ದಾವಣಗೆರೆ: ಜಿಲ್ಲಾ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನ ಸಮಾರಂಭ
ದಾವಣಗೆರೆ,ಫೆ.04: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪರಿಸರ ಅಸಮತೋಲನದಿಂದ ಜನ ಜೀವನ ಅಸ್ತವ್ಯಸ್ತವಾಗುತ್ತಿದ್ದು, ನಾವುಗಳು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಎಚ್ಚರಿಸಿದರು.
ನಗರದ ಡಿಆರ್ಆರ್ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಪರಿಸರ ಸಂರಕ್ಷಣಾ ವೇದಿಕೆ, ಜೆ.ಎಚ್.ಪಟೇಲ್ ಕಾಲೇಜ್, ಅಮೃತ ಯುವಕರ ಸಂಘದ ವತಿಯಿಂದ ಜಿಲ್ಲಾ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ಡಿಆರ್ಆರ್ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ಆರ್. ಶ್ರೀನಿವಾಸಮೂರ್ತಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಸನ್ಮಾನ ಮಾಡಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಮಾತನಾಡಿದ ಶಾಸಕರು, ಶಾಲೆಯ ಹಿಂಭಾಗದಲ್ಲಿ ದೊಡ್ಡ ಚರಂಡಿ ಸರಿಪಡಿಸುವುದು ಸೇರಿದಂತೆ ನಗರದಲ್ಲಿ ಒಳಚರಂಡಿ ಮತ್ತು ದೊಡ್ಡ ಚರಂಡಿಗೆ ಪೈಪ್ಲೈನ್ ಹಾಕುವುದಕ್ಕೆ ಸುಮಾರು 63 ಕೋಟಿ ರೂ. ಟೆಂಡರ್ ನೀಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಳೆ ಬಂದರೂ ಯಾವುದೇ ರೀತಿ ಸಮಸ್ಯೆಯಾಗುವುದಿಲ್ಲ ಎಂದರು.
ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಬಿ.ಇ.ರಂಗಸ್ವಾಮಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಮಾತನಾಡಿದರು.
ಈ ಸಂದರ್ಭ 2017-18ನೇ ಸಾಲಿನ ಪರಿಸರ ಮಿತ್ರ ಶಾಲಾ ಪ್ರಶಸ್ತಿಗೆ ಆಯ್ಕೆಯಾದ 22 ಶಾಲೆಗೂ ಪ್ರಶಸ್ತಿ ನೀಡಲಾಯಿತು.
ಪರಿಸರ ಸಂರಕ್ಷಣಾ ಅಧ್ಯಕ್ಷ ಗಿರೀಶ್ ಎಸ್.ದೇವರಮನಿ, ಜೆಎಚ್ ಪಟೇಲ್ ಕಾಲೇಜ್ ಕಾರ್ಯದರ್ಶಿ ದೊಗ್ಗಳ್ಳಿ ಗೌಡ್ರು ಪುಟ್ಟರಾಜು, ಲಕ್ಷ್ಮೀದೇವಿ, ಪುಷ್ಪಾವತಿ, ಅಮೃತ ಯುವಕ ಸಂಘ ಆರ್.ಬಿ. ಹನುಮಂತಪ್ಪ, ಪರಿಸರ ಅಧಿಕಾರಿ ಗಣೇಶ್ ಹಗ್ಡೆ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಭೋಜರಾಜ್, ಹೇಮಾವತಿ ಬಿ.ಸಾವಳಿಗಿ ಹಾಜರಿದ್ದರು.