬೆಳವಣಿಗೆಗೆ ಅನೇಕ ಜನ ಅನ್ಯಭಾಷಿಕರು ಕೆಲಸ ಮಾಡಿದ್ದಾರೆ. ಅವರಲ್ಲಿ ಪ್ರಮುಖರಾದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತೀನ, ಗೋವಿಂದ ಪೈ, ಡಿವಿಜಿ, ಡಿ.ಎಲ್. ರೈಸ್ ಹೀಗೆ ಹತ್ತು ಹಲವು ಜನರು ಕನ್ನಡ ಭಾಷೆಗಾಗಿ ದುಡಿದಿದ್ದಾರೆ. ಕನ್ನಡ ಭಾಷೆ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಕನ್ನಡವನ್ನು ಕಾಪಾಡುವ ಕೆಲಸ, ರಾಜಕಾರಣಿ ಗಳು, ಸಾಹಿತಿಗಳು,ಸಾರ್ವಜಕರಿಂದ ಆಗಬೇಕಾಗಿದೆ ಎಂದು ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನುಡಿದರು.
ಕಾರ್ಯಕ್ರಮದಲ್ಲಿ 13ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಕನ್ನಡ ದ್ವಜ ಹಸ್ತಾಂತರಿಸಿ ಮಾತನಾಡಿದ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಕೆ.ಬಿ.ಸಿದ್ದಯ್ಯ, ಧ್ವಜ ಅಧಿಕಾರಿದ ಸಂಕೇತವಾಗುತ್ತಿರುವುದು ದುರಾದೃಷ್ಟದ ಬೆಳವಣಿಗೆ. ಸಂವಿಧಾನಾತ್ಮಕ ವಾಗಿ ಒಪ್ಪಿಕೊಂಡ ತ್ರಿವರ್ಣ ಧ್ವಜದ ಎತ್ತರಕ್ಕೆ ಭಗವದ್ವಜ ಹಾರಾಟ ನಡೆಸಿ, ಅಧಿಕಾರದ ಕೇಂದ್ರವಾಗುತ್ತಿದ್ದು, ಈ ಬಗ್ಗೆ ನಾವು ಎಚ್ಚರಿಕೆ ಮತ್ತು ವಿವೇಕದಿಂದ ವರ್ತಿಸಬೇಕಾಗಿದೆ. ಧರ್ಮದ ಸಂಕೇತಗಳು ಅಧಿಕಾರದ ಕೇಂದ್ರ ಬಿಂದುಗಳಾದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರಲ್ಲದೆ, ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ನಾಡ ಧ್ವಜ ಸ್ಥಾಪನೆಯಾಗಬೇಕು. ಜಾತ್ಯಾತೀತರ ರಕ್ತ ಪರೀಕ್ಷೆಯಾಗಬೇಕು, ಅವರಿಗೆ ಅಪ್ಪ, ಅಮ್ಮ ಇಲ್ಲ ಎಂಬ ಸಚಿವರೊಬ್ಬರ ಹೇಳಿಕೆ ವಿರುದ್ಧ ಕನ್ನಡ ಮನಸ್ಸುಗಳು ಒಗ್ಗೂಡಿ ವಿರೋಧ ವ್ಯಕ್ತಪಡಿಸುವ ಅಗತ್ಯವಿದೆ ಎಂದರು.
ಸಮ್ಮೇಳನದಲ್ಲಿ ಊಟಕ್ಕಾಗಿ ಕಿತ್ತಾಟ: ಸಮ್ಮೇಳನ ನಡೆಯುವ ಗಾಜಿನ ಮನೆ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮ್ಮೇಳನಾಧ್ಯಕ್ಷ ಭಾಷಣ ಮುಗಿಯುತಿದ್ದಂತೆಯೇ ಎಲ್ಲರೂ ಒಟ್ಟಿಗೆ ಊಟಕ್ಕೆ ತೆರಳಿದ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ನಿಂತವರ ನಡುವೆ ತಳ್ಳಾಟ ನಡೆದು, ಮಧ್ಯೆ ಹಾಕಿದ್ದ ಬ್ಯಾರಿಕೇಡ್ ಮುರಿದಿದೆ. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ನಿರ್ಲಕ್ಷಕ್ಕೆ ಒಳಗಾದ ನಿಕಟಪೂರ್ವ ಕಸಾಪ ಅಧ್ಯಕ್ಷರುಗಳು: 13ನೇ ಜಿಲ್ಲಾ ಕಸಾಪ ಸಮ್ಮೇಳನ ಆಹ್ವಾನ ಪತ್ರಿಕೆಯಲ್ಲಾಗಲಿ, ಸಾಹಿತ್ಯ ಪರಿಷತ್ತಿನಿಂದ ಹಾಕಲಾಗಿದ್ದ ಪ್ಲೆಕ್ಸ್ ಗಳಲ್ಲಾಗಲಿ ಈ ಹಿಂದಿನ ಕಸಾಪ ಅಧ್ಯಕ್ಷರ ಹೆಸರುಗಳು ಕಾಣಿಸಲಿಲ್ಲ. ಡಾ.ಸೋ. ಮು.ಭಾಸ್ಕರಾಚಾರ್, ಪ್ರೊ.ಡಿ.ಚಂದ್ರಪ್ಪ ಸೇರಿದಂತೆ ಯಾರೊಬ್ಬರ ಹೆಸರು ಕೂಡಾ ಅಹ್ವಾನ ಪತ್ರಿಕೆಯಲ್ಲಿ ಇರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.